ಕೆಎಎಸ್ ಪ್ರಚಲಿತ ವಿದ್ಯಮಾನಗಳು
ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಒಡಿಶಾದಲ್ಲಿ 2028ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್
ಸಂದರ್ಭ: ಭಾರತವು 2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಲಿದೆ. ಭುವನೇಶ್ವರದಲ್ಲಿ ಈ ಪ್ರತಿಷ್ಠಿತ ಕೂಟ ನಡೆಯಲಿದೆ.
- ‘2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ ಅನ್ನು ಒಡಿಶಾ ಆಯೋಜಿಸುತ್ತಿದೆ.
- ಭಾರತದಲ್ಲಿ ಮೊದಲ ಸಲ ಚಾಂಪಿಯನ್ಷಿಪ್ನ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು 2028ರ ಮಾರ್ಚ್ 3 ರಿಂದ 5ರವರೆಗೆ ಆಯೋಜನೆಯಾಗಲಿವೆ. ಮೂರು ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ 13ರಂತೆ ಒಟ್ಟು 26 ಸ್ಪರ್ಧೆಗಳನ್ನು ಒಳಗೊಂಡಿರುತ್ತವೆ.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಕರ್ನಾಟಕದ ಪ್ರಮುಖ ಯೋಜನೆಗಳ ಸಮಗ್ರ ಮಾಹಿತಿ
| ಯೋಜನೆಯ ಹೆಸರು | ಉದ್ದೇಶ ಮತ್ತು ಗುರಿ | ಪ್ರಮುಖ ಸವಾಲುಗಳು ಮತ್ತು ವಿರೋಧಕ್ಕೆ ಕಾರಣಗಳು | ಆರ್ಥಿಕ ಮತ್ತು ಇತರ ವಿವರಗಳು |
| ಎತ್ತಿನಹೊಳೆ ಯೋಜನೆ | ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ. | ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಹಾನಿ. ನದಿಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಜ್ಞರ ಆತಂಕ. | ಆರಂಭಿಕ ಅಂದಾಜು ₹8,323 ಕೋಟಿ. ಪ್ರಸ್ತುತ ವೆಚ್ಚ ₹23,000 ಕೋಟಿಗೂ ಅಧಿಕ. |
| ಶರಾವತಿ ಪಂಪ್ ಸ್ಟೋರೇಜ್ | 2,000 ಮೆಗಾವಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆ. | ಲಿಂಗನಮಕ್ಕಿ-ಗೇರುಸೊಪ್ಪ ನಡುವೆ ಸುರಂಗ ಮಾರ್ಗದಿಂದ ಅರಣ್ಯ ನಾಶ. ಸಿಂಹಬಾಲದ ಸಿಂಗಳೀಕದ ವಾಸಸ್ಥಳಕ್ಕೆ ಧಕ್ಕೆ. | ಕೆಪಿಸಿಎಲ್ (KPCL) ಮೂಲಕ ಅನುಷ್ಠಾನ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು. |
| ಚಾಮುಂಡಿಬೆಟ್ಟ ರೋಪವೇ | ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಭಕ್ತರ ಸುಲಭ ಸಂಚಾರ. | ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೆ ಹಾನಿ ಮತ್ತು ಭೂಕುಸಿತದ ಭೀತಿ. ಪರಿಸರವಾದಿಗಳಿಂದ ತೀವ್ರ ಪ್ರತಿರೋಧ. | ಕೇಂದ್ರ ಸರ್ಕಾರದ ‘ಪರ್ವತಮಾಲಾ’ ಯೋಜನೆಯಡಿ ಅನುಷ್ಠಾನ. |
| ಕಳಸಾ-ಬಂಡೂರಿ ಯೋಜನೆ | ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ. | ಗೋವಾ ಸರ್ಕಾರದ ವಿರೋಧ ಮತ್ತು ಪರಿಸರ ಅನುಮತಿ ಪಡೆಯುವಲ್ಲಿ ವಿಳಂಬ. ಅರಣ್ಯ ಪ್ರದೇಶದ ಮುಳುಗಡೆ. | ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಯೋಜನೆ. |
| ನಂದಿಬೆಟ್ಟ ರೋಪವೇ | ಪ್ರವಾಸೋದ್ಯಮ ಉತ್ತೇಜನ ಮತ್ತು ಬೆಟ್ಟಕ್ಕೆ ಪರ್ಯಾಯ ಸಂಚಾರ. | ಯೋಜನೆಗೆ ತಗುಲುವ ವೆಚ್ಚ ಅಧಿಕ ಮತ್ತು ಪರಿಸರ ಸಮತೋಲನದಲ್ಲಿ ವ್ಯತ್ಯಯ. | ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ₹97.3 ಕೋಟಿ ಮೊತ್ತದ ಯೋಜನೆ. |
| ಆಗುಂಬೆ ಘಟ್ಟದ ಸುರಂಗ | ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದ ನಡುವಿನ ಸುಗಮ ಸಂಚಾರ. | ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹಾನಿ ಮತ್ತು ಅಂತರ್ಜಲ ವ್ಯವಸ್ಥೆ ಏರುಪೇರಾಗುವ ಆತಂಕ. | ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು 3.1 ಕಿ.ಮೀ ಉದ್ದದ ಸುರಂಗ ಮಾರ್ಗ. |
| ಕೆ.ಆರ್.ಎಸ್. ‘ಕಾವೇರಿ’ ಆರತಿ | ಹರಿದ್ವಾರದ ಮಾದರಿಯಲ್ಲಿ ಪ್ರವಾಸಿಗರ ಆಕರ್ಷಣೆ ಮತ್ತು ನದಿ ಆರತಿ. | ನದಿಯ ನೈಸರ್ಗಿಕ ಹರಿವಿಗೆ ಅಡ್ಡಿ ಮತ್ತು ನದಿ ಪಾತ್ರದಲ್ಲಿ ಕಾಂಕ್ರೀಟ್ ಕಾಮಗಾರಿಗಳ ವಿರೋಧ. | ಸುಮಾರು ₹40 ಕೋಟಿ ವೆಚ್ಚದ ಯೋಜನೆ. |
| ಗಣಿಗಾಜಿ ಕಾಡು (ಕಟ್ಟೆಹೊಳೆ) | ಉತ್ತರ ಕನ್ನಡದ ಕುಮಟಾ ಬಳಿ ಉದ್ಯಾನವನ ಅಥವಾ ಪ್ರವಾಸೋದ್ಯಮ ಅಭಿವೃದ್ಧಿ. | ಮೀಸಲು ಅರಣ್ಯ ಪ್ರದೇಶದ ನಾಶಕ್ಕೆ ಸ್ಥಳೀಯ ಪರಿಸರ ಸಂಘಟನೆಗಳ ತೀವ್ರ ಪ್ರತಿರೋಧ. | ಸುಮಾರು 470.4 ಎಕರೆ ಅರಣ್ಯ ಪ್ರದೇಶದ ಮೇಲೆ ಪ್ರಭಾವ. |
1. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ
ಇದು ಕರ್ನಾಟಕದ ಅತಿದೊಡ್ಡ ಮತ್ತು ಅತ್ಯಂತ ವಿವಾದಿತ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾಗಿದೆ.
