Thu. Oct 9th, 2025

Kannada

ಪ್ರಚಲಿತ ವಿದ್ಯಮಾನಗಳು: 9ನೇ ಅಕ್ಟೋಬರ್ 2025

  • ನೀರಿದ್ದರೆ ನಾಳೆಗೆ ಚಾಲನೆ ಇಂದು

ಸಂದರ್ಭ: ಅಂತರ್ಜಲ ಅತಿಬಳಕೆಯ 525 ಗ್ರಾ.ಪಂ.ಗಳಲ್ಲಿ ಯೋಜನೆ: ‘ರಾಜ್ಯದ 16 ಜಿಲ್ಲೆಗಳ, 27 ತಾಲ್ಲೂಕಗಳಲ್ಲಿ ಅಂತರ್ಜಲದ ಅತಿಬಳಕೆಯ ಪಟ್ಟಿಯಲ್ಲಿರುವ 525 ಗ್ರಾಮ ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ.

  • ನೀರಿನ ಮಹತ್ವ ತಿಳಿಸುವುದು, ಜಲಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನು ನೀರಿನ ಸಂರಕ್ಷಣೆ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.
  • ಅಭಿಯಾನಕ್ಕೆ ನಟ ವಸಿಷ್ಠ ಸಿಂಹ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ’ ಎಂದರು.
  • ‘ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಭದ್ರತೆಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.
  • ಅಂತರ್ಜಲ ಸಾಕ್ಷರತೆಗೆ ಒತ್ತು ನೀಡಲಾಗುವುದು. ಅಂತರ್ಜಲಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಸ್ತುತ ಪರಿಸ್ಥಿತಿ, ಅಂಕಿ ಅಂಶದ ಲಭ್ಯತೆ ಬಗ್ಗೆ ಶಾಲಾ ಮಟ್ಟಗಳಲ್ಲೇ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.
  • ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂತರ್ಜಲದ ಅತಿಬಳಕೆ ಇರುವ 100ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ₹ 200 ಕೋಟಿ ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.
  • ‘ಕೆರೆ ಬಳಕೆದಾರರ ಸಂಘಗಳ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಒತ್ತು ನೀಡಲು ಉದ್ದೇಶಿಸ ಲಾಗಿದೆ. ಜಲಮೂಲಗಳ ಸಮಗ್ರ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ವಾಟರ್ ಸ್ಟಾಕ್ ಅಳವಡಿಕೆಗೆ ಚಿಂತನೆ ನಡೆದಿದೆ. ಈ ಕಾರ್ಯಕ್ರಮದ ಅನುಷ್ಠಾನದ ಮೂಲಕ ಕರ್ನಾಟಕ ರಾಜ್ಯವನ್ನು ಜಲ ಸಮೃದ್ಧಗೊಳಿಸುವ ಗುರಿ ಹೊಂದಲಾಗಿದೆ.
  • ಯುದ್ಧದ ಸಾಧ್ಯತೆ ನಿಜ

ಸಂದರ್ಭ:‘ಭಾರತದೊಂದಿಗೆ ಯುದ್ಧದ ಸಾಧ್ಯತೆ ಇರುವುದು ನಿಜ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ.

  • ‘ಭವಿಷ್ಯದಲ್ಲಿ ಭಾರತದೊಂದಿಗೆ ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷ ಎದುರಾದರೆ ನಮ್ಮ ದೇಶವು ಅದರಲ್ಲಿ ದೊಡ್ಡಮಟ್ಟದ ಯಶಸ್ಸು ಸಾಧಿಸುತ್ತದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  • ‘ಪಾಕಿಸ್ತಾನಕ್ಕೆ 6 ತಿಂಗಳ ಹಿಂದೆ ಇರುವುದಕ್ಕಿಂತಲೂ ಈಗ ಹೆಚ್ಚಿನ ಸಂಖ್ಯೆಯ ಬೆಂಬಲಿ ಗರಿದ್ದಾರೆ. ಆದರೆ, ಭಾರತವು ಮೇ ಸಂಘರ್ಷದ ನಂತರ ಹಲವು ದೇಶಗಳ ಬೆಂಬಲವನ್ನು ಕಳೆದುಕೊಂಡಿದೆ’ ಎಂದು ಅವರು ಅಮೆರಿಕದ ಹೆಸರು ಉಲ್ಲೇಖಿಸದೇ ಹೇಳಿದ್ದಾರೆ.
  • ‘ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ ಪಾಕಿಸ್ತಾನವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸಂಘರ್ಷ ಉಲ್ಬಣಗೊಳ್ಳುವುದು ನಮಗೆ ಬೇಕಿಲ್ಲ. ಆದರೆ, ಯುದ್ಧದ ಸಾಧ್ಯತೆ ಇರುವುದಂತೂ ನಿಜ. ಇದನ್ನು ನಾನು ಅಲ್ಲಗಳೆಯುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
  • ‘ಮೊಘಲ್‌ ದೊರೆ ಔರಂಗಜೇಬನ ಅಲ್ಪ ಅವಧಿ ಹೊರತುಪಡಿಸಿ, ಭಾರತವು ಎಂದಿಗೂ ಏಕೀಕೃತ ದೇಶವಾಗಿರಲಿಲ್ಲ. ಆದರೆ, ಪಾಕಿಸ್ತಾನವು ಅಲ್ಲಾಹುವಿನ ಹೆಸರಿನಲ್ಲಿ ಸೃಷ್ಟಿಯಾಗಿದೆ ಮತ್ತು ಹಲವು ಆಂತರಿಕ ಸಮಸ್ಯೆಗಳಿದ್ದರೂ ಮೇ ಸಂಘರ್ಷದ ನಂತರ ಒಗ್ಗಟ್ಟಾಗಿದೆ. ‘ನಮ್ಮ ತವರಿನಲ್ಲಿ ನಾವು ಪರಸ್ಪರ ವಾದಿಸುತ್ತೇವೆ ಮತ್ತು ಸ್ಪರ್ಧಿಸುತ್ತೇವೆ. ಆದರೆ, ಭಾರತದೊಂದಿಗೆ ಹೋರಾಟ ಮಾಡಬೇಕಾಗಿ ಬಂದಾಗ ನಾವು  ಒಂದಾಗುತ್ತೇವೆ’ ಎಂದು ಹೇಳಿದ್ದಾರೆ.
  • ಭಾರತದ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು, ‘ಮತ್ತೆ ದುಸ್ಸಾಹಸಗಳಿಗೆ ಕೈ ಹಾಕದಂತೆ’ ಪಾಕಿಸ್ತಾನಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಖ್ವಾಜಾ ಪ್ರತಿಕ್ರಿಯೆ ಹೊರಬಿದ್ದಿದೆ.
  • 12.54 ಲಕ್ಷ ಹೆಕ್ಟೇರ್ಬೆಳೆ ಹಾನಿ

ಸಂದರ್ಭ: ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಪ್ರದೇಶದ ರೈತರ ಬೆಳೆ ಹಾನಿಗೆ ಪರಿಹಾರ ಪಾವತಿಗಾಗಿ ₹2,000 ಕೋಟಿ ನಿಗದಿ ಮಾಡಲಾಗಿದ್ದು, 30 ದಿನಗಳ ಒಳಗೆ ರೈತರ ಖಾತೆಗಳಿಗೆ ಪರಿಹಾರದ ಮೊತ್ತ ಪಾವತಿ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

  • ನೈರುತ್ಯ ಮುಂಗಾರು ಅವಧಿಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಒಟ್ಟು 12.54 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಪೂರ್ಣಗೊಳಿಸಿದ 9 ಜಿಲ್ಲೆಗಳಲ್ಲಿನ 5.29 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಗೆ ಮೊದಲ ಸುತ್ತಿನ ಪರಿಹಾರ ಪಾವತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
  • ಸೆಪ್ಟೆಂಬರ್‌ ಮೊದಲ ವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪ್ರದೇಶಗಳು ಜಲಾವೃತಗೊಂಡು ಸುಮಾರು 5.29 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟವಾದ ಜಿಲ್ಲೆಗಳು ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧವಾಗಿದ್ದವು. ತದನಂತರ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಸುರಿದ ಮಳೆ ಹಾಗೂ ಮಹಾರಾಷ್ಟ್ರ ಭಾಗದ ಜಲಾಶಯಗಳಿಂದ ಹೊರ ಹರಿಸಲಾದ ನದಿ ಪ್ರವಾಹದಿಂದ ಕಲಬುರಗಿ, ಯಾದಗಿರಿ, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 7.24 ಲಕ್ಷ ಹೆಕ್ಟೇರ್‌ ಬೆಳೆ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
  • ಈ ನಾಲ್ಕು ಜಿಲ್ಲೆಗಳ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಪುನಃ ಮಾಡಬೇಕಾದ ಅಗತ್ಯವಿದೆ. ಬೆಳೆ ಹಾನಿ ಪ್ರದೇಶ ಪರಿಷ್ಕರಣೆಗೊಳ್ಳಲಿದ್ದು, 7.24 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯ ಜಂಟಿ ಸಮೀಕ್ಷೆಯು ಪ್ರಗತಿಯಲ್ಲಿದೆ. 10 ದಿನಗಳಲ್ಲಿ ಬೆಳೆ ಹಾನಿ ಪರಿಹಾರ ಪಾವತಿಸಲಾಗುವುದು. ಒಟ್ಟಾರೆ 2025ರ ನೈರುತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪಾವತಿ ಮಾಡಲಿದೆ ಎಂದೂ ಹೇಳಿದ್ದಾರೆ.
  • ಕೆರೆ ಬಫರ್ವಲಯ: ವಿವರಣೆ ಶೀಘ್ರ

ಸಂದರ್ಭ: ಕೆರೆಗಳ ಬಫರ್‌ ವಲಯಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಕುರಿತಂತೆ ಕಾನೂನು ತಜ್ಞರ ಸಲಹೆಯೊಂದಿಗೆ ರಾಜ್ಯಪಾಲರಿಗೆ ವಿವರಣೆಯನ್ನು ಶೀಘ್ರವೇ ಸಲ್ಲಿಸಲಾಗುವುದು.

  • ತಿದ್ದೋಲೆ: ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ– 2025ಕ್ಕೆ ತಿದ್ದೋಲೆಯನ್ನು ತರಲಾಗಿದೆ. ಕೆರೆಯ ಕಂದಾಯ ಗಡಿಯಿಂದ ಬಫರ್‌ ವಲಯವನ್ನು ಮೀಟರ್‌ಗಳಲ್ಲಿ ನಿಗದಿಪಡಿಸಲಾಗಿದೆ.
  • ಪರಿಷ್ಕರಣೆಯಂತೆ,  5 ಗುಂಟೆವರೆಗಿನ ಕೆರೆಗಳಿಗೆ ಬಫರ್‌ ವಲಯ ಇರುವುದಿಲ್ಲ. 100ಕ್ಕೂ ಹೆಚ್ಚು ಎಕರೆಯ ಕೆರೆಗೆ 30 ಮೀಟರ್‌ ಬಫರ್‌ ವಲಯ ನಿಗದಿಪಡಿಸಲಾಗಿದೆ.
  • ವಾಯುಪಡೆಯ ಸಾಮರ್ಥ್ಯ ಬಿಚ್ಚಿಟ್ಟ ಆಪರೇಷನ್ಸಿಂಧೂರ

ಸಂದರ್ಭ:‘ಆಕ್ರಮಣಕಾರಿ ವಾಯು ದಾಳಿಯ ಮೂಲಕ ಕೆಲವೇ ದಿನಗಳಲ್ಲಿ ಸೇನಾ ಕಾರ್ಯಾಚರಣೆಯ ಫಲಿತಾಂಶವನ್ನು ಹೇಗೆ ನಿರ್ಧರಿಸಬಹುದು ಎನ್ನುವುದನ್ನು ಭಾರತೀಯ ವಾಯುಪಡೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ವಿಶ್ವದ ಎದುರು ತೆರೆದಿಟ್ಟಿದೆ’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಹೇಳಿದ್ದಾರೆ.

  • ಹಿಂಡನ್‌ ವಾಯು ನೆಲೆಯಲ್ಲಿ ನಡೆದ 93ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು,‘ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ವಾಯುಪಡೆಯ ಸಾಮರ್ಥ್ಯ ಹೇಗೆ ಅನಾವರಣಗೊಂಡಿತು ಎನ್ನುವುದಕ್ಕೆ ಸಿಂಧೂರ ಕಾರ್ಯಾಚರಣೆ ಸ್ಪಷ್ಟ ನಿದರ್ಶನ. ಇದು ನಮಗೆ ವೃತ್ತಿಪರ ಹೆಮ್ಮೆ.
  • ವಾಯುಪಡೆಯು ದಿಟ್ಟವಾದ ಮತ್ತು ನಿಖರವಾದ ದಾಳಿಯು  ಶತ್ರು ಪಾಳಯದ  ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು’ ಎಂದರು.
  • ಸಿಂಧೂರ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ರಾಫೇಲ್ಸ್ಕ್ವಾಡ್ರನ್ ಸೇರಿದಂತೆ ವಿವಿಧ ಐಎಎಫ್‌ ಘಟಕಗಳನ್ನು ಅಭಿನಂದಿಸಿದ ಸಿಂಗ್‌, ಪ್ರಶಂಸನಾ ಪತ್ರಗಳನ್ನು ವಿತರಿಸಿದರು.
  • ಸುಧಾರಣಾ ಪ್ರಕ್ರಿಯೆಗೆ ವೇಗ

ಸಂದರ್ಭ:‘1 ಜಿ.ಬಿ. ಡೇಟಾ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆ’:ವಿವಿಧ ವಲಯಗಳಲ್ಲಿನ ತಯಾರಿಕಾ ಚಟುವಟಿಕೆ ಭಾರತದಲ್ಲಿಯೇ ನಡೆಯಬೇಕು ಎಂದು ಮತ್ತೊಮ್ಮೆ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಧಾರಣಾ ಪ್ರಕ್ರಿಯೆಗಳಿಗೆ ಕೇಂದ್ರ ಸರ್ಕಾರವು ವೇಗ ನೀಡುತ್ತಿದೆ ಎಂದರು.