ವಿವರ: ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ ಸೇರಿದಂತೆ ಎಂಟು ಪಶ್ಚಿಮಕ್ಕೆ ಹರಿಯುವ ಹೊಳೆಗಳ ನೀರನ್ನು ಪೂರ್ವಕ್ಕೆ ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ನೀಡುವುದು ಇದರ ಗುರಿ.
ವಿಸ್ತಾರ: ಸುಮಾರು 24.01 ಟಿ.ಎಂ.ಸಿ. ನೀರನ್ನು ಎತ್ತುವ ಗುರಿ ಹೊಂದಲಾಗಿದೆ.
ಸವಾಲುಗಳು: * ನೀರಿನ ಲಭ್ಯತೆ: ತಜ್ಞರ ವರದಿಯ ಪ್ರಕಾರ ಅಲ್ಲಿ ಅಷ್ಟು ನೀರು ಲಭ್ಯವಿಲ್ಲ ಎಂಬ ವಾದವಿದೆ.
ವೆಚ್ಚ: ಆರಂಭದಲ್ಲಿ ₹8,323 ಕೋಟಿ ಅಂದಾಜಿಸಲಾಗಿದ್ದ ವೆಚ್ಚ ಈಗ ₹23,000 ಕೋಟಿ ದಾಟಿದೆ.
ಪರಿಸರ ನಾಶ: ಪೈಪ್ಲೈನ್ ಅಳವಡಿಸಲು ಸಾವಿರಾರು ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತಿದೆ.
2. ಶರಾವತಿ ಪಂಪ್ ಸ್ಟೋರೇಜ್ ಯೋಜನೆ
ಇದು ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ರೂಪಿಸಲಾದ ಆಧುನಿಕ ತಂತ್ರಜ್ಞಾನದ ಯೋಜನೆಯಾಗಿದೆ.
ವಿವರ: ಲಿಂಗನಮಕ್ಕಿ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಮಾಡಿ, ವಿದ್ಯುತ್ ಬೇಡಿಕೆ ಹೆಚ್ಚಿದ್ದಾಗ ನೀರನ್ನು ಬಳಸಿ ವಿದ್ಯುತ್ ತಯಾರಿಸುವುದು ಮತ್ತು ಬೇಡಿಕೆ ಕಡಿಮೆ ಇದ್ದಾಗ ಅದೇ ನೀರನ್ನು ಮತ್ತೆ ಮೇಲಿನ ಜಲಾಶಯಕ್ಕೆ ಪಂಪ್ ಮಾಡುವುದು ಇದರ ಉದ್ದೇಶ.
ಸಾಮರ್ಥ್ಯ: 2,000 ಮೆಗಾವಾಟ್.
ವಿರೋಧ: ಶರಾವತಿ ಕಣಿವೆಯು ಅತಿ ಸೂಕ್ಷ್ಮ ಪರಿಸರ ವಲಯವಾಗಿದೆ. ಸುರಂಗ ಮಾರ್ಗಕ್ಕಾಗಿ ಅರಣ್ಯ ನಾಶವಾಗುವುದರಿಂದ ಇಲ್ಲಿ ಮಾತ್ರ ಕಂಡುಬರುವ ಸಿಂಹಬಾಲದ ಸಿಂಗಳೀಕ (Lion-tailed Macaque) ಸೇರಿದಂತೆ ಅಪರೂಪದ ಪ್ರಾಣಿ ಸಂಕುಲಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕವಿದೆ.
3. ಚಾಮುಂಡಿಬೆಟ್ಟ ಮತ್ತು ನಂದಿಬೆಟ್ಟ ರೋಪವೇ ಯೋಜನೆಗಳು
ಈ ಯೋಜನೆಗಳು ಧಾರ್ಮಿಕ ಮತ್ತು ಪ್ರಕೃತಿ ಪ್ರವಾಸೋದ್ಯಮವನ್ನು ಆಧರಿಸಿವೆ.
ಚಾಮುಂಡಿಬೆಟ್ಟ: ಮೈಸೂರಿನ ಪಾರಂಪರಿಕ ಶ್ರೇಷ್ಠತೆಯನ್ನು ಕಾಪಾಡಲು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗಲು ರೋಪವೇ ಪ್ರಸ್ತಾಪಿಸಲಾಗಿದೆ. ಆದರೆ, ಬೆಟ್ಟದಲ್ಲಿ ಈಗಾಗಲೇ ಭೂಕುಸಿತ ಸಂಭವಿಸುತ್ತಿರುವುದರಿಂದ ಕಾಂಕ್ರೀಟ್ ಕಾಮಗಾರಿಗಳು ಬೆಟ್ಟದ ಸ್ಥಿರತೆಯನ್ನು ಹಾಳುಮಾಡುತ್ತವೆ ಎಂದು ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ.
ನಂದಿಬೆಟ್ಟ: ಬೆಂಗಳೂರಿಗೆ ಹತ್ತಿರವಿರುವ ಈ ಪ್ರವಾಸಿ ತಾಣದಲ್ಲಿ ಟ್ರಾಫಿಕ್ ಕಡಿಮೆ ಮಾಡಲು ರೋಪವೇ ಯೋಜನೆಯನ್ನು ಪಿಪಿಪಿ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.
4. ಕಳಸಾ-ಬಂಡೂರಿ ನಾಲಾ ಯೋಜನೆ
ಇದು ಉತ್ತರ ಕರ್ನಾಟಕದ ಜನರ ದಶಕಗಳ ಕಾಲದ ಬೇಡಿಕೆಯಾಗಿದೆ.
ವಿವರ: ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನಾಲಾಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ನೀರು ಒದಗಿಸುವುದು.
ಸವಾಲುಗಳು: ಗೋವಾ ಸರ್ಕಾರದ ಕಾನೂನು ಹೋರಾಟ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರೆಯಲು ಆಗುತ್ತಿರುವ ವಿಳಂಬ. ಈ ಯೋಜನೆಯು ಅರಣ್ಯ ಪ್ರದೇಶದ ಮುಳುಗಡೆಗೆ ಕಾರಣವಾಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಾರೆ.
5. ಕೆ.ಆರ್.ಎಸ್. ‘ಕಾವೇರಿ’ ಆರತಿ
ವಿವರ: ವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಕೆಳಭಾಗದಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ವೇದಿಕೆ ಮತ್ತು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವುದು.
ವಿರೋಧ: ನದಿ ಪಾತ್ರದಲ್ಲಿ ಕಾಂಕ್ರೀಟ್ ನಿರ್ಮಾಣ ಮಾಡುವುದರಿಂದ ನೈಸರ್ಗಿಕ ಹರಿವಿಗೆ ಅಡ್ಡಿಯಾಗುತ್ತದೆ ಮತ್ತು ನದಿ ಕಲುಷಿತಗೊಳ್ಳಬಹುದು ಎಂಬ ಭಯವಿದೆ.
6. ಆಗುಂಬೆ ಘಟ್ಟದ ಸುರಂಗ ಮಾರ್ಗ
ವಿವರ: ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಆಗುಂಬೆ ಘಟ್ಟದ ಹದಿನೆಂಟು ಹೇರ್ಪಿನ್ ತಿರುವುಗಳ ಸಂಚಾರ ಕಷ್ಟಕರವಾಗಿರುವುದರಿಂದ, ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವಿದು.
ಸವಾಲು: ಆಗುಂಬೆಯು ‘ದಕ್ಷಿಣದ ಚಿರಪುಂಜಿ’ ಎಂದೇ ಖ್ಯಾತವಾಗಿದ್ದು, ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ಸುರಂಗ ಕೊರೆಯುವುದರಿಂದ ಅಂತರ್ಜಲ ವ್ಯವಸ್ಥೆ ಏರುಪೇರಾಗಬಹುದು ಮತ್ತು ಘಟ್ಟದ ಸಾಲಿನ ಜೀವವೈವಿಧ್ಯಕ್ಕೆ ದೊಡ್ಡ ಕೊಡಲಿ ಪೆಟ್ಟು ಬೀಳಬಹುದು.
7. ಗಣಿಗಾಜಿ ಕಾಡು ನಾಶ (ಕಟ್ಟೆಹೊಳೆ)
ವಿವರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿಯ ಸುಂದರ ಅರಣ್ಯ ಪ್ರದೇಶದಲ್ಲಿ ಪ್ರವಾಸೋದ್ಯಮ ಅಥವಾ ಸೌರ ವಿದ್ಯುತ್ ಯೋಜನೆಯಂತಹ ಕಾರ್ಯಕ್ರಮಗಳಿಗೆ ತಯಾರಿ ನಡೆಸಲಾಗುತ್ತಿದೆ.