  • ಮೊಬೈಲ್‌ ತಯಾರಿಕೆಯಿಂದ ಆರಂಭಿಸಿ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ಎಲ್ಲವೂ ಭಾರತದಲ್ಲೇ ತಯಾರಾಗುವಂತೆ ಆಗಬೇಕು ಎಂದು ಅವರು ಹೇಳಿದರು. ಭಾರತವು ಹೂಡಿಕೆಗೆ ಅತ್ಯುತ್ತಮವಾದ ಅವಕಾಶಗಳನ್ನು ನೀಡುತ್ತಿದೆ ಎಂದರು.
  • ‘ಭಾರತೀಯ ಮೊಬೈಲ್‌ ಕಾಂಗ್ರೆಸ್‌’ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ, ಹೂಡಿಕೆಗಳನ್ನು ಸ್ವಾಗತಿಸುವ ಸರ್ಕಾರದ ನಿಲುವು, ಉದ್ಯಮ ನಡೆಸುವುದನ್ನು ಸುಲಲಿತವಾಗಿಸುವ ನೀತಿಗಳು ಭಾರತವು ಹೂಡಿಕೆದಾರ ಸ್ನೇಹಿ ತಾಣ ಎಂಬ ಹೆಸರು ಗಳಿಸುವಂತೆ ಮಾಡಿವೆ’ ಎಂದು ಹೇಳಿದರು.
  • ‘ಭಾರತದಲ್ಲಿ ಹೂಡಿಕೆ ಮಾಡಲು, ಭಾರತದಲ್ಲೇ ತಯಾರಿಸಲು ಇದು ಪ್ರಶಸ್ತವಾದ ಸಮಯ’ ಎಂದು ಮೋದಿ ಅವರು ಹೇಳಿದರು.
  • ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ದೊಡ್ಡ ಮಟ್ಟದ ಸುಧಾರಣೆಗಳ ವರ್ಷ ಇದಾಗಿರಲಿದೆ ಎಂದು ತಾವು ಆಗಸ್ಟ್‌ 15ರಂದು ಘೋಷಿಸಿದ್ದನ್ನು ಮೋದಿ ನೆನಪಿಸಿದರು. ‘ಸುಧಾರಣೆಗಳ ವೇಗವನ್ನು ಇನ್ನಷ್ಟು ಹೆಚ್ಚಿಸು ತ್ತಿದ್ದೇವೆ’ ಎಂದು ಅವರು ಹೇಳಿದರು. ಆದರೆ ಈ ಕುರಿತಾಗಿ ಹೆಚ್ಚಿನ ವಿವರ ನೀಡಲಿಲ್ಲ.
  • ಸೆಮಿಕಂಡಕ್ಟರ್‌, ಮೊಬೈಲ್ಮತ್ತು ಎಲೆಕ್ಟ್ರಾನಿಕ್ಸ್ಗಳ ತಯಾರಿಕಾ ವಲಯದಲ್ಲಿ ಭಾರತವು ಅಗಾಧ ಅವಕಾಶಗಳನ್ನು ನೀಡುತ್ತಿದೆ. ಉದ್ಯಮ ಕ್ಷೇತ್ರ, ನವೋದ್ಯಮಗಳು ಈಗ ಮುಂದಡಿ ಇರಿಸಬೇಕು ಎಂದರು.
  • ಡಿಜಿಟಲ್ ಜಗತ್ತಿನಲ್ಲಿ ಭಾರತವು ಒಂದು ದಶಕದಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ 1 ಜಿ.ಬಿ. ಡೇಟಾ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆ ಆಗಿದೆ ಎಂದರು. ‘ಡಿಜಿಟಲ್ ಸಂಪರ್ಕವು ಇಂದು ಭಾರತದಲ್ಲಿ ಐಷಾರಾಮದ ಸಂಗತಿಯಾಗಿ ಉಳಿದಿಲ್ಲ. ಅದು ಈಗ ಪ್ರತಿ ಭಾರತೀಯನ ಅವಿಭಾಜ್ಯ ಅಂಗವಾಗಿದೆ’ ಎಂದು ಬಣ್ಣಿಸಿದರು.
  • ಮೂವರು ವಿಜ್ಞಾನಿಗಳಿಗೆ ರಸಾಯನ ವಿಜ್ಞಾನ ನೊಬೆಲ್

ಸಂದರ್ಭ: ಜಪಾನ್‌ನ ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್‌ ರಾಬ್ಸನ್‌ ಮತ್ತು ಜೋರ್ಡಾನ್‌ನ ಒಮರ್‌ ಎಂ.ಯಾಘಿ ಅವರು 2025ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್‌ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.

  • ಲೋಹಸಾವಯವ ಚೌಕಟ್ಟು’ (ಎಂಒಎಫ್‌) ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳನ್ನು ಪರಿಗಣಿಸಿ, ನೊಬೆಲ್ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್‌ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹನ್ಸ್‌ ಎಲೆಗ್ರೆನ್‌ ಇಲ್ಲಿ ತಿಳಿಸಿದ್ದಾರೆ.
  • ಸುಸುಮು ಕಿಟಾಗವಾ ಜಪಾನ್ ಕ್ಯೂಟೊ ವಿಶ್ವವಿದ್ಯಾಲಯದಲ್ಲಿ, ರಿಚರ್ಡ್ರಾಬ್ಸನ್ಆಸ್ಟ್ರೇಲಿಯಾದ ಮೆಲ್ಬರ್ನ್ವಿ.ವಿಯಲ್ಲಿ ಹಾಗೂ ಒಮರ್ಕ್ಯಾಲಿಫೋರ್ನಿಯಾ ವಿ.ವಿಯಲ್ಲಿ  ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಈ ಮೂವರೂ ವಿಜ್ಞಾನಿಗಳು ಒಟ್ಟು 1.2 ದಶಲಕ್ಷ ಡಾಲರ್‌ (₹10.65 ಕೋಟಿ) ನೊಬೆಲ್‌ ನಗದು ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ. 
  • ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ ಕ್ಷೇತ್ರದ ನೊಬೆಲ್‌ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ಮತ್ತು ನೊಬೆಲ್‌ ಶಾಂತಿ ಪ್ರಶಸ್ತಿ ಹಾಗೂ ಅರ್ಥಶಾಸ್ತ್ರದ ನೊಬೆಲ್‌ ಪುರಸ್ಕಾರ ಅ.13ರಂದು ಪ್ರಕಟಗೊಳ್ಳಲಿವೆ.
  • ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಗೋರ್

ಸಂದರ್ಭ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಪ್ತ ಸರ್ಗಿಯೊ ಗೋರ್‌ ಅವರು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

  • ಪ್ರತಿಸುಂಕದ ವಿಚಾರವಾಗಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿ ರುವ ಸಂದರ್ಭದಲ್ಲಿ ಗೋರ್‌ ಅವರು ರಾಯಭಾರಿ ಯಾಗಿ ಆಯ್ಕೆಯಾಗಿರುವುದು ಗಮನಾರ್ಹ ಸಂಗತಿ.
  • ‘ಅಮೆರಿಕ –ಭಾರತ ನಡುವಿನ ವ್ಯಾಪಾರ ಒಪ್ಪಂದಗಳು ಅಮೆರಿಕದ ಸ್ಫರ್ಧಾತ್ಮಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಇತರ ದೇಶಗಳ ಮೇಲಿನ ಚೀನಾದ ಆರ್ಥಿಕ ಹತೋಟಿಯನ್ನು ಕಡಿಮೆಗೊಳಿಸುತ್ತವೆ’ ಎಂದು ಗೋರ್‌ ಪ್ರತಿಕ್ರಿಯಿಸಿದ್ದಾರೆ.
  • ಭಾರತಕ್ಕೆ ಆಗಮಿಸಿದ ಸ್ಟಾರ್ಮರ್

ಸಂದರ್ಭ: ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಭಾರತಕ್ಕೆ ಆಗಮಿಸಿದರು. ಇದು ಭಾರತಕ್ಕೆ ಅವರ ಚೊಚ್ಚಲ ಪ್ರವಾಸ.

  • ಜುಲೈನಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಲಂಡನ್‌ನಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು. ಅದಾದ ಬಳಿಕ ಬ್ರಿಟನ್‌ ಪ್ರಧಾನಿ ಸ್ಟಾರ್ಮರ್‌ ಅವರು ಎರಡು ದಿನಗಳ ಮಟ್ಟಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.
  • ಭಾರತಕ್ಕೆ ಬರುತ್ತಿದ್ದಂತೆ ಸ್ಟಾರ್ಮರ್‌ ಅವರು, ‘ಭಾರತದಲ್ಲಿ ಅಪೂರ್ವವಾದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತವು 2028 ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ. ಅವರೊಂದಿಗಿನ ವ್ಯಾಪಾರವು ತ್ವರಿತ ಮತ್ತು ಅಗ್ಗವಾಗಲಿದ್ದು, ಅಪೂರ್ವವಾದ ಅವಕಾಶಗಳು ದೊರೆಯಲಿವೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಪರಸ್ಪರರ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದರು.
  • ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು, ‘ಭಾರತಕ್ಕೆ ಐತಿಹಾಸಿಕ ಭೇಟಿ ನೀಡಿರುವ ಸ್ಟಾರ್ಮರ್‌ ಅವರಿಗೆ ಸ್ವಾಗತ. ಬ್ರಿಟನ್‌ನಿಂದ ಅತಿದೊಡ್ಡ ವ್ಯಾಪಾರ ನಿಯೋಗದ ಜತೆಗೆ ಬಂದಿರುವ ಅವರು ಎರಡು ದೇಶಗಳ ನಡುವಿನ ಭವಿಷ್ಯವನ್ನು ಸಮೃದ್ಧಗೊಳಿಸುವ ಆಶಯ ಹೊಂದಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಯಶ್‌ ರಾಜ್‌ ಫಿಲ್ಮ್‌ ಸ್ಟುಡಿಯೊಗೆ ಭೇಟಿ

  • ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಮುಂಬೈನ ಅಂಧೇರಿಯಲ್ಲಿರುವ ಯಶ್‌ ರಾಜ್‌ ಫಿಲ್ಮ್‌ ಸ್ಟುಡಿಯೊಗೆ ಭೇಟಿ ನೀಡಿದರು. ಇದು ಬಾಲಿವುಡ್‌ನ ಪ್ರಮುಖ ನಿರ್ಮಾಣ ಕೇಂದ್ರ.
  • ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಬಲಪಡಿಸುವುದು ಮತ್ತು ಬ್ರಿಟನ್‌– ಭಾರತದ ಚಲನಚಿತ್ರೋದ್ಯಮಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ‘ಮುಂದಿನ ವರ್ಷದಿಂದ ಬ್ರಿಟನ್‌ನಲ್ಲಿ ಬಾಲಿವುಡ್‌ನ ಮೂರು ಹೊಸ ಬ್ಲಾಕ್‌ ಬಸ್ಟರ್‌ಗಳು ನಿರ್ಮಾಣವಾಗಲಿವೆ’ ಎಂದು ಈ ವೇಳೆ ಮಾಹಿತಿ ನೀಡಿದರು.
  • ಬಿ.ಎಸ್‌. ಚಂದ್ರಶೇಖರ್‌, ಬ್ರಯನ್ಲಾರಾಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ

ಸಂದರ್ಭ: ಸ್ಪಿನ್ ಬೌಲಿಂಗ್ ದಂತಕಥೆ, ಕನ್ನಡಿಗ ಬಿ.ಎಸ್. ಚಂದ್ರಶೇಖರ್ ಅವರಿಗೆ ಜೀವಮಾನ ಸಾಧನೆಗಾಗಿ ಸಿಯೆಟ್ ಕ್ರಿಕೆಟ್ ರೇಟಿಂಗ್ ಪುರಸ್ಕಾರ ನೀಡಿ ಗೌರವಿಸಲಾಯಿತು.

  • ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಬ್ಯಾಟರ್ ಬ್ರಯನ್ ಲಾರಾ ಅವರಿಗೂ ಜೀವಮಾನ ಸಾಧನೆ ಗೌರವ ಪ್ರದಾನ ಮಾಡಲಾಯಿತು.
  • ಪ್ರಸ್ತುತ ಭಾರತ ಟಿ20 ತಂಡದ ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ವರ್ಷದ ಸಾಧಕರ ಗೌರವ ಗಳಿಸಿದರು.
  • ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸ್ಮರಣಿಕೆ ನೀಡಲಾಯಿತು. ಈಚೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಇದೇ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರೂ ವಿಶೇಷ ಗೌರವಕ್ಕೆ ಪಾತ್ರರಾದರು.
  • ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿರುವ ಎರಡನೇ ಬ್ಯಾಟರ್ ಇಂಗ್ಲೆಂಡ್‌ನ ಜೋ ರೂಟ್ ಅವರಿಗೆ ಪುರುಷರ ವಿಭಾಗದ ಅಂತರ ರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿನೀಡಲಾಯಿತು. ಹ್ಯಾರಿ ಬ್ರೂಕ್ ವರ್ಷದ ಬ್ಯಾಟರ್, ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಅವರಿಗೆ ವರ್ಷದ ಬೌಲರ್‌ ಗೌರವ ನೀಡಲಾಯಿತು. ಭಾರತ ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಅಂತರ ರಾಷ್ಟ್ರೀಯ ಬೌಲರ್ ಹಾಗೂ ಸ್ಮೃತಿ ಮಂದಾನಗೆ ಉತ್ತಮ ಬ್ಯಾಟರ್‌ ಗೌರವ ಒಲಿಯಿತು.
  • ಕಳೆದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ 69 ವಿಕೆಟ್ ಗಳಿಸಿದ ವಿದರ್ಭ ತಂಡದ ಹರ್ಷ್ ದುಬೆ ಅವರಿಗೆ ದೇಶಿ ಕ್ರಿಕೆಟ್‌ ಋತುವಿನ ಉತ್ತಮ ಆಟಗಾರ ಗೌರವ ಸಂದಿತು.
  • ಮುಂಬೈನ ಅಂಗಕ್ರಿಷ್ ರಘುವಂಶಿ ಅವರು ‘ಉದಯೋನ್ಮುಖ ಆಟಗಾರ’ ಪ್ರಶಸ್ತಿ ಗಳಿಸಿದರು.

ಪ್ರಚಲಿತ ವಿದ್ಯಮಾನಗಳು: 8ನೇ ಅಕ್ಟೋಬರ್ 2025

  • 7 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ

ಸಂದರ್ಭ: ನರೇಗಾ ಯೋಜನೆ ನೆರವಿನಿಂದ ‘ಜಲ ಸಂಚಯ ಜನ ಭಾಗೀದಾರಿ’ ಅಭಿಯಾನದಡಿ ಜಲ ಸಂರಕ್ಷಣೆಯಲ್ಲಿ ತೊಡಗಿರುವ ರಾಜ್ಯದ ಏಳು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

  • ಜಲ ಸಂರಕ್ಷಣೆಗಾಗಿ ಗದಗ ಜಿಲ್ಲೆಯಲ್ಲಿ 11,971, ವಿಜಯಪುರ– 11,453, ಬೀದರ್‌- 10,297, ಕೋಲಾರ-8,470, ತುಮಕೂರು ಜಿಲ್ಲೆಯಲ್ಲಿ 9,885, ಮಂಡ್ಯ ಜಿಲ್ಲೆಯಲ್ಲಿ 7,192 ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 7,815 ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
  • ಆನೆಗಳ ಸಂಖ್ಯೆ 3,170ಕ್ಕೆ

ಸಂದರ್ಭ: ಕಳೆದ ವರ್ಷ ರಾಜ್ಯದಲ್ಲಿ 3,063 ಆನೆಗಳಿದ್ದವು, ಪ್ರಸಕ್ತ ವರ್ಷದಲ್ಲಿ ಆನೆಗಳ ಸಂಖ್ಯೆ 3,170ಕ್ಕೆ ಏರಿಕೆಯಾಗಿದೆ. ನೆರೆಯ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಸಿದ ಆನೆ ಸಮೀಕ್ಷೆಯಲ್ಲಿ ಈ ಅಂಕಿಅಂಶಗಳು ಹೊರಬಿದ್ದಿವೆ.

  • ತಮಿಳುನಾಡಿನಲ್ಲಿ ಸತತ ಎರಡನೇ ವರ್ಷವೂ ಕಾಡಾನೆಗಳ ಸಂಖ್ಯೆ ಹೆಚ್ಚಳವಾಗಿದೆ.
  • ಕರ್ನಾಟಕದ ಸಹಕಾರದೊಂದಿಗೆ ಮೇ 23ರಿಂದ 25ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು ಆನೆಗಳ ಪೈಕಿ ವಯಸ್ಕ ಆನೆಗಳ ಸಂಖ್ಯೆ ಶೇ 44ರಷ್ಟಿದೆ.
  • ತಮಿಳುನಾಡಿನಲ್ಲಿ ಇರುವ ಗಂಡು ಮತ್ತು ಹೆಣ್ಣು ಆನೆಗಳ ಲಿಂಗಾನುಪಾತವು ಅಂದಾಜು 1:1.77ರಷ್ಟಿದೆ. ನೆರೆಯ ಕೇರಳ, ಕರ್ನಾಟಕದಲ್ಲಿಯೂ ಆನೆಗಳ ಲಿಂಗಾನುಪಾತ ಬಹುತೇಕ ಇದೇ ರೀತಿ ಇದೆ ಎಂದು ಸಮೀಕ್ಷೆ ವರದಿಯು ತಿಳಿಸಿದೆ.
  • ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಸಂರಕ್ಷಣಾಲಯಗಳು, ರಾಷ್ಟ್ರೀಯ ಉದ್ಯಾನ ಸೇರಿದಂತೆ  26 ಅರಣ್ಯ ವಿಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅರಣ್ಯ ಇಲಾಖೆಯ 2,043 ಸಿಬ್ಬಂದಿ ಮತ್ತು ಸ್ವಯಂ ಪ್ರೇರಿತರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.
  • ಎಥೆನಾಲ್ ಮಿಶ್ರಣ: ಇಂಧನ ಕ್ರಾಂತಿ?

ಸಂದರ್ಭ: ವಾಹನಗಳಿಗೆ ಬಳಸುವ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಸಂಯುಕ್ತವನ್ನು ಸೇರಿಸುತ್ತಿರುವುದರ ಕುರಿತು ಚರ್ಚೆಗಳು ನಡೆಯು ತ್ತಿವೆ. ಪೆಟ್ರೋಲ್‌ನಿಂದ ಓಡುವ ಎಲ್ಲಾ ವಾಹನಗಳು ಶೇ 20ರಷ್ಟು ಎಥೆನಾಲ್‌ಯುಕ್ತ ಇಂಧನ ಬಳಸಬೇಕು ಎಂಬ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಆದರೆ, ಎಥೆನಾಲ್ ಸಂಯುಕ್ತ ಮಿಶ್ರಿತ ಪೆಟ್ರೋಲ್‌ನಿಂದ ತಮ್ಮ ವಾಹನಗಳ ಇಂಧನ ಕ್ಷಮತೆ ಕುಸಿದಿದೆ ಎಂದು ಜನ ದೂರುತ್ತಿದ್ದಾರೆ.