ಸವಾಲು: ಇದು ಮೀಸಲು ಅರಣ್ಯವಾಗಿದ್ದು, ಇಲ್ಲಿನ ಕಾಡನ್ನು ಕಡಿಯುವುದು ಪರಿಸರ ಸಮತೋಲನಕ್ಕೆ ಧಕ್ಕೆ ತರುತ್ತದೆ ಎಂದು ಸ್ಥಳೀಯ ಪರಿಸರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ತೀರ್ಮಾನ:
ಈ ಎಲ್ಲಾ ಯೋಜನೆಗಳು ಒಂದೆಡೆ ಆರ್ಥಿಕ ಪ್ರಗತಿ ಮತ್ತು ಸೌಲಭ್ಯಗಳನ್ನು ನೀಡಿದರೆ, ಇನ್ನೊಂದೆಡೆ ಪರಿಸರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ, ಪರಿಸರ ಪ್ರಭಾವದ ಮೌಲ್ಯಮಾಪನ (EIA) ವನ್ನು ವೈಜ್ಞಾನಿಕವಾಗಿ ನಡೆಸಿ, ಸುಸ್ಥಿರ ಅಭಿವೃದ್ಧಿಯ ಹಾದಿಯನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
https://l.facebook.com/l.php?u=https%3A%2F%2Fwww.prajavani.net%2Fexplainer%2Fdetail%2Fwestern-ghats-development-projects-environmental-concerns-karnataka-3847539&h=AT6F0ezEWUmjv7baH-9E96LF0_NZbDzMT3xkWTkQ8DHb3XXzmu_cDSMwBYHY6AKY8hlPGeh8UCb11WxtzKWfpRqra9y2i3neLohAAVjTli3L6UDoxMWwRVt6lWnb38hwSbTAowWmcTBIO9epUyVZk1A7ZPAkXNs8&tn=R*F
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಜಾಗತಿಕ ಹವಾಮಾನ ಬದಲಾವಣೆಯು ಕೇವಲ ಅಂತರಾಷ್ಟ್ರೀಯ ವೇದಿಕೆಗಳ ಚರ್ಚೆಯ ವಿಷಯವಾಗಿ ಉಳಿಯದೆ, ಇಂದು ಸಾಮಾನ್ಯ ರೈತನ ಹೊಲದ ಬುಡಕ್ಕೆ ಬಂದು ನಿಂತಿದೆ. ಕರ್ನಾಟಕದ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳು ಮತ್ತು ಇದನ್ನು ಎದುರಿಸಲು ಬೇಕಾದ ಸುಸ್ಥಿರ ಕ್ರಮಗಳನ್ನು ಚರ್ಚಿಸಿ.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ನವ ಕರ್ನಾಟಕದ ಅಭಿವೃದ್ಧಿ ಮಂತ್ರ ಮತ್ತು ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ: ಶಕ್ತಿ, ಜಲ ಮತ್ತು ಪ್ರವಾಸೋದ್ಯಮ ಯೋಜನೆಗಳ ನಡುವಿನ ಸಂಘರ್ಷ ಹಾಗೂ ಸುಸ್ಥಿರ ಸಮತೋಲನದ ಅನಿವಾರ್ಯತೆ.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆಯ ನಿಯಮಗಳು ಜಾರಿ: ಐ.ಟಿ ಕಾಯ್ದೆ : ಅಧಿಸೂಚನೆ ಪ್ರಕಟ
ಸಂದರ್ಭ: ಆದಾಯ ತೆರಿಗೆ ಕಾಯ್ದೆ-2026ರ ಅನುಷ್ಠಾನಕ್ಕೆ ಅಗತ್ಯವಿರುವ ನಿಯಮಗಳ ಅಧಿಸೂಚನೆಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಪ್ರಕಟಿಸಿದೆ.
- ಈ ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ.
- ಬ್ಯಾಂಕ್ಗಳಲ್ಲಿ ನಗದು ಠೇವಣೆ ಮಾಡುವುದು/ ಹಿಂಪಡೆಯುವಿಕೆ, ಮೋಟಾರು ವಾಹನಗಳು ಹಾಗೂ ಆಸ್ತಿ ಖರೀದಿ ಮತ್ತು ಹೋಟೆಲ್ ಬಿಲ್ಗಳ ಪಾವತಿಗಾಗಿ ಪ್ಯಾನ್ ಉಲ್ಲೇಖಿಸಿ ನಡೆಸಬಹುದಾದ ವಹಿವಾಟು ಮಿತಿಯನ್ನು ಹೊಸ ಕಾಯ್ದೆಯು ಹೆಚ್ಚಿಸಿದೆ.
- ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ (ಐ.ಟಿ) ಕಾಯ್ದೆಯನ್ನು ಬದಲಿಸಲು, ಸಂಸತ್ತು 2025ರ ಆಗಸ್ಟ್ 12ರಂದು ಹೊಸ ಆದಾಯ ತೆರಿಗೆ ಮಸೂದೆಗೆ ಅಂಗೀಕಾರ ನೀಡಿತ್ತು. ಆಗಸ್ಟ್ 21ರಂದು ರಾಷ್ಟ್ರಪತಿಯವರು ಈ ಮಸೂದೆಗೆ ಅಂಕಿತ ಹಾಕಿದ ಬಳಿಕ ಇದು ಕಾಯ್ದೆಯಾಯಿತು.
- ಇದು ಯಾವುದೇ ಹೊಸ ತೆರಿಗೆ ದರವನ್ನು ವಿಧಿಸುವುದಿಲ್ಲ ಸಂಕೀರ್ಣವಾಗಿರುವ ಹಳೆಯ ಆದಾಯ ತೆರಿಗೆ ಕಾಯ್ದೆಯ ಭಾಷೆಯು, ತೆರಿಗೆದಾರರಿಗೆ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ಭಾಷೆಯನ್ನು ಸರಳೀಕರಿಸಲಾಗಿದೆ.
- ಹಳೆಯ ಕಾಯ್ದೆಯಲ್ಲಿದ್ದ ಅನಗತ್ಯ ನಿಬಂಧನೆಗಳು ಮತ್ತು ಸಂಕೀರ್ಣ ಭಾಷೆಯನ್ನು ಹೊಸ ಕಾಯ್ದೆಯು ತೆಗೆದುಹಾಕಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 819 ಸೆಕ್ಷನ್ಗಳಿದ್ದವು. ಅದು ಈಗ 536ಕ್ಕೆ ಇಳಿದಿದೆ. ಅಧ್ಯಾಯಗಳು ಸಹ 47ರಿಂದ 23ಕ್ಕೆ ಇಳಿದಿವೆ. ಹಳೆಯ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿದ್ದವು. ಅವು ಈಗ 2.6 ಲಕ್ಷಕ್ಕೆ ಕಡಿಮೆ ಆಗಿವೆ. ಕಾಯ್ದೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮೂಡಿಸಲು ಇದೇ ಮೊದಲ ಬಾರಿಗೆ 39 ಹೊಸ ಕೋಷ್ಟಕಗಳು ಮತ್ತು 40 ಹೊಸ ಸೂತ್ರಗಳನ್ನು ಪರಿಚಯಿಸಲಾಗಿದೆ.