  • ಪೆಟ್ರೋಲ್ನಲ್ಲಿ ಶೇ 20ರಷ್ಟು ಎಥೆನಾಲ್ಸಂಯುಕ್ತವನ್ನು ಸೇರಿಸುವುದರಿಂದ ಬಳಕೆದಾರರಿಗೆ ಸದ್ಯಕ್ಕೆ ಅನನುಕೂಲ ಆಗುತ್ತಿದ್ದರೂ, ಅದರಿಂದ ಅನುಕೂಲಗಳೂ ಇವೆ.
  • ಇಲ್ಲಿಯವರೆಗೆ ವಾಹನ ಗಳಲ್ಲಿ ತುಂಬಿಸುತ್ತಿದ್ದ ಪೆಟ್ರೋಲ್ನಲ್ಲಿ ಶೇ 10ರಷ್ಟು ಎಥೆನಾಲ್ ಇರುತ್ತಿತ್ತು. ಈಗ ಅದರ ಪ್ರಮಾಣ ದುಪ್ಪಟ್ಟಾಗಿದೆ. ಇದರಿಂದ ದೇಶದ ಆರ್ಥಿಕತೆ ಮೇಲಿನ ಹೊರೆ ತಕ್ಕಮಟ್ಟಿಗೆ ಕಡಿಮೆ ಆಗುತ್ತದೆ ಮತ್ತು ವಾತಾವರಣಕ್ಕೆ ಸೇರುವ ಇಂಗಾಲದ ಡೈಆಕ್ಸೈಡ್ ಪ್ರಮಾಣವೂ ತಗ್ಗುತ್ತದೆ. ಅಂದರೆ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಎಥೆನಾಲ್‌ಯುಕ್ತ ಪೆಟ್ರೋಲ್‌ ಮಹತ್ವದ ಪಾತ್ರ ವಹಿಸುತ್ತದೆ.
  • ಈ ಅನುಕೂಲಕ್ಕೆ ಹೋಲಿಸಿದರೆ, ಪ್ರಸ್ತುತ ಬಳಕೆದಾರರು ಎದುರಿಸುತ್ತಿರುವ ತೊಂದರೆಗಳು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದವು ಎನ್ನಿಸುತ್ತದೆ. ಅಲ್ಲದೆ, ಎಥೆನಾಲ್‌ಗೆ ಪೂರಕವಾದ ತಂತ್ರಜ್ಞಾನವನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದ್ಯದ ಸಮಸ್ಯೆಗೆ ‍ಪರಿಹಾರ ಕಂಡುಕೊಳ್ಳಬಹುದಾಗಿದೆ.
  • ರಾಷ್ಟ್ರೀಯ ಜೈವಿಕ ಇಂಧನ ನೀತಿ–2018’ ಪ್ರಕಾರ, ಪೆಟ್ರೋಲ್ಗೆ ಶೇ 20ರಷ್ಟು ಎಥೆನಾಲ್ ಸೇರಿಸುವ ಯೋಜನೆ, 2030 ವೇಳೆಗೆ ಜಾರಿಗೆ ಬರಬೇಕಿತ್ತು. ಇದಕ್ಕಾಗಿ ರೋಡ್ ಮ್ಯಾಪ್ ತಯಾರಿಸಿದ ಕೇಂದ್ರ ಸರ್ಕಾರದ ತಜ್ಞ ಸಮಿತಿಯು 2021ರಲ್ಲಿ ವರದಿ ನೀಡಿ, 2022ಕ್ಕೆ–10’ ಮತ್ತು 2023–25 ಅವಧಿಯಲ್ಲಿ–20’ ಮಿಶ್ರಿತ ಇಂಧನ ಬಳಸಲು ಶಿಫಾರಸು ಮಾಡಿತ್ತು. ಇದಕ್ಕೆ ಪೂರಕವಾಗಿ, ಮಾರುಕಟ್ಟೆಗೆ ಬರುವ ಹೊಸ ವಾಹನಗಳು ಶೇ 20 ಎಥೆನಾಲ್ ಬಳಸಿಕೊಂಡು ಓಡುವ  ಕ್ಷಮತೆ ಪಡೆದಿರಬೇಕು ಎಂದೂ ಹೇಳಿತ್ತು. 2070ರ ಶೂನ್ಯ ಇಂಗಾಲ ಉತ್ಸರ್ಜನೆ ಗುರಿ ತಲುಪಲು ಇದು ಅನಿವಾರ್ಯ ಎಂದು ಸಮಿತಿ ನಿರ್ಧರಿಸಿತ್ತು
  • ಎಥೆನಾಲ್ ಒಂದು ಬಗೆಯ ಆಲ್ಕೋಹಾಲ್. ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ ಮತ್ತು ಅಕ್ಕಿಯಂತಹ ಬೆಳೆಗಳಿಂದ ತಯಾರಿಸಲಾಗುವ ಜೈವಿಕ ಇಂಧನ. ರಸಾಯನ ವಿಜ್ಞಾನದಲ್ಲಿ ಇದನ್ನು ಈಥೈಲ್ ಆಲ್ಕೋಹಾಲ್ ಎನ್ನುತ್ತೇವೆ. ಕಾರು ಮತ್ತು ಬೈಕುಗಳಿಗೆ ತುಂಬಿಸುವ ಪೆಟ್ರೋಲ್‌ಗೆ ಇದನ್ನು ಸೇರಿಸುವುದರಿಂದ, ಇಂಧನ ಕ್ಷಮತೆ ಕಡಿಮೆ ಆಗಿರುವುದು ನಿಜ. 2023ಕ್ಕೂ ಮುಂಚೆ ತಯಾರಾದ ವಾಹನಗಳು ಎಥೆನಾಲ್‌ಯುಕ್ತ ಇಂಧನ ಬಳಕೆಗೆ ಯೋಗ್ಯವಲ್ಲ ಎಂಬುದೂ ಸಮಸ್ಯೆಯಾಗಿ ಪರಿಣಮಿಸಿದೆ.
  • ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಕಡಿಮೆ ದಹನ ಶಕ್ತಿಯನ್ನು ಹೊಂದಿರುವುದರಿಂದ, ಮೈಲೇಜ್‌ನಲ್ಲಿ ಕುಸಿತವಾಗುತ್ತದೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ ಹೇಳಿದೆ. ಎಥೆನಾಲ್ ಬಳಕೆಗೆ ಯೋಗ್ಯವಿರುವ ನಾಲ್ಕು ಚಕ್ರ ವಾಹನಗಳ ಇಂಧನ ಕ್ಷಮತೆ ಶೇ 6ರಿಂದ 8ರಷ್ಟು ಮತ್ತು ದ್ವಿಚಕ್ರ ವಾಹನಗಳ ಮೈಲೇಜ್ ಶೇ 3ರಿಂದ 4ರಷ್ಟು ಕಡಿಮೆಯಾಗಿದೆ. ಈ ವಾಹನಗಳು ಶೇ 5ರಿಂದ 10ರಷ್ಟು ಎಥೆನಾಲ್ ಬಳಕೆಗೆ ಸೂಕ್ತವಾಗಿದ್ದವು ಎನ್ನಲಾಗಿದೆ. ಇದ್ದಕ್ಕಿದ್ದಂತೆ ಶೇ 20ರಷ್ಟು ಎಥೆನಾಲ್‌ಯುಕ್ತ ಇಂಧನ ಕಡ್ಡಾಯದ ಸರ್ಕಾರದ ಕ್ರಮದಿಂದ ಕೋಟ್ಯಂತರ ವಾಹನ ಸವಾರರು ಆತಂಕದಲ್ಲಿದ್ದಾರೆ.
  • ಎಥೆನಾಲ್ ಬಳಕೆಯಿಂದ ಶೇ 65ರಷ್ಟು ಇಂಗಾಲದ ಡೈಆಕ್ಸೈಡ್ ಉತ್ಸರ್ಜನೆ ಕಡಿಮೆ ಆಗುತ್ತದೆ ಎಂದು ನೀತಿ ಆಯೋಗ ಹೇಳುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಶೇ 20 ಎಥೆನಾಲ್ ಬಳಕೆಯಿಂದಾಗಿ ವಾರ್ಷಿಕ ಸುಮಾರು 10 ದಶಲಕ್ಷ ಟನ್‌ಗಳಷ್ಟು ಶಾಖವರ್ಧಕ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡಬಹುದು. ನಿವ್ವಳ ಶೂನ್ಯ ಹೊರಸೂಸುವಿಕೆ (ನೆಟ್‌ ಜೀರೊ ಎಮಿಷನ್) ಗುರಿಯನ್ನು ಇಟ್ಟುಕೊಂಡಿರುವ ನಾವು, ಎಥೆನಾಲ್ ಬಳಕೆಗೆ ಮುಂದಾಗಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ
  • ಭಾರತವು ತನ್ನ ಕಚ್ಚಾ ತೈಲ ಅಗತ್ಯಗಳಿಗಾಗಿ ಶೇ 85ಕ್ಕೂ ಹೆಚ್ಚು ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿದೆ. ಇದರಿಂದ ದೇಶದ ವಿದೇಶಿ ವಿನಿಮಯ ಮೀಸಲು ತಗ್ಗುತ್ತದೆ ಮತ್ತು ರೂಪಾಯಿ ಮೌಲ್ಯ ಕುಸಿಯತ್ತದೆ. ಎಥೆನಾಲ್ ಮಿಶ್ರಣವು ತೈಲ ಆಮದನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ಆಮದು ವೆಚ್ಚ ಕಡಿಮೆಯಾಗಿ, ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಮತ್ತು ಇಂಧನ ಭದ್ರತೆ ಹೆಚ್ಚಾಗುತ್ತದೆ. ಇದು ಪರಿಸರವನ್ನು ರಕ್ಷಿಸುವುದರ ಜೊತೆಗೆ, ರೈತರಿಗೆ ಆರ್ಥಿಕ ಶಕ್ತಿಯನ್ನು ನೀಡುವ ಶಕ್ತಿ ಪಡೆದಿದೆ. ‘ಇ–20’ ಗುರಿ ಸಾಧನೆಯಿಂದ 2024ರಿಂದೀಚೆಗೆ ಎಥೆನಾಲ್ ಕಾರ್ಯಕ್ರಮದಿಂದ ದೇಶಕ್ಕೆ ಸುಮಾರು ₹1.44 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಉಳಿದಿದೆ.
  • ತೈಲ ಆಮದಿನ ವೆಚ್ಚವು ದೇಶದ ಒಟ್ಟು ರಫ್ತು ಆದಾಯಕ್ಕಿಂತ ಹೆಚ್ಚಾದಾಗ ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣನೀಯವಾಗಿ ಹೆಚ್ಚಾಗುತ್ತದೆ. ಕಚ್ಚಾ ತೈಲ ಬೆಲೆ ಏರಿಕೆಯಾದಾಗ, ಸಾರಿಗೆ ವೆಚ್ಚ ಹೆಚ್ಚಾಗಿ– ಆಹಾರ, ಸರಕು ಸಾಗಣೆ ಮತ್ತು ಸೇವೆಗಳ ಬೆಲೆಗಳು ಏರಿಕೆಗೊಂಡು, ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಈ ಆರ್ಥಿಕ ಹೊರೆಯಿಂದ ಪಾರಾಗಲು ಮತ್ತು ಇಂಧನ ಭದ್ರತೆಯನ್ನು ಸಾಧಿಸಲು ಎಥೆನಾಲ್ ಮಿಶ್ರಣ ಆಪತ್ಬಾಂಧವನಂತೆ ಕಾಣಿಸುತ್ತಿದೆ.
  • ಎಥೆನಾಲ್ ಮಿಶ್ರಣದಿಂದ ಹಳೆಯ ವಾಹನಗಳ ಎಂಜಿನ್‌ಗಳು ಮತ್ತು ಭಾಗಗಳು ಹಾನಿಗೊಳ ಗಾಗುತ್ತವೆ. ರಬ್ಬರ್, ಪ್ಲಾಸ್ಟಿಕ್ ಮತ್ತು ಕೆಲವು ಲೋಹದ ಘಟಕಗಳನ್ನು ಎಥೆನಾಲ್ ವೇಗವಾಗಿ ಸವೆಸುತ್ತದೆ. ‘ಇ–20’ ಇಂಧನಕ್ಕೆ ಹೊಂದಿಕೊಳ್ಳುವಂತೆ ವಾಹನ ತಯಾರಕರು ಹೊಸ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವುದು ಸದ್ಯದ ತುರ್ತುಗಳಲ್ಲೊಂದು. ಸುಧಾರಿತ ಎಂಜಿನ್ ತಂತ್ರಜ್ಞಾನ (ಫ್ಲೆಕ್ಸ್–ಫ್ಯೂಯೆಲ್ ಎಂಜಿನ್‌ಗಳು) ಅಳವಡಿಕೆಯಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಅಮೆರಿಕ, ಬ್ರೆಜಿಲ್ ಮತ್ತು ಕೆನಡಾಗಳಲ್ಲಿ ‘ಇ–20’ರಿಂದ ‘ಇ–100’ವರೆಗಿನ ಎಥೆನಾಲ್ ಬಳಸಿ ಓಡುವ ವಾಹನಗಳಿವೆ. ಟಿವಿಎಸ್ ಕಂಪನಿಯು ಪುಣೆಯ ತನ್ನ ಘಟಕದಲ್ಲಿ ‘ಇ–80’ರಿಂದ ‘ಇ–100’ ಬಳಸಿ ಓಡುವ ‘ಅಪಾಚೆ’ ಹೆಸರಿನ ದ್ವಿಚಕ್ರ ವಾಹನ ತಯಾರಿಸುವಲ್ಲಿ ಯಶಸ್ವಿಯಾಗಿದೆ.
  • ಎಥೆನಾಲ್ ಉತ್ಪಾದನೆಗೆ ಧಾನ್ಯಗಳನ್ನು ಬಳಸು ವುದರಿಂದ ಆಹಾರ ಭದ್ರತೆಗೆ ಧಕ್ಕೆ ಬರುತ್ತದೆ ಮತ್ತು ಆಹಾರ ಬೆಳೆಗಳಿಗೆ ಮೀಸಲಾದ ಜಮೀನು ಒತ್ತುವರಿ ಯಾಗುತ್ತದೆ ಎಂಬ ಅಭಿಪ್ರಾಯವಿದೆ. ಕಬ್ಬು ಮತ್ತು ಮೆಕ್ಕೆಜೋಳದಂತಹ ಬೆಳೆಗಳ ಅಗತ್ಯ ಹೆಚ್ಚಾದಾಗ, ಅವುಗಳ ಕೃಷಿಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗು ತ್ತದೆಂಬ ಆತಂಕವೂ ಇದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ದತ್ತಾಂಶವು ಈ ಹೇಳಿಕೆಯನ್ನು ನಿರಾಕರಿಸುತ್ತದೆ. ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಯಲ್ಲಿ ಹೆಚ್ಚುವರಿ ಮತ್ತು ಮಾನವ ಬಳಕೆಗೆ ಅನರ್ಹವಾದ, ಹಾನಿಗೊಳಗಾದ ಆಹಾರೇತರ ಧಾನ್ಯಗಳನ್ನು ಬಳಸಲಾಗುತ್ತದೆ. ಇದರಿಂದ ಆಹಾರ ತ್ಯಾಜ್ಯ ಕಡಿಮೆಯಾಗುತ್ತದೆ ಮತ್ತು ಆಹಾರ ಲಭ್ಯತೆಗೆ ಧಕ್ಕೆಯಾಗುವುದಿಲ್ಲ. ಆಹಾರ ಧಾನ್ಯಗಳನ್ನು ಇಂಧನ ತಯಾರಿಕೆಗೆ ಬಳಸಿಯೂ ಭಾರತ ಧಾನ್ಯಗಳ ನಿವ್ವಳ ರಫ್ತುದಾರನಾಗಿದ್ದು, ಅಕ್ಕಿಯ ರಫ್ತಿನ ಪ್ರಮಾಣವು ಒಟ್ಟು ಉತ್ಪಾದನೆಯ ಶೇ 12ರಷ್ಟಿದೆ. ಕಳೆದೆರಡು ವರ್ಷಗಳಲ್ಲಿ ಭಾರತದ ಒಟ್ಟು ಕೃಷಿ ಪ್ರದೇಶವು 18 ದಶಲಕ್ಷ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ.
  • ಪ್ರಸ್ತುತ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆ ಶೇ 51ರಷ್ಟಿದೆ. ದೇಶದ 90,000 ಪೆಟ್ರೋಲ್ ಬಂಕ್‌ಗಳಲ್ಲಿ ‘ಇ–20’ ಇಂಧನ ಲಭ್ಯವಿದೆ. ಎಥೆನಾಲ್ ಉತ್ಪಾದನೆಗೆ ಕಬ್ಬಿನ ಮೇಲಿನ ಅವಲಂಬನೆ ಕಡಿಮೆಯಾಗಿ, ಉತ್ಪಾದನಾ ವೆಚ್ಚವು ಕಡಿಮೆಯಾಗಿದೆ. ಆದರೆ, ಪೆಟ್ರೋಲ್ ದರ ಮಾತ್ರ 10 ಪೈಸೆಯೂ ಕಡಿಮೆಯಾಗಿಲ್ಲ.
  • ಕಬ್ಬು, ಜೋಳದಂತಹ ಬೆಳೆಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ, ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗುತ್ತದೆ. ಇದು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ, ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬಿ, ಕೃಷಿಕರ ಕಲ್ಯಾಣಕ್ಕೆ ಮತ್ತು ಆದಾಯ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ಭಾರತದ ವಾರ್ಷಿಕ ಧಾನ್ಯ ಉತ್ಪಾದನೆಯು ಸರಿಸುಮಾರು 3,000 ಲಕ್ಷ ಟನ್‌ಗಳಷ್ಟಿದ್ದರೆ, ದೇಶೀಯ ಬಳಕೆ ಸುಮಾರು 2,000 ಲಕ್ಷ ಟನ್‌ಗಳಷ್ಟಿದೆ. ಈ ಹೆಚ್ಚುವರಿಯು, ಬಳಕೆ ಮತ್ತು ಎಥೆನಾಲ್ ಉತ್ಪಾದನೆ ಎರಡಕ್ಕೂ ಸಾಕಾಗುತ್ತದೆ.
  • ಪೆಟ್ರೋಲ್‌ಗೆ ಶೇ 20 ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ನಿರ್ಧಾರವು ದೂರದೃಷ್ಟಿಯುಳ್ಳ ಕ್ರಮವಾಗಿದ್ದು, ಪಳೆಯುಳಿಕೆ ಇಂಧನಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವತ್ತ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ. ಈ ಬದಲಾವಣೆ ಯಶಸ್ವಿ ಆಗಬೇಕಾದರೆ, ಮೈಲೇಜ್ ಕಡಿತ ಮತ್ತು ಹಳೆಯ ವಾಹನಗಳ ‘ಇ–20’ ಹೊಂದಾಣಿಕೆಯ ಸವಾಲುಗಳನ್ನು ವಿಳಂಬವಿಲ್ಲದೆ ಪರಿಹರಿಸಬೇಕು. ಹಾಗೆಯೇ, ಆಹಾರ ಮತ್ತು ನೀರಿನ ಸಂಪನ್ಮೂಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗದಂತೆ ಎಥೆನಾಲ್ ಉತ್ಪಾದನಾ ನೀತಿಗಳನ್ನು ಸರ್ಕಾರ ರೂಪಿಸಬೇಕು. ಒಟ್ಟಿನಲ್ಲಿ, ದೂರಗಾಮಿ ಪರಿಣಾಮಗಳನ್ನುಳ್ಳ ಈ ಇಂಧನ ಕ್ರಾಂತಿಯು ಭಾರತಕ್ಕೆ ಬಹುದೊಡ್ಡ ಲಾಭ ತರಬಲ್ಲದು. ಆದರೆ, ಪೆಟ್ರೋಲ್‌ನಲ್ಲಿ ಹೆಚ್ಚಿನ ಎಥೆನಾಲ್‌ ಬಳಕೆಗೆ ಸಂಬಂಧಿಸಿದ ನೀತಿಯಲ್ಲಿ ಸರ್ಕಾರ ಸಮತೋಲನ ಕಾಪಾಡಿಕೊಳ್ಳುವುದು ಹಾಗೂ ಬಳಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ.
  • ಸರ್ ಕ್ರೀಕ್ಜೌಗು ನೆಲ ಜಗಳ
  • ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಣೆ

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ಅಂದಾಜನ್ನು ವಿಶ್ವಬ್ಯಾಂಕ್‌ ಪರಿಷ್ಕರಿಸಿದ್ದು, ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇರಲಿದೆ ಎಂದು ಹೇಳಿದೆ. ಈ ಮೊದಲಿನ ಅಂದಾಜಿನಲ್ಲಿ ವಿಶ್ವಬ್ಯಾಂಕ್‌, ಬೆಳವಣಿಗೆ ಪ್ರಮಾಣವು ಶೇ 6.3ರಷ್ಟು ಆಗಬಹುದು ಎಂದು ಹೇಳಿತ್ತು.

  • ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತವು ದಾಖಲಿಸುವ ನಿರೀಕ್ಷೆ ಇದೆ ಎಂದು ಕೂಡ ಅದು ಹೇಳಿದೆ. ಬೇಡಿಕೆಯಲ್ಲಿನ ಹೆಚ್ಚಳವು ದೇಶದ ಆರ್ಥಿಕ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ.
  • ಭಾರತದ ಸರಕುಗಳಿಗೆ ಅಮೆರಿಕವು ಶೇ 50ರಷ್ಟು ಸುಂಕವನ್ನು ವಿಧಿಸಿರುವ ಪರಿಣಾಮವು ಮುಂದಿನ ವರ್ಷದಲ್ಲಿ ಕಾಣಿಸಲಿದೆ ಎಂದು ವಿಶ್ವ ಬ್ಯಾಂಕ್‌ ಅಂದಾಜಿಸಿದೆ. ಹೀಗಾಗಿ, 2026–27ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣದ ಅಂದಾಜನ್ನು ತಗ್ಗಿಸಲಾಗಿದ್ದು, ಅದು ಶೇ 6.3ರಷ್ಟು ಇರಲಿದೆ ಎಂದು ಹೇಳಿದೆ.
  • ಕೃಷಿ ಉತ್ಪಾದನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೂಲಿ ಮೊತ್ತವು ನಿರೀಕ್ಷೆಗಿಂತ ಹೆಚ್ಚಾಗಿದೆ. ಜಿಎಸ್‌ಟಿ ದರವನ್ನು ತಗ್ಗಿಸುವ ಮೂಲಕ ಸರ್ಕಾರ ತಂದಿರುವ ಸುಧಾರಣೆಗಳು ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
  • ಮೂವರಿಗೆ ಭೌತವಿಜ್ಞಾನ ನೊಬೆಲ್

ಸಂದರ್ಭ: ‘ಕ್ವಾಂಟಮ್‌ ಮೆಕ್ಯಾನಿಕಲ್‌ ಟನಲಿಂಗ್‌’ ಸಂಬಂಧಿತ ಮಹತ್ವದ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು 2025ನೇ ಸಾಲಿನ ಭೌತವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್‌ ಅಕಾಡೆಮಿ ಘೋಷಿಸಿದೆ.

  • ಬ್ರಿಟನ್‌ನ ಜಾನ್‌ ಕ್ಲಾರ್ಕ್‌, ಫ್ರಾನ್ಸ್‌ನ ಮೈಕಲ್‌ ಎಚ್‌. ಡೆವೊರೆಟ್‌ ಮತ್ತು ಅಮೆರಿಕದ ಜಾನ್‌ ಎಂ. ಮಾರ್ಟಿನಿಸ್‌ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ. ಈ ಮೂವರೂ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ಉಪನ್ಯಾಸಕರಾಗಿದ್ದಾರೆ.
  • ಆಲ್ಫ್ರೆಡ್‌ ನೊಬೆಲ್‌ ಅವರ ಪುಣ್ಯತಿಥಿ ಅಂಗವಾಗಿ ಡಿ.10ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪುರಸ್ಕಾರವು 1.2 ದಶಲಕ್ಷ ಡಾಲರ್‌ (ಅಂದಾಜು ₹10.65 ಕೋಟಿ) ನಗದು ಪುರಸ್ಕಾರವನ್ನು ಒಳಗೊಂಡಿದೆ.
  • 1901ರಿಂದ 2024ರವರೆಗೆ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರಕ್ಕೆ 226 ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದ ಸಂಶೋಧನೆಗಳಿಗಾಗಿ ಕಳೆದ ಬಾರಿ ಜಾನ್‌ ಹಾಪ್‌ಫೀಲ್ಡ್ ಮತ್ತು ಜಾಫ್ರಿ ಹಿಂಟನ್‌ ಅವರಿಗೆ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಲಭಿಸಿತ್ತು.
  • ಮೇರಿ ಬ್ರಂಕೋ, ಫ್ರೆಡ್‌ ರಾಮ್ಸ್‌ಡೆಲ್‌ ಹಾಗೂ ಜಪಾನ್‌ನ ಶಿಮೊನ್‌ ಸಕಾಗುಚಿ ಅವರಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿತ್ತು.

ಪ್ರಚಲಿತ ವಿದ್ಯಮಾನಗಳು: 7ನೇ ಅಕ್ಟೋಬರ್ 2025

  • ಬೌದ್ಧಧರ್ಮ ಸೇರಿದ್ದರೆ ಎಸ್ಸಿ ಪ್ರಮಾಣಪತ್ರ

ಸಂದರ್ಭ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರ ‍ಪೈಕಿ ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಅಂಥವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.

  • ಕೇಂದ್ರ ಸರ್ಕಾರ 1990ರ ನ. 20ರಂದು ಬರೆದ ಪತ್ರದಲ್ಲಿದ್ದ ಸೂಚನೆಯಂತೆ, ‘ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಮತ್ತು ಧರ್ಮದ ಕಾಲಂನಲ್ಲಿ ಬೌದ್ದ ಧರ್ಮ ಎಂದು ನಮೂದಿಸುವಂತೆ ಜಾತಿ ಪ್ರಮಾಣಪತ್ರ ನೀಡುವ ಪ್ರಾಧಿಕಾರಿಗಳಿಗೆ ರಾಜ್ಯ ಸರ್ಕಾರ 2013ರ ಡಿ. 9ರಂದೇ ಆದೇಶ ನೀಡಿತ್ತು.
  • ಆದರೆ, ಹೀಗೆ ಮತಾಂತರ ಗೊಂಡವರಿಗೆ ಜಾತಿ ಪ್ರಮಾಣಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಆದೇಶ ಹೊರಡಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಹಲವು ಸಂಘಸಂಸ್ಥೆಗಳು ಮನವಿ ಸಲ್ಲಿಸಿದ್ದವು.
  • ಈ ಕಾರಣಕ್ಕೆ ಮತ್ತೆ ಆದೇಶ ಹೊರಡಿಸಿರುವ ಇಲಾಖೆ, ‘ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ಜಾತಿ ಪ್ರಮಾಣಪತ್ರ ಪಡೆಯಲು ಸಲ್ಲಿಸುವ ಅರ್ಜಿಗಳಲ್ಲಿ ಧರ್ಮದ ಕಾಲಂನಲ್ಲಿ ‘ಬೌದ್ಧ’ (ಬುದ್ಧಿಸಂ) ಎಂದು ನಮೂದಿಸಲು ಅವಕಾಶ ಕಲ್ಪಿಸಬೇಕು. ಅರ್ಜಿದಾರರು ಅಥವಾ ಪೋಷಕರು ಇಚ್ಚಿಸಿದರೆ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಇತರ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿನ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿಯೂ ಬೌದ್ಧ ಎಂದು ನಮೂದಿಸಲು ಅವಕಾಶ ನೀಡಬೇಕು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ನಿಗಮ ಮಂಡಳಿಗಳು, ಇತರ ಸಂಸ್ಥೆಗಳು ಈ ಆದೇಶದಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದೆ.
  • ಅಪರಾಧ ಹೆಚ್ಚು, ಶಿಕ್ಷೆ ಕಡಿಮೆ
  • ಸೇವಾ ವಲಯ ಪ್ರಗತಿ ಇಳಿಕೆ

ಸಂದರ್ಭ: ದೇಶದ ಸೇವಾ ವಲಯದ ಚಟುವಟಿಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಇಳಿಕೆಯಾಗಿದೆ ಎಂದು ಮಾಸಿಕ ಸಮೀಕ್ಷೆಯ ವರದಿಯೊಂದು ತಿಳಿಸಿದೆ.

  • ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 60.9 ದಾಖಲಾದೆ. ಇದು ಆಗಸ್ಟ್‌ನಲ್ಲಿ 62.9ರಷ್ಟಿತ್ತು. ಆಗಸ್ಟ್‌ನ ಮಟ್ಟವು 15 ವರ್ಷಗಳ ಗರಿಷ್ಠವಾಗಿತ್ತು.
  • ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
  • ‘ದೇಶದ ಸೇವಾ ವಲಯದ ಚಟುವಟಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯು ತೀವ್ರಗತಿಯಲ್ಲಿ ಹೆಚ್ಚುತ್ತಿಲ್ಲ. ಹೀಗಾಗಿ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಸೂಚ್ಯಂಕವು ಇಳಿಕೆ ಕಂಡಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್‌ ಭಂಡಾರಿ ಹೇಳಿದ್ದಾರೆ.
  • ಮೂವರಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್

ಸಂದರ್ಭ: ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ವಿಜ್ಞಾನಿಗಳಾದ ಅಮೆರಿಕದ ಮೇರಿ ಈ. ಬ್ರಂಕೋ, ಫ್ರೆಡ್‌ ರಾಮ್ಸ್‌ಡೆಲ್‌ ಹಾಗೂ ಜಪಾನ್‌ನ ಶಿಮೋನ್‌ ಸಕಾಗುಚಿ ಅವರಿಗೆ 2025ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

  • ಸ್ಟಾಕ್‌ಹೋಮ್‌ನ ಕರೊಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ವೈದ್ಯಕೀಯ ನೊಬೆಲ್‌ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸುವುದರೊಂದಿಗೆ ಈ ವರ್ಷದ ನೊಬೆಲ್‌ ಪುರಸ್ಕಾರ ಘೋಷಣೆಗೆ ಚಾಲನೆ ಸಿಕ್ಕಂತಾಗಿದೆ.
  • ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಲ್ಲ ‘ಮೈಕ್ರೋಆರ್‌ಎನ್‌ಎ’ ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್‌ ಆ್ಯಂಬ್ರೊಸ್ ಮತ್ತು ಗ್ಯಾರಿ ರುವ್ಕನ್‌ ಅವರಿಗೆ ಕಳೆದ ವರ್ಷ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ದೊರೆತಿತ್ತು.
  • ಭೌತವಿಜ್ಞಾನ, ರಸಾಯನ ವಿಜ್ಞಾನ ಕ್ಷೇತ್ರಗಳ ಪ್ರಶಸ್ತಿ ವಿಜೇತರ ಹೆಸರನ್ನು ಕ್ರಮವಾಗಿ ಹಾಗೂ ಬುಧವಾರ ಪ್ರಕಟಿಸಲಾಗುತ್ತದೆ.
  • ಸಾಹಿತ್ಯ ಕ್ಷೇತ್ರದ ಪುರಸ್ಕಾರವನ್ನು ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾ ಗುತ್ತದೆ. ಅ.13ರಂದು ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರ ಘೋಷಿಸಲಾಗುತ್ತದೆ. ಡಿಸೆಂಬರ್‌ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
  • ಇಸ್ರೇಲ್‌–ಹಮಾಸ್ಮಾತುಕತೆ ಆರಂಭ

ಸಂದರ್ಭ: ಯುದ್ಧ ಅಂತ್ಯಗೊಳಿಸಲು ಅಮೆರಿಕವು ಸಿದ್ಧಪಡಿಸಿದ ಶಾಂತಿ ಯೋಜನೆ ಕುರಿತು ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರ ಸಂಘಟನೆಯ ನಿಯೋಗಗಳು ಈಜಿಪ್ಟ್‌ನ ರೆಸಾರ್ಟ್‌ವೊಂದರಲ್ಲಿ ಮಧ್ಯಾಹ್ನ ದಿಂದ ಮಾತುಕತೆ ಆರಂಭಿಸಿವೆ. ಈಜಿಪ್ಟ್‌ ಹಾಗೂ ಕತಾರ್‌ ಮಾತುಕತೆಯ ಮಧ್ಯಸ್ಥಿಕೆ ವಹಿಸಿವೆ.