- ಹೊಸ ನಿಯಮಗಳು ಬಂಡವಾಳ ಗಳಿಕೆ, ಷೇರುಪೇಟೆ ವಿನಿಮಯ ವಹಿವಾಟುಗಳು ಮತ್ತು ಎನ್ಆರ್ಐಗಳ ತೆರಿಗೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಹೊಂದಿವೆ.
- ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ವಿನಾಯಿತಿ ಲೆಕ್ಕ ಹಾಕುವಾಗ ಪ್ರಸ್ತುತ ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ವೇತನದಾರರು ತಮ್ಮ ಸಂಬಳದ ಶೇ 50ರಷ್ಟು ವಿನಾಯಿತಿ ಪಡೆಯಲು ಅವಕಾಶ ಇದೆ.
- ಇದೀಗ ಹೊಸ ನಿಯಮಗಳಡಿ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ನಲ್ಲಿನ ವೇತನ ಪಡೆಯುವ ಉದ್ಯೋಗಿಗಳಿಗೂ ಸಹ ಈ ಪ್ರಯೋಜನ ದೊರೆಯಲಿದೆ ಉಳಿದ ಪ್ರದೇಶದಲ್ಲಿನ ವೇತನದಾರರು ಶೇ 40ರಷ್ಟು ಮಿತಿಗೆ ಅರ್ಹರಾಗಿದ್ದಾರೆ, ಆದಾಯ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಬಾಡಿಗೆದಾರ-ಭೂಮಾಲೀಕರ ಸಂಬಂಧವನ್ನು ಬಹಿರಂಗಪಡಿಸುವುದು ಕಡ್ಡಾಯ ವಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
- 50 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡುವಾಗಲೆಲ್ಲ ಪ್ಯಾನ್ ಸಂಖ್ಯೆ ಉಲ್ಲೇಖಿಸುವ ಬದಲು, ವ್ಯಕ್ತಿಯೊಬ್ಬನ ಕಡೆಯಿಂದ ಆಗುವ ವಾರ್ಷಿಕ ಒಟ್ಟು ಜಮೆ ಮೊತ್ತ ಅಥವಾ ಹಣ ಹಿಂಪಡೆಯುವ ಮೊತ್ತವು ₹10 ಲಕ್ಷ ಮೀರಿದ್ದರೆ ಮಾತ್ರ ಪ್ಯಾನ್ ಉಲ್ಲೇಖ ಕಡ್ಡಾಯ ಎಂದು ಹೇಳಲಾಗಿದೆ.
- ಕ್ರಿಪ್ರೊ ವಿನಿಮಯ ಕೇಂದ್ರಗಳು ತಮ್ಮಲ್ಲಿನ ಕೆಲವು ಮಾಹಿತಿಗಳನ್ನು ತೆರಿಗೆ ಇಲಾಖೆಯ ಜೊತೆ ಹಂಚಿಕೊಳ್ಳುವುದು ಕಡ್ಡಾಯ ಎಂದು ನಿಯಮಗಳಲ್ಲಿ ಹೇಳಲಾಗಿದೆ ಅಲ್ಲದೆ, ಕೇಂದ್ರೀಯ ಬ್ಯಾಂಕ್ನ ಡಿಜಿಟಲ್ ಕರೆನ್ಸಿಯು (ಸಿಬಿಡಿಸಿ) ಒಪ್ಪಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಲ್ಲಿ ಒಂದು ಎಂದು ಹೇಳಿದೆ.
- ದ್ವಿಚಕ್ರ ವಾಹನ ಸೇರಿದಂತೆ ₹5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಮೋಟಾರು ವಾಹನ ಖರೀದಿಸುವಾಗ ಪ್ಯಾನ್ ಉಲ್ಲೇಖಿಸುವುದು ಕಡ್ಡಾಯ ಆಗುತ್ತದೆ.
- ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ ಮೊತ್ತ ಸಭಾಭವನಗಳಿಗೆ ಅಥವಾ ಬ್ಯಾಂಕ್ಷೆಟ್ ಹಾಲ್ಗಳಿಗೆ ಅಥವಾ ಕಾರ್ಯಕ್ರಮ ನಿರ್ವಹಣೆ ಮಾಡುವ ವ್ಯಕ್ತಿಗೆ ಮಾಡುವ ಪಾವತಿ ಮೊತ್ತ ₹1 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆ ನಮೂದು ಕಡ್ಡಾಯ ಆಗಲಿದೆ.
- ಈಗಿರುವ ನಿಯಮಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್ ಶುಲ್ಕವು ₹50 ಸಾವಿರಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆಉಲ್ಲೇಖಿಸಬೇಕಾಗುತ್ತದೆ.
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಶರಾವತಿ ಪಂಪ್ ಸ್ಟೋರೇಜ್ ಘಟಕ ವಿವರಣೆ ಕೇಳಿದ ವನ್ಯಜೀವಿ ಮಂಡಳಿ
ಸಂದರ್ಭ: ಎರಡು ಸಾವಿರ ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ ಸ್ಕೋರೇಜ್ ಘಟಕದ ಬಗ್ಗೆ ಹೆಚ್ಚುವರಿ ಮಾಹಿತಿ ಹಾಗೂ ವಿವರಣೆ ಒದಗಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
- ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 89ನೇ ಸಭೆಯಲ್ಲಿ ವನ್ಯಜೀವಿ ಅನುಮೋದನೆಯ ಈ ಪ್ರಸ್ತಾವವನ್ನು ಮುಂದೂಡಲು ತೀರ್ಮಾನಿಸಲಾಯಿತು.