  • ಯುದ್ಧವು ಆರಂಭಗೊಂಡು ಅ.7ಕ್ಕೆ ಎರಡು ವರ್ಷ ಪೂರೈಸ ಲಿದೆ. ಈ ಸಭೆಯಲ್ಲಿ ಅಮೆರಿಕದ ಮಧ್ಯಪ್ರಾಚ್ಯದ ರಾಯಭಾರಿ ಸ್ಟೀವ್‌ ವಿಟ್‌ಆಫ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಳಿಯ ಜರೆಡ್‌ ಕುಶ್ನರ್ ಅವರೂ ಭಾಗಿಯಾಗಲಿದ್ದಾರೆ.
  • ಮೊದಲ ಹಂತದಲ್ಲಿ ಯಾವ ರೀತಿಯಲ್ಲಿ ಕದನವಿರಾಮ ಇರ ಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್‌ ಸೇನೆಯು ಭಾಗಶಃ ವಾಪಸಾಗಬೇಕು. ಇಸ್ರೇಲ್‌ ವಶದಲ್ಲಿರುವ ಪ್ಯಾಲೆಸ್ಟೀನ್‌ನ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಹಮಾಸ್‌ ವಶದಲ್ಲಿ ಇರುವ ಇಸ್ರೇಲ್‌ ಒತ್ತೆಯಾಳುಗಳು ಬಿಡುಗಡೆ ಮಾಡುವುದರ ಕುರಿತೂ ಮಾತುಕತೆ ನಡೆಯಲಿದೆ.
  • 3 ರಾಜ್ಯಗಳಿಗೆ ಎನ್ಎಚ್ಆರ್ಸಿ ನೋಟಿಸ್

ಸಂದರ್ಭ: ಮಕ್ಕಳಲ್ಲಿ ಕೆಮ್ಮಿನ ಔಷಧಿಗಳ ಬಳಕೆಯ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ ಕೇರಳ ಸರ್ಕಾರ

ಮಕ್ಕಳ ದುರಂತ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಮೋಹನ್ ಯಾದವ್ ಮುಖ್ಯಮಂತ್ರಿ, ಮಧ್ಯಪ್ರದೇಶ.

  • ಕೆಮ್ಮಿನ ಸಿರಪ್‌ ಸೇವನೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು (ಎನ್‌ಎಚ್ಆರ್‌ಸಿ) ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್‌ ನೀಡಿದೆ.
  • ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕಲಬೆರಕೆ ಔಷಧಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸುವಂತೆ ನಿರ್ದೇಶಿಸಿದೆ.
  • ಕಲಬೆರಕೆ ಔಷಧಗಳ ಪೂರೈಕೆ ಬಗ್ಗೆಯೂ ತನಿಖೆ ನಡೆಸಲು ಆದೇಶಿಸುವಂತೆ ಹಾಗೂ ಅಂತಹ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಾ ವರದಿ ನೀಡಲು ಎಲ್ಲ ಪ್ರಾದೇಶಿಕ ಪ್ರಯೋಗಾಲಯಗಳಿಗೆ ಸೂಚನೆ ನೀಡಲು, ಭಾರತೀಯ ಔಷಧ ನಿಯಂತ್ರಣ ವಿಭಾಗ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ,ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಎನ್‌ಎಚ್‌ಆರ್‌ಸಿ ಆದೇಶಿಸಿದೆ.
  • ಕಲಬೆರಕೆ ಔಷಧಿಗಳನ್ನು ನಿಷೇಧಿಸಿರುವ ಕುರಿತು ವರದಿ ನೀಡಲು ಮೂರು ರಾಜ್ಯಗಳ ಮುಖ್ಯ ಔಷಧ ನಿಯಂತ್ರಕರಿಗೆ ಆದೇಶ ನೀಡುವಂತೆಯೂ ಸೂಚಿಸಿದೆ.
  • ಔಷಧ ನಿಯಂತ್ರಕರ ವರ್ಗಾವಣೆ (ಛಿಂದ್ವಾಢ ವರದಿ): ಕೆಮ್ಮಿನ ಸಿರಪ್‌ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ 14 ಮಕ್ಕಳು ಮೃತಪಟ್ಟ ಪ್ರಕರಣದ ತನಿಖೆ ನಡೆದಿರುವಾಗಲೇ, ರಾಜ್ಯದ ಔಷಧ ನಿಯಂತ್ರಕರಾದ ದಿನೇಶ್‌ ಮೌರ್ಯ ಅವರನ್ನು ಮಧ್ಯಪ್ರದೇಶ ಸರ್ಕಾರ ವರ್ಗಾಯಿಸಿದೆ.
  • ಛಿಂದ್ವಾಢದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಗೌರವ್ ಶರ್ಮಾ, ಜಬಲ್‌ಪುರದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಶರದ್‌ ಕುಮಾರ್ ಜೈನ್ ಹಾಗೂ ಆಹಾರ ಮತ್ತು ಔಷಧ ಆಡಳಿತದ ಉಪ ನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಎಸ್‌ಐಟಿ ರಚನೆ: ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.
  • ವೈದ್ಯರು ಶಿಫಾರಸಿಗೆ ಮಾತ್ರ ಔಷಧಿ ಕೊಡಿ

ಸಂದರ್ಭ: ವೈದ್ಯರು ಶಿಫಾರಸು ಮಾಡಿದರೆ ಮಾತ್ರ 12 ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಬೇಕು ಎಂದು ಕೇರಳ ಆರೋಗ್ಯ ಇಲಾಖೆ ಆದೇಶಿಸಿದೆ.

  • ಮಕ್ಕಳಲ್ಲಿ ಕೆಮ್ಮಿನ ಔಷಧಿಗಳ ಬಳಕೆಯ ಅಧ್ಯಯನ ಮಾಡಲು ಮೂವರು ತಜ್ಞರ ಸಮಿತಿ ರಚಿಸಿದ್ದು, ತುರ್ತು ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಉನ್ನತ ಮಟ್ಟದ ಸಭೆಯ ನಂತರ ಇಲ್ಲಿ ತಿಳಿಸಿದರು. ರಾಜ್ಯ ಔಷಧ ನಿಯಂತ್ರಕ, ಮಕ್ಕಳ ಆರೋಗ್ಯ ನೋಡಲ್‌ ಅಧಿಕಾರಿ ಮತ್ತು ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.
  • ಈ ಸಮಿತಿ ನೀಡುವ ವರದಿಯು ಮಕ್ಕಳಲ್ಲಿ ಕೆಮ್ಮು ಸಿರಪ್‌ ಬಳಕೆಗೆ ಹೊಸ ಮಾರ್ಗಸೂಚಿ ರೂಪಿಸಲು ಸಹಾಯ ಮಾಡಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • ‘ವೈದ್ಯರು ಈ ಹಿಂದೆಯೇ ನೀಡಿದ್ದ ಔಷಧ ಸಲಹಾ ಚೀಟಿಗಳನ್ನು ಬಳಸಿಕೊಂಡು ಔಷಧಿಗಳನ್ನು ವಿತರಿಸಬಾರದು. ಈ ಕುರಿತಂತೆ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ವೀಣಾ ಹೇಳಿದ್ದಾರೆ.
  • ಎಸ್‌ಆರ್‌–13 ಬ್ಯಾಚ್‌ನ ಕೋಲ್ಡ್ರಿಫ್‌ ಸಿರಪ್‌ ಸೇವಿಸಿದ ಕೆಲವು ಮಕ್ಕಳು ಬೇರೆ ರಾಜ್ಯಗಳಲ್ಲಿ ಮೃತಪಟ್ಟಿದ್ದರಿಂದ, ಡ್ರಗ್ಸ್‌ ನಿಯಂತ್ರಣ ಇಲಾಖೆಯು ರಾಜ್ಯದಲ್ಲಿ ಅದರ ಮಾರಾಟವನ್ನು ಸ್ಥಗಿತಗೊಳಿಸಿದೆ.
  • ವಿಷಕಾರಿ ಅಂಶವನ್ನು ಹೊಂದಿರುವ ಕೋಲ್ಡ್ರಿಫ್‌ ಕಂಪನಿಯ ಕೆಮ್ಮಿನ ಸಿರಪ್‌ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ತೆಲಂಗಾಣ ಸರ್ಕಾರವು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಪ್ರಚಲಿತ ವಿದ್ಯಮಾನಗಳು: 6ನೇ ಅಕ್ಟೋಬರ್ 2025

  • ಕೆಮ್ಮಿನ ಸಿರಪ್ ಗುಣಮಟ್ಟದ ಸುತ್ತ

ಸಂದರ್ಭ: 2019ರ ಮಳೆಗಾಲದಲ್ಲಿ ಜಮ್ಮು ಪ್ರಾಂತ್ಯದಲ್ಲಿ ಕೆಮ್ಮು, ನೆಗಡಿಯಿಂದ ಬಳಸುತ್ತಿದ್ದ ಕೆಲವು ಮಕ್ಕಳಿಗೆ ವೈದ್ಯರು ಕೆಮ್ಮಿನ ಸಿರಪ್ ನೀಡಿದ್ದರು. ಕೆಲವೇ ದಿನಗಳಲ್ಲಿ ಅವರ ಕಿಡ್ನಿಗಳು ವಿಫಲವಾಗಿ 11 ಮಕ್ಕಳು ಸತ್ತುಹೋದರು. ಸತ್ತವರು ಆರು ತಿಂಗಳಿನಿಂದ ಹಿಡಿದು 6 ವರ್ಷದ ಒಳಗಿನವರಾಗಿದ್ದರು. ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಎನ್ನುವ ಅಪಾಯಕಾರಿ ರಾಸಾಯನಿಕ ಇದ್ದುದು ದೃಢಪಟ್ಟಿತ್ತು.

  • ಅಂದಿನಿಂದಲೂ ಭಾರತದಲ್ಲಿ ತಯಾರಾಗುವ ಕೆಲವು ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇವೆ. ಅದನ್ನು ಪುಷ್ಟೀಕರಿಸುವಂತೆ, ದೇಶದ ಒಳಗೆ ಮತ್ತು ಹೊರದೇಶಗಳಲ್ಲಿ ಕೆಮ್ಮಿನ ಸಿರಪ್ ಕುಡಿದ ಮಕ್ಕಳು ಸಾವಿಗೀಡಾಗುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇವೆ.
  • ಕೆಮ್ಮಿನ ಸಿರಪ್‌ಗಳಿಂದ ಸಾವುಗಳು ಸಂಭವಿಸುತ್ತಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಲಾಗುತ್ತದೆ. ಮೊದಲನೆಯದು, ಸಿರಪ್ಗಳ ಕಳಪೆ ಗುಣಮಟ್ಟ. ಎರಡನೆಯದು, ಭಾರತದಲ್ಲಿ ಔಷಧಗಳ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು.
  • ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಔಷಧಗಳು ತಯಾರಾಗುತ್ತಿದ್ದರೂ ಅವುಗಳ ಗುಣಮಟ್ಟ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವ ದೂರು ಇದೆ. ಹೊಸ ಔಷಧಗಳಿಗೆ ಅನುಮತಿ ನೀಡುವುದು, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಆಮದು, ರಫ್ತು ಇತ್ಯಾದಿ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಔಷಧಗಳ ಗುಣಮಟ್ಟ ನಿಯಂತ್ರಣದ ಉಸ್ತುವಾರಿಯನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘ (ಸಿಡಿಎಸ್‌ಎಸ್‌ಒ) ವಹಿಸುತ್ತದೆ. ಗುಣಮಟ್ಟ ಪರೀಕ್ಷೆಗಾಗಿ ಏಳು ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯಗಳಿವೆ. ಆದರೆ, ಇವುಗಳಲ್ಲಿ ಮೂಲಸೌಕರ್ಯಗಳು ಮತ್ತು ಸಿಬ್ಬಂದಿಯ ಕೊರತೆ ಇದ್ದು, ನಿರೀಕ್ಷೆಯಂತೆ ಗುಣಮಟ್ಟ ಪರೀಕ್ಷೆ ನಡೆಯುತ್ತಿಲ್ಲ ಎನ್ನುವ ಆರೋಪಗಳಿವೆ.
  • 2007 ಮತ್ತು 2020ರ ನಡುವೆ ದೇಶದ ಆರು ರಾಜ್ಯ ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಗ್ರಹಿಸಲಾಗಿದ್ದ 7,500 ಔಷಧ ಮಾದರಿಗಳು ಅಗತ್ಯ ಗುಣಮಟ್ಟ ಹೊಂದಿಲ್ಲ ಎಂದು ವರದಿಯಾಗಿತ್ತು. ಆದರೆ, ಹೀಗೆ ಕಳಪೆ ಗುಣಮಟ್ಟ ಎಂದು ಕಂಡುಬಂದ ನಂತರ ಅವುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವ ವ್ಯವಸ್ಥೆ ಇಲ್ಲ ಎನ್ನಲಾಗುತ್ತಿದೆ. ಇಂಥ ಕಳಪೆ ಔಷಧಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತವೆ ಎಂದೂ ಕೆಲವು ವರದಿಗಳು ಹೇಳುತ್ತವೆ.
  • ಕೇಂದ್ರದ ನಿರಾಕರಣೆ: ಆದರೆ, ಈಗಿನ ಪ್ರಕರಣ ಮತ್ತು ಈ ಹಿಂದಿನ ಪ್ರಕರಣಗಳಲ್ಲಿಯೂ ಕೆಮ್ಮಿನ ಸಿರಪ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದುದೇ ಮಕ್ಕಳ ಸಾವಿಗೆ ಕಾರಣ ಎನ್ನುವ ವಾದವನ್ನು ಕೇಂದ್ರ ಸರ್ಕಾರವು ನಿರಾಕರಿಸುತ್ತಲೇ ಬಂದಿದೆ.
  • ಭಾರತವು ‘ಜಗತ್ತಿನ ಗುಣಮಟ್ಟದ ಔಷಧಾಲಯ’ ಆಗಿದೆ ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರವು ಗುಣಮಟ್ಟ ಕಾಯ್ದುಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿಯೂ ಹೇಳಿದೆ. ಸಾವುಗಳಿಗೆ ವೈದ್ಯರ ತಪ್ಪುಗಳು ಕಾರಣವಾಗಿರಬಹುದು ಎನ್ನುವುದು ಅದರ ವಾದ.
  • ಭಾರತದ ಔಷಧಗಳು ಕಳ‍ಪೆ ಎನ್ನುವುದರ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಡಬ್ಲ್ಯುಎಚ್‌ಒ ಅನ್ನು ಕೇಳಿದ್ದೇವೆ. ಆದರೆ, ನಮಗೆ ಇದುವರೆಗೂ ಅದರ ವಿವರಗಳು ಸಿಕ್ಕಿಲ್ಲ ಎಂದು 2023ರಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮನ್ಸುಖ್‌ ಮಾಂಡವೀಯ ಹೇಳಿದ್ದರು.