- ಯೋಜನೆಯಿಂದ ವಿದ್ಯುತ್ ಲಭ್ಯತೆಯ ಹೆಚ್ಚಳದ ಬಗ್ಗೆ ವಿವರವಾದ ಸಮರ್ಥನೆಯನ್ನು ರಾಜ್ಯ ಸರ್ಕಾರ ಒದಗಿಸಬೇಕು. ಸಂರಕ್ಷಿತ ಪ್ರದೇಶದ ಹೊರಗೆ ವಿದ್ಯುತ್ ಸಂಗ್ರಹದ ಪರ್ಯಾಯ ತಂತ್ರಜ್ಞಾನಗಳನ್ನು ಪರಿಶೀಲಿಸಬೇಕು. ಪ್ರಸ್ತಾವದ ಬಗ್ಗೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಿಂದ ಅಭಿಪ್ರಾಯ ಪಡೆದು ಸಲ್ಲಿಸಬೇಕು ಎಂದು ಸ್ಥಾಯಿ ಸಮಿತಿ ಸೂಚಿಸಿದೆ.
- ಪಂಚ್ ಸ್ಟೋರೇಜ್ ಯೋಜನೆಯ ಪ್ರಸ್ತಾವ ಬಗ್ಗೆ, 2025ರ ಜೂನ್ 26ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ ಚರ್ಚಿಸಲಾಗಿತ್ತು ಷರತ್ತುಗಳನ್ನು ವಿಧಿಸಿ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.
- ಆಗಸ್ಟ್ 19ರಂದು ನಡೆದ ಸ್ಥಾಯಿ ಸಮಿತಿಯ 85ನೇ ಸಭೆಯಲ್ಲಿ ಪ್ರಸ್ತಾವವನ್ನು ಮರು ಪರಿಶೀಲಿಸಲಾಗಿತ್ತು ಪಶ್ಚಿಮ ಘಟ್ಟದಲ್ಲಿ ಜಾರಿಗೊಳ್ಳಲಿರುವ ಈ ಯೋಜನೆ ಬಗ್ಗೆ, ಕೆಲವು ಸದಸ್ಯರು ತೀವು ಶ್ರೀ ಕಳವಳ ವ್ಯಕ್ತಪಡಿಸಿದ್ದರು.
- ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಳ್ಳಲು ತೀರ್ಮಾನಿಸಲಾಗಿತ್ತು ‘ಯೋಜನೆಯ ಪ್ರಸ್ತಾವವು ತಾಂತ್ರಿಕ ಅರ್ಹತೆ, ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ’ ಎಂದು ಸಮಿತಿ ಇತ್ತೀಚೆಗೆ ವರದಿ ಸಲ್ಲಿಸಿತ್ತು.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ 2,000 ಮೆಗಾವಾಟ್ ಸಾಮರ್ಥ್ಯದ ಹೈಡ್ರೋಎಲೆಕ್ಟ್ರಿಕ್ ಯೋಜನೆಯಾಗಿದೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ-–ವಿವರಗಳು
| ಅಂಶ | ವಿವರಗಳು |
| ಯೋಜನೆಯ ಹೆಸರು | ಶರಾವತಿ ಪಂಪ್ ಸ್ಟೋರೇಜ್ ಹೈಡ್ರೋಎಲೆಕ್ಟ್ರಿಕ್ ಯೋಜನೆ |
| ಸ್ಥಳ | ಶರಾವತಿ ಕಣಿವೆ, ಶಿವಮೊಗ್ಗ ಜಿಲ್ಲೆ, ಕರ್ನಾಟಕ (ಪಶ್ಚಿಮ ಘಟ್ಟಗಳು) |
| ಒಟ್ಟು ಸಾಮರ್ಥ್ಯ | 2,000 ಮೆಗಾವಾಟ್ (MW) |
| ತಂತ್ರಜ್ಞಾನ | ಪಂಪ್ ಸ್ಟೋರೇಜ್ ಹೈಡ್ರೋಎಲೆಕ್ಟ್ರಿಕ್ ಪ್ಲಾಂಟ್ (PSP) |
| ನಿರ್ವಹಣೆ/ಮಾಲೀಕತ್ವ | ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) |
| ಯೋಜಿತ ಚಾಲನೆ ವರ್ಷ | 2029 |
| ಜಲಾಶಯಗಳ ಬಳಕೆ | ಮೇಲಿನ ಜಲಾಶಯ: ತಲಕಳಲೆ ಅಣೆಕಟ್ಟು ಕೆಳಗಿನ ಜಲಾಶಯ: ಗೇರುಸೊಪ್ಪ ಅಣೆಕಟ್ಟು |
| ತಾಂತ್ರಿಕ ಸೌಲಭ್ಯ | 14 ಕಿಲೋಮೀಟರ್ ಉದ್ದದ ಬೃಹತ್ ಭೂಗರ್ಭ ಸುರಂಗಗಳು |
| ಅಂದಾಜು ವೆಚ್ಚ | ₹10,000 ಕೋಟಿಗೂ ಅಧಿಕ |
| ಭೂಮಿಯ ಅಗತ್ಯತೆ | ಒಟ್ಟು 153 ಹೆಕ್ಟೇರ್ (ಇದರಲ್ಲಿ 140 ಹೆಕ್ಟೇರ್ ದಟ್ಟ ಅರಣ್ಯ ಪ್ರದೇಶ) |
ಪರಿಸರ ಸವಾಲುಗಳು ಮತ್ತು ಪ್ರಸ್ತುತ ಸ್ಥಿತಿ
| ಅಂಶ | ವಿವರಣೆ |
| ಪರಿಸರ ಕಳವಳಗಳು | ಸಿಂಹಬಾಲದ ಸಿಂಗಳೀಕ (LTM) ಅಭಯಾರಣ್ಯಕ್ಕೆ ಹಾನಿ, ಜೀವವೈವಿಧ್ಯದ ನಾಶ ಮತ್ತು ವನ್ಯಜೀವಿಗಳ ಸಂಚಾರ ಮಾರ್ಗಕ್ಕೆ ಅಡ್ಡಿ. |
| ಅರಣ್ಯ ಇಲಾಖೆ ಆಕ್ಷೇಪ | ಸೂಕ್ಷ್ಮ ಪರಿಸರ ವಲಯದಲ್ಲಿ ಬೃಹತ್ ಸ್ಫೋಟ ಮತ್ತು ನಿರ್ಮಾಣ ಕಾರ್ಯಗಳಿಂದ ಆಗುವ ಹಾನಿ. |
| ಪ್ರಸ್ತುತ ಸ್ಥಿತಿ | ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಹೆಚ್ಚುವರಿ ವಿವರಣೆ ಕೋರಿದೆ. ತಾಂತ್ರಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕೊರತೆಯಿದೆ ಎಂದು ತಜ್ಞರ ವರದಿ ತಿಳಿಸಿದೆ. |