ಮಾರಕವಾದ ಕೆಮ್ಮಿನ ಸಿರಪ್

  • l 2019–20ರಲ್ಲಿ ಜಮ್ಮು ಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ್ದ 11 ಮಕ್ಕಳು ಸಾವು. ಡಿಜಿಟಲ್‌ ವಿಷನ್‌ ಎಂಬ ಕಂಪನಿ ಈ ಸಿರಪ್ ತಯಾರಿಸಿತ್ತು. ಬಣ್ಣ, ಶಾಯಿ, ಬ್ರೇಕ್‌ ಆಯಿಲ್‌ ತಯಾರಿಕೆಗೆ ಬಳಸುವ ಡೈಎಥಿಲೀನ್‌ ಗ್ಲೈಕಾಲ್‌ (ಡಿಇಜಿ) ಎಂಬ ರಾಸಾಯನಿಕ ಈ ಸಿರಪ್‌ನಲ್ಲಿ ಇರುವುದು ಪತ್ತೆಯಾಗಿತ್ತು
  • l 2022ರಲ್ಲಿ ಪಶ್ಚಿಮ ಆಫ್ರಿಕಾದ ದೇಶವಾದ ಗ್ಯಾಂಬಿಯಾದಲ್ಲಿ ಭಾರತದಿಂದ ಆಮದು ಮಾಡಿಕೊಂಡಿದ್ದ ನಾಲ್ಕು ಕೆಮ್ಮಿನ ಸಿರಪ್‌ಗಳನ್ನು ಸೇವಿಸಿ 66 ಮಕ್ಕಳು ಮೃತಪಟ್ಟಿದ್ದರು. ಮೈಡೆನ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ತಯಾರಿಸಿದ್ದ ಸಿರಪ್‌ನಲ್ಲಿ ಡೈಎಥಿಲೀನ್‌ ಗ್ಲೈಕಾಲ್‌ ಮಿತಿ ಮೀರಿದ ಪ್ರಮಾಣದಲ್ಲಿತ್ತು
  • l 2022ರ ಡಿಸೆಂಬರ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ಭಾರತದ ಕಂಪನಿಯೊಂದು ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಸೇವಿಸಿ 22 ಮಕ್ಕಳು ಕೊನೆಯುಸಿರೆಳೆದಿದ್ದರು. ಮ್ಯಾರಿಯನ್‌ ಬಯೊಟೆಕ್‌ ಕಂಪನಿ ತಯಾರಿಸಿದ್ದ ಈ ಸಿರಪ್‌ಗಳಲ್ಲಿ ಡಿಇಜಿ ಪ್ರಮಾಣ ಹೆಚ್ಚಿದ್ದುದು ಕಂಡು ಬಂದಿತ್ತು

ಕಳಪೆ, ಕಲಬೆರಕೆ

  • ಜಗತ್ತಿನ ಅತಿದೊಡ್ಡ ಔಷಧ ಉತ್ಪಾದಕ ರಾಷ್ಟ್ರಗಳಲ್ಲಿ ಭಾರತವು ಮೂರನೇ ಸ್ಥಾನ ಪಡೆದಿದೆ.
  • ದೇಶದಲ್ಲಿ ಸುಮಾರು ಮೂರು ಸಾವಿರ ಕಂಪನಿಗಳು 10 ಸಾವಿರಕ್ಕೂ ಹೆಚ್ಚು ತಯಾರಿಕಾ ಘಟಕಗಳನ್ನು ಹೊಂದಿದ್ದು, ಜೆನರಿಕ್ ಔಷಧ ತಯಾರಿಕೆಯಲ್ಲಿ ತೊಡಗಿವೆ. ಹೀಗೆ ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಔಷಧಗಳನ್ನು ಕಡಿಮೆ ಬೆಲೆಗೆ ವಿದೇಶಗಳಿಗೆ ರಫ್ತು ಮಾಡುತ್ತಿದೆ. 2024–25ರಲ್ಲಿ ಭಾರತವು ರಫ್ತು ಮಾಡಿರುವ ಔಷಧಗಳ ಮೌಲ್ಯ ₹2.66 ಲಕ್ಷ ಕೋಟಿ (3,000 ಕೋಟಿ ಡಾಲರ್‌).
  • ಜಾಗತಿಕ ಲಸಿಕೆಗಳ ಬೇಡಿಕೆಯಲ್ಲಿ ಶೇ 50, ಅಮೆರಿಕದ ಜೆನರಿಕ್ ಔಷಧಗಳ ಪೈಕಿ ಶೇ 40ರಷ್ಟು ಮತ್ತು ಇಂಗ್ಲೆಂಡ್‌ನ ಎಲ್ಲ ರೀತಿಯ ಔಷಧಗಳ ಪೈಕಿ ಶೇ 25ರಷ್ಟನ್ನು ಭಾರತವೇ ಪೂರೈಸುತ್ತಿದೆ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ ಅನೇಕ ದೇಶಗಳಿಗೆ, ವೈದ್ಯರ ಚೀಟಿ ಇಲ್ಲದೇ ಮಾರಾಟವಾಗುವ (ಓವರ್ ದ ಕೌಂಟರ್) ಔಷಧಗಳಲ್ಲಿ ಗಣನೀಯ ಪಾಲನ್ನು ಭಾರತವೇ ಪೂರೈಸುತ್ತದೆ. 200ರಷ್ಟು ದೇಶಗಳಿಗೆ ಭಾರತವು ಔಷಧ ಮತ್ತು ಲಸಿಕೆಗಳನ್ನು ರಫ್ತು ಮಾಡುತ್ತದೆ. ಎಚ್‌ಐವಿ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಗಳ ಪೈಕಿ ಮೂರನೇ ಎರಡರಷ್ಟು ಪಾಲನ್ನು ಭಾರತವೇ ಪೂರೈಸುತ್ತದೆ.
  • ಆದರೆ, ಭಾರತದಲ್ಲಿ ತಯಾರಾಗುವ ಔಷಧಗಳ ಗುಣಮಟ್ಟದ ಕುರಿತು ಜಾಗತಿಕ ಮಟ್ಟದಲ್ಲಿ ಆಗಾಗ ಆಕ್ಷೇಪಗಳು ಕೇಳಿ ಬಂದಿವೆ. ಹಲವು ದೇಶಗಳು ಭಾರತದಿಂದ ಆಮದು ಮಾಡಲಾಗುವ ಕೆಲವು ಔಷಧಗಳಿಗೆ ನಿಷೇಧ ಹೇರಿದ ಉದಾಹರಣೆಗಳೂ ಇವೆ. ಐರೋಪ್ಯ ಒಕ್ಕೂಟವು ಭಾರತದ 700 ಜೆನರಿಕ್‌ ಔಷಧಗಳನ್ನು ನಿಷೇಧಿಸಿದ್ದು ತೀರಾ ಇತ್ತೀಚೆಗಿನ ಉದಾಹರಣೆ. ವೈಜ್ಞಾನಿಕ ಕಾರಣಗಳಿಗಾಗಿ ಔಷಧಗಳನ್ನು ನಿರ್ಬಂಧಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.
  • ಭಾರತದ ಕಂಪನಿಗಳು ತಯಾರಿಸಿದ ಕೆಮ್ಮಿನ ಸಿರಪ್‌ಗಳನ್ನು ಕುಡಿದು ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿ ಮಕ್ಕಳು ಮೃತಪಟ್ಟಾಗ ಈ ಸಿರಪ್‌ಗಳನ್ನು ಬಳಸುವುದರ ವಿರುದ್ಧ ಜಗತ್ತಿನ ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯೇ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿತ್ತು. ಈ ಎರಡು ದೇಶಗಳಲ್ಲಿ ನಡೆದ ಘಟನೆಯ ಬಳಿಕ ಹಲವು ರಾಷ್ಟ್ರಗಳು ಭಾರತದ ಔಷಧಗಳಿಗೆ ನಿಷೇಧ ಹೇರಿದ್ದವು.
  • ಔಷಧಗಳ ತಯಾರಿಕಾ ಹಂತದಲ್ಲಿನ ಕೊರತೆಗಳ ಕಾರಣಕ್ಕೆ ಅಮೆರಿಕ ಕೂಡ ಈ ಹಿಂದೆ ಭಾರತ ಪೂರೈಸುತ್ತಿದ್ದ ಕೆಲವು ಜೆನರಿಕ್‌ ಔಷಧಗಳಿಗೆ (ರ‍್ಯಾನ್‌ಬಾಕ್ಸಿ ಕಂಪನಿಯ ಕೆಲವು ಔಷಧಗಳು) ನಿರ್ಬಂಧ ಹೇರಿತ್ತು. ಅಲ್ಲದೇ ಈ ಕಂಪನಿಗೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಿತ್ತು.
  • 2023ರಲ್ಲಿ ಮಾರ್ಷಲ್‌ ದ್ವೀಪಗಳು ಮತ್ತು ಮೈಕ್ರೊನೇಸಿಯಾಗೆ ಭಾರತದಿಂದ ಪೂರೈಕೆಯಾಗಿದ್ದ ಔಷಧಗಳು ಕಲಬೆರಕೆಗೊಂಡಿವೆ ಎಂಬ ಸಂಗತಿ ಆಸ್ಟ್ರೇಲಿಯಾದ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದರಿಂದ, ಆ ಔಷಧಗಳನ್ನು ಭಾರತ ವಾಪಸ್‌ ತರಿಸಿಕೊಂಡಿತ್ತು.
  • 2023ರ ಆರಂಭದಲ್ಲಿ ಲೈಬೇರಿಯಾ ದೇಶವು ಭಾರತದಿಂದ ಆಮದು ಮಾಡಿಕೊಂಡಿದ್ದ ಕೆಮ್ಮಿನ ಸಿರಪ್‌ ಕೂಡ ಕಲಬೆರಕೆಗೊಂಡಿದ್ದು ದೃಢಪಟ್ಟಿತ್ತು. ಅದೃಷ್ಟವಶಾತ್‌ ಅಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.

ಅಗ್ಗದ ವಿಷಕಾರಿ ರಾಸಾಯನಿಕ ಬಳಕೆ

  • ಔಷಧಗಳ ಕಚ್ಚಾ ವಸ್ತುಗಳು ದುಬಾರಿ ಎಂಬ ಕಾರಣಕ್ಕೆ ಕೆಲವು ಕಂಪನಿಗಳು ಅವುಗಳಿಗೆ ನಕಲಿ ರಾಸಾಯನಿಕ ವಸ್ತುಗಳನ್ನು ಬಳಸುತ್ತವೆ ಎಂಬುದು ತಜ್ಞರ ವಿವರಣೆ.
  • ಉದಾಹರಣೆಗೆ ಕೆಮ್ಮಿನ ಸಿರಪ್‌ನಲ್ಲಿ ಸಾಮಾನ್ಯವಾಗಿ ಪ್ರೊಪಿಲೀನ್‌ ಗ್ಲೈಕಾಲ್‌ ಅನ್ನು ಬಳಸಲಾಗುತ್ತದೆ. ಆದರೆ, ಇದು ಕೊಂಚ ದುಬಾರಿ. ಹೀಗಾಗಿ, ಅಗ್ಗದ ಎಥಿಲೀನ್‌ ಗ್ಲೈಕಾಲ್‌ ಮತ್ತು ಡೈಎಥಿಲೀನ್‌ ಗ್ಲೈಕಾಲ್‌ ಅನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ.
  • ವಿಷಕಾರಿ ರಾಸಾಯನಿಕಗಳಾಗಿರುವ ಬ್ರೇಕ್‌ ಆಯಿಲ್‌ ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಬಳಸುವ ಇವುಗಳು ಮನುಷ್ಯರ ಸೇವನೆಗೆ ಯೋಗ್ಯವಲ್ಲ ಎಂದು ವಿವರಿಸುತ್ತಾರೆ ಅವರು.
  • ರಾಜ್ಯಪಾಲರ ವಿರುದ್ಧಸುಪ್ರೀಂಗೆ
  • ಕಲೈನಾರ್‌ ವಿಶ್ವವಿದ್ಯಾಲಯ ಮಸೂದೆ–2025ಕ್ಕೆ ಅನುಮೋದನೆ ನೀಡದೆ ವಿಳಂಬ ಮಾಡುತ್ತಿರುವ ರಾಜ್ಯಪಾಲರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.
  • ‘ಮಸೂದೆ ಕುರಿತ ನಿರ್ಧಾರವನ್ನು ಪ್ರಕಟಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಜೊತೆಗೆ, ಸಚಿವ ಸಂಪುಟದ ಸಲಹೆಯ ಅನುಸಾರ ಮತ್ತು ಸಂವಿಧಾನದ 200ನೇ ವಿಧಿಯ ಪ್ರಕಾರ ನಡೆದುಕೊಳ್ಳುವಂತೆ ರಾಜ್ಯಪಾಲರಿಗೆ ಸೂಚಿಸುವಂತೆಯೂತಿಳಿಸಿದೆ.
  • ಚಿಲಿ, ಪೆರು ಜೊತೆ ಶೀಘ್ರ ವ್ಯಾಪಾರ ಮಾತುಕತೆ

ಸಂದರ್ಭ: ಭಾರತ ಹಾಗೂ ಚಿಲಿ, ಪೆರು ದೇಶಗಳ ನಡುವಿನ ಮುಂದಿನ ಸುತ್ತಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಮಾತುಕತೆಯು ಕ್ರಮವಾಗಿ ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳಿನಲ್ಲಿ ನಡೆಯಲಿದೆ.