ಶರಾವತಿ ನದಿ
| ಮಾಹಿತಿ | ವಿವರ |
| ಮೂಲ | ಅಂಬುತೀರ್ಥ (ತೀರ್ಥಹಳ್ಳಿ ತಾಲ್ಲೂಕು), ಶಿವಮೊಗ್ಗ ಜಿಲ್ಲೆ |
| ಒಟ್ಟು ಉದ್ದ | ಸುಮಾರು 128 ಕಿ.ಮೀ. |
| ಮುಖ್ಯ ಆಕರ್ಷಣೆ | ಜೋಗ ಜಲಪಾತ (ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದು) |
| ನದಿಯ ಮುಖಜ ಭೂಮಿ | ಹೊನ್ನಾವರ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ |
| ಪ್ರಮುಖ ಪ್ರಾಣಿಗಳು | ಸಿಂಹಬಾಲದ ಸಿಂಗಳೀಕ (Lion-Tailed Macaque), ಮಲಬಾರ್ ಸಿವೆಟ್ (Malabar Civet) |
| ಆರ್ಥಿಕ ಮಹತ್ವ | ಕರ್ನಾಟಕದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಮೂಲಗಳಲ್ಲಿ ಒಂದಾದ ‘ಶರಾವತಿ ಜಲವಿದ್ಯುತ್ ಯೋಜನೆ’ (ಲಿಂಗನಮಕ್ಕಿ ಅಣೆಕಟ್ಟು). |
- ಪಂಪ್ ಸ್ಟೋರೇಜ್ ಯೋಜನೆಯು ರಾತ್ರಿ ವೇಳೆ ಅಥವಾ ಸೌರಶಕ್ತಿ ಹೆಚ್ಚಿರುವಾಗ ನೀರನ್ನು ಮೇಲೆ ಪಂಪ್ ಮಾಡಿಟ್ಟುಕೊಂಡು, ವಿದ್ಯುತ್ ಬೇಡಿಕೆ ಹೆಚ್ಚಾದಾಗ ಅದನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ತಂತ್ರಜ್ಞಾನವಾಗಿದೆ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಜವಾಬ್ದಾರಿ
1. ಸನ್ನಿವೇಶ (The Scenario)
ನೀವು ಒಂದು ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದೀರಿ. ಬೇಸಿಗೆ ಆರಂಭವಾಗಿದ್ದು, ನಿಮ್ಮ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಸರ್ಕಾರವು ತಿಂಗಳುಗಳ ಹಿಂದೆಯೇ “ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (RO Plants) ದುರಸ್ತಿಗೊಳಿಸಿ ಸಿದ್ಧವಾಗಿಟ್ಟುಕೊಳ್ಳಿ” ಎಂದು ಆದೇಶಿಸಿತ್ತು. ಆದರೆ, ನಿಮ್ಮ ಕೆಳಗಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈಗಲೂ 70ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ. ಜನರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ ಮತ್ತು ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ವರದಿಗಳು ಪ್ರಕಟವಾಗುತ್ತಿವೆ.
ಸವಾಲುಗಳು:
ಹಿರಿಯ ಅಧಿಕಾರಿಗಳಿಂದ ಮತ್ತು ಮಂತ್ರಿಗಳಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಡವಿದೆ.
ದುರಸ್ತಿಗೆ ಮೀಸಲಿಟ್ಟ ಹಣವನ್ನು ಬಳಸಲು ತಾಂತ್ರಿಕ ಪ್ರಕ್ರಿಯೆಗಳಿಗೆ ಸಮಯ ಬೇಕು.
ಖಾಸಗಿ ಟ್ಯಾಂಕರ್ ಮಾಫಿಯಾದವರು ಈ ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.
2. ನೈತಿಕ ಸಂಘರ್ಷಗಳು (Ethical Dilemmas)
ಕರ್ತವ್ಯ ಲೋಪ vs ಉತ್ತರದಾಯಿತ್ವ: ಕೆಳಗಿನ ಅಧಿಕಾರಿಗಳು ಕೆಲಸ ಮಾಡದಿದ್ದರೂ, ಅದರ ಅಂತಿಮ ಜವಾಬ್ದಾರಿ (Accountability) ನಿಮ್ಮ ಮೇಲಿರುತ್ತದೆ. ಅವರಿಗೆ ಶಿಕ್ಷೆ ನೀಡಬೇಕೆ ಅಥವಾ ಮೊದಲು ಕೆಲಸ ಮಾಡಿಸಿಕೊಳ್ಳಬೇಕೆ?
ಪಾರದರ್ಶಕತೆ vs ತುರ್ತು ಪರಿಸ್ಥಿತಿ: ತುರ್ತು ಪರಿಸ್ಥಿತಿಯಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಬದಿಗಿಟ್ಟು ಕೆಲಸ ಮಾಡಿಸಿದರೆ ನಂತರ ನಿಮ್ಮ ಮೇಲೆ ‘ಅವ್ಯವಹಾರ’ದ ಆರೋಪ ಬರಬಹುದು. ಆದರೆ ನಿಯಮ ಪಾಲಿಸಿದರೆ ಜನರಿಗೆ ನೀರು ಸಿಗುವುದು ತಡವಾಗುತ್ತದೆ.
ಸಾರ್ವಜನಿಕ ಹಿತಾಸಕ್ತಿ vs ಆಡಳಿತಾತ್ಮಕ ವಿಳಂಬ: ಜನರ ಜೀವ ಉಳಿಸುವುದು ಮುಖ್ಯವೋ ಅಥವಾ ಕಚೇರಿಯ ಕಡತಗಳ ಪ್ರಕ್ರಿಯೆ ಮುಖ್ಯವೋ?
3. ಲಭ್ಯವಿರುವ ಆಯ್ಕೆಗಳು (Options Available)
ಆಯ್ಕೆ 1: ನಿಯಮಗಳ ಪ್ರಕಾರವೇ ಹೋಗುವುದು.
ಪರಿಣಾಮ: ನೀವು ಸುರಕ್ಷಿತವಾಗಿರುತ್ತೀರಿ, ಆದರೆ ನೀರು ಪೂರೈಕೆ ವಿಳಂಬವಾಗಿ ಜನರ ಆಕ್ರೋಶ ಹೆಚ್ಚುತ್ತದೆ. ಇದು ‘ಬ್ಯೂರೋಕ್ರಾಟಿಕ್ ಅಪತಿ’ (Bureaucratic Apathy) ಎನಿಸಿಕೊಳ್ಳುತ್ತದೆ.
ಆಯ್ಕೆ 2: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಮಾನತು ಮಾಡುವುದು.
ಪರಿಣಾಮ: ಇದು ಕಟ್ಟುನಿಟ್ಟಿನ ಕ್ರಮದಂತೆ ಕಂಡರೂ, ತಕ್ಷಣದ ನೀರಿನ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಬದಲಿಗೆ ಕೆಲಸ ಮಾಡುವ ಸಿಬ್ಬಂದಿಗಳ ಕೊರತೆ ಉಂಟಾಗಬಹುದು.
ಆಯ್ಕೆ 3: ‘ಮಿಷನ್ ಮೋಡ್’ನಲ್ಲಿ ಕೆಲಸ ಮಾಡಿ ಪರ್ಯಾಯ ವ್ಯವಸ್ಥೆ ಮಾಡುವುದು.
ಪರಿಣಾಮ: ಇದು ಅತ್ಯುತ್ತಮ ನೈತಿಕ ಹಾದಿ. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ನಿಮ್ಮ ಮೊದಲ ಆದ್ಯತೆಯಾಗಬೇಕು.
4. ಪರಿಹಾರ ಮತ್ತು ಕ್ರಮಗಳು (Recommended Action Plan)
ಒಬ್ಬ ನೈತಿಕ ಅಧಿಕಾರಿಯಾಗಿ ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:
ತಕ್ಷಣದ ಪರಿಹಾರ (Immediate Relief): ದುರಸ್ತಿ ಆಗುವವರೆಗೆ ಬಾಡಿಗೆ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಒದಗಿಸಲು ಆದೇಶಿಸುವುದು. ಟ್ಯಾಂಕರ್ ಮಾಫಿಯಾ ತಡೆಯಲು ಜಿಪಿಎಸ್ (GPS) ಆಧಾರಿತ ಮೇಲ್ವಿಚಾರಣೆ ಮಾಡುವುದು.
ಸಮಾನಾಂತರ ದುರಸ್ತಿ (Parallel Repair): 71 ಘಟಕಗಳ ದುರಸ್ತಿಗೆ ವಾರ್ ಫೂಟಿಂಗ್ (War footing) ಆಧಾರದಲ್ಲಿ ತಾಂತ್ರಿಕ ತಂಡಗಳನ್ನು ನೇಮಿಸುವುದು. ಹಣಕಾಸಿನ ವಿಳಂಬವಾಗದಂತೆ ‘ತುರ್ತು ನಿಧಿ’ (Contingency fund) ಬಳಸುವುದು.
ಜವಾಬ್ದಾರಿ ನಿಗದಿ (Fixing Responsibility): ಕೆಲಸ ವಿಳಂಬ ಮಾಡಿದ ಅಧಿಕಾರಿಗಳಿಗೆ ‘ನೋಟಿಸ್’ ನೀಡಿ ವಿವರಣೆ ಕೇಳುವುದು. ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸದಂತೆ ವಾರ್ಷಿಕ ನಿರ್ವಹಣಾ ಒಪ್ಪಂದ (AMC) ಕಡ್ಡಾಯಗೊಳಿಸುವುದು.
ಪಾರದರ್ಶಕತೆ (Transparency): ಯಾವ ಹಳ್ಳಿಗೆ ಎಷ್ಟು ನೀರು ಹೋಗುತ್ತಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸಾರ್ವಜನಿಕರ ವಿಶ್ವಾಸ ಗಳಿಸುವುದು.
ನೈತಿಕ ಪಾಠ (Ethical Lesson):
ನಾಗರಿಕ ಸೇವೆಯಲ್ಲಿ “ಸಾರ್ವಜನಿಕ ಸೇವೆಯೇ ಪರಮೋಚ್ಚ” (Service to public is the highest goal). ನಿಯಮಗಳು ಜನರಿಗಾಗಿ ಇರಬೇಕೇ ಹೊರತು, ಜನರು ನಿಯಮಗಳಿಗಾಗಿ ಕಷ್ಟಪಡಬಾರದು. ಸಕಾಲದಲ್ಲಿ ಸ್ಪಂದಿಸುವುದು (Responsiveness) ಒಬ್ಬ ಉತ್ತಮ ಅಧಿಕಾರಿಯ ಲಕ್ಷಣ.
Sources: Prajavani