  • ಅಕ್ಟೋಬರ್‌ 27ರಿಂದ ಚಿಲಿ ದೇಶ ದೊಂದಿಗಿನ  5 ದಿನದ ಮಾತುಕತೆಯು ಸ್ಯಾಂಟಿಯಾಗೊದಲ್ಲಿ ಆರಂಭವಾಗಲಿದೆ. ನವೆಂಬರ್‌ 3ರಿಂದ ಪೆರು ಜೊತೆ ಮೂರು ದಿನಗಳ ಮಾತುಕತೆ ಲಿಮಾದಲ್ಲಿ ನಡೆಯ ಲಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಚಿಲಿ ಜೊತೆ ನಡೆಯಲಿರುವ ಮಾತು ಕತೆಯು ಎರಡನೇ ಸುತ್ತಿನದ್ದು, ಪೆರು ಜೊತೆಗಿನ ಮಾತುಕತೆ ಎಂಟನೇ ಸುತ್ತಿನ ದ್ದಾಗಿದೆ. 2006ರಲ್ಲಿ ಭಾರತ ಮತ್ತು ಚಿಲಿ ಆದ್ಯತಾ ವ್ಯಾಪಾರ ಒಪ್ಪಂದವನ್ನು (ಪಿಟಿಎ) ಮಾಡಿಕೊಂಡಿದ್ದವು. ಇದೀಗ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಮುಂದಾಗಿವೆ.
  • 2024–25ರ ಆರ್ಥಿಕ ವರ್ಷದಲ್ಲಿ ಭಾರತವು ಚಿಲಿಗೆ ₹10,200 ಕೋಟಿಯಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು. ಇದು 2023–24ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 2.46ರಷ್ಟು ಕಡಿಮೆ. ಕಳೆದ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ 72ರಷ್ಟು ಏರಿಕೆಯಾಗಿ, ₹23 ಸಾವಿರ ಕೋಟಿಯಷ್ಟಾಗಿತ್ತು.
  • ಪೆರುಗೆ ದೇಶದ ರಫ್ತು ಶೇ 9ರಷ್ಟು ಹೆಚ್ಚಳವಾಗಿದ್ದು,₹8,870 ಕೋಟಿಯಷ್ಟಾಗಿತ್ತು. ಆಮದು ಪ್ರಮಾಣ ಶೇ 60ರಷ್ಟು ಏರಿಕೆಯಾಗಿ, ₹44,200 ಕೋಟಿಯಾಗಿದೆ.
  • ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ರಷ್ಯಾ ನಂ.1

ಸಂದರ್ಭ: ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳ ಸಾಲಿನಲ್ಲಿ ರಷ್ಯಾ ಮುಂದಿನ ದಿನಗಳಲ್ಲಿಯೂ ಮೊದಲ ಸ್ಥಾನದಲ್ಲಿ ಇರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

  • ಸೆಪ್ಟೆಂಬರ್‌ನಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ. ರಷ್ಯಾದಿಂದ ತೈಲ ಖರೀದಿಸುವುದರ ವಿಚಾರವಾಗಿ ಅಮೆರಿಕ ಹೇರಿರುವ ಒತ್ತಡದ ನಡುವೆಯೂ ದೇಶದ ಒಟ್ಟು ತೈಲ ಖರೀದಿಯಲ್ಲಿ ರಷ್ಯಾದ ಪಾಲು ಮೂರನೇ ಒಂದು ಭಾಗದಷ್ಟಿದೆ.
  • ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ಪ್ರಕಾರ, ಸೆಪ್ಟೆಂಬರ್‌ ನಲ್ಲಿ ಪ್ರತಿ ದಿನ ಅಂದಾಜು 47 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ಭಾರತ ಖರೀದಿಸಿದೆ. ರಷ್ಯಾದಿಂದ 16 ಲಕ್ಷ ಬ್ಯಾರೆಲ್ ಖರೀದಿಸಿದೆ. ಇದು ಒಟ್ಟು ಖರೀದಿಯಲ್ಲಿ ಶೇ 34ರಷ್ಟಾಗಿದೆ. ಇರಾಕ್‌ನಿಂದ 8.81 ಲಕ್ಷ ಬ್ಯಾರೆಲ್, ಸೌದಿ ಅರೇಬಿಯಾ 6.03 ಲಕ್ಷ ಬ್ಯಾರೆಲ್, ಯುಎಇಯಿಂದ 5.94 ಲಕ್ಷ ಬ್ಯಾರೆಲ್ ಮತ್ತು ಅಮೆರಿಕದಿಂದ ನಿತ್ಯ 2.06 ಲಕ್ಷ ಬ್ಯಾರೆಲ್ ಖರೀದಿಸುತ್ತಿದೆ.
  • 2022ರಲ್ಲಿ ರಷ್ಯಾ–ಉಕ್ರೇನ್‌ ಯುದ್ಧ ಆರಂಭವಾದ ಬಳಿಕ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸುವ ಮೊದಲು ಭಾರತವು ರಷ್ಯಾದಿಂದ ಖರೀದಿಸುವ ತೈಲದ ಪ್ರಮಾಣವು ಒಟ್ಟು ಖರೀದಿಯ ಶೇ 1ರಷ್ಟು ಮಾತ್ರ ಆಗಿತ್ತು. ಅದು ಈಗ ಶೇ 40ಕ್ಕೆ ಹೆಚ್ಚಿದೆ.

ಕಚ್ಚಾ ತೈಲ ಉತ್ಪಾದನೆ ಹೆಚ್ಚಳಕ್ಕೆ ನಿರ್ಧಾರ

  • ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿನಿತ್ಯ 1.37 ಲಕ್ಷ ಬ್ಯಾರೆಲ್‌ನಷ್ಟು ಹೆಚ್ಚಿಸಲು ಒಪೆಕ್‌+ ಒಕ್ಕೂಟದ ಎಂಟು ರಾಷ್ಟ್ರಗಳು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಿವೆ. ನವೆಂಬರ್‌ನಲ್ಲಿ ಈ ಹೆಚ್ಚಳ ಆಗಲಿದೆ.
  • ಒಪೆಕ್‌+ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ರಷ್ಯಾ ಸೇರಿ ಆರು ರಾಷ್ಟ್ರಗಳು ಉತ್ಪಾದನೆ ಹೆಚ್ಚು ಮಾಡಲು ತೀರ್ಮಾನಿಸಿವೆ. ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಉತ್ಪಾದನೆ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿವೆ.
  • ಸಿಮ್ರನ್‌, ಪ್ರೀತಿ, ನವದೀಪ್ಗೆ ಬೆಳ್ಳಿ : ವಿಶ್ವ ಪ್ಯಾರಾ ಅಥ್ಲೆಟಿಕ್ಸ್ಚಾಂಪಿಯನ್ಷಿಪ್‌: ಭಾರತಕ್ಕೆ 22 ಪದಕ

ಸಂದರ್ಭ: ಬಳಲಿಕೆ ಮತ್ತು ಬೆನ್ನುನೋವಿನ ನಡುವೆಯೂ ಸ್ಫೂರ್ತಿಯಿಂದ ಓಡಿದ ಸಿಮ್ರನ್ ಶರ್ಮಾ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 200 ಮೀ. (ಟಿ12 ಕ್ಲಾಸ್) ಓಟದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ದಾಖಲೆಯ 22 ಪದಕಗಳನ್ನು ಗೆದ್ದುಕೊಂಡಿತು.

  • ಕೊನೆಯ ದಿನ ಆತಿಥೇಯ ಅಥ್ಲೀಟುಗಳು ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಪಡೆದರು. ಭಾರತ ಒಟ್ಟು 6 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆಯಿತು. ಆದರೆ ಶನಿವಾರದ ಸ್ಪರ್ಧೆಯಲ್ಲಿ ಪ್ರವೀಣ್‌ ಮತ್ತು ಭಾನುವಾರ ನವದೀಪ್‌ ತಮ್ಮ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರುತಿತ್ತು.‌
  • ಬ್ರೆಜಿಲ್‌ ತಂಡ 44 ಪದಕಗಳೊಡನೆ (15–20–9) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಚೀನಾ 52 ಪದಕಗಳೊಡನೆ (13–22–17) ಎರಡನೇ ಸ್ಥಾನ ಗಳಿಸಿತು. ಇರಾನ್ 16 ಪದಕ ಗಳಿಸಿ (9–2–5) ಮೂರನೇ ಸ್ಥಾನದಲ್ಲಿ ಗಳಿಸಿತು.
  • ಮಹಿಳೆಯರ 100 ಮೀ. (ಟಿ35) ಓಟದಲ್ಲಿ ಪ್ರೀತಿ ಪಾಲ್‌ ಗಟ್ಟಿ ಮನೋಬಲ ಪ್ರದರ್ಶಿಸಿ ಬೆಳ್ಳಿ ಪದಕ ಗೆದ್ದರು. ಈ ಓಟದ ಆರಂಭದಲ್ಲಿ ಸ್ಟಾರ್ಟರ್‌ ಅವರ ಪಿಸ್ತೂಲ್ ಕೈಕೊಟ್ಟಿದ್ದರಿಂದ ಅರ್ಧ ಓಟದಿಂದ ಹಿಂತಿರುಗಿ ಮತ್ತೊಮ್ಮೆ ಓಡಬೇಕಾಯಿತು. ಈ ಕ್ಲಾಸ್‌ನಲ್ಲಿ ಅಥ್ಲೀಟುಗಳು ಸಹಾಯಕರ ನೆರವು ಪಡೆಯಬೇಕಾಗುತ್ತದೆ. ಸೆರೆಬ್ರಲ್ ಪಾಲ್ಸಿಯಂಥ ಸಮಸ್ಯೆಯಿರುವವರು ಇಲ್ಲಿ ಕಣದಲ್ಲಿರುತ್ತಾರೆ.
  • ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ನವದೀಪ್‌ ಸಿಂಗ್‌ ಎಫ್‌41 ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಫೇವರಿಟ್‌ ಆಗಿದ್ದರು. ಆದರೆ ಅವರೂ ಬೆಳ್ಳಿ ಪದಕ ಗೆಲ್ಲಲಷ್ಟೇ ಶಕ್ತರಾದರು. 24 ವರ್ಷ ವಯಸ್ಸಿನ ನವದೀಪ್ 45.46 ಮೀ. ದೂರ ಎಸೆದರು. ಇರಾನ್‌ನ ಸದೆಗ್ ಬಿಯೆತ್ ಸಯಾ (48.46) ಅವರಿಗೆ ಚಿನ್ನ ಗೆಲ್ಲುವ ಹಾದಿಯಲ್ಲಿ ಪೈಪೋಟಿ ಎದುರಾಗಲಿಲ್ಲ.
  • ಪುರುಷರ 200 ಮೀ. (ಟಿ44 ಕ್ಲಾಸ್‌) ಓಟದಲ್ಲಿ ಸಂದೀಪ್‌ 23.60 ಸೆ.ಗಳಲ್ಲಿ ಓಡಿ ಕಂಚಿನ ಪದಕ ಗೆದ್ದರು. ಈ ವಿಭಾಗದಲ್ಲಿ ಓಡುವ ಅಥ್ಲೀಟುಗಳ ಒಂದು ಕಾಲು ಮಾತ್ರ ಸುಸ್ಥಿತಿಯಲ್ಲಿದ್ದು, ಇನ್ನೊಂದು ಮೊಣಕಾಲಿನವರೆಗೆ ಮಾತ್ರ ಇರುತ್ತದೆ.
  • ಎರಡನೇ ಪದಕ: ಟಿ12ನಲ್ಲಿ 100 ಮೀ. ಚಿನ್ನ ಗೆದ್ದಿದ್ದ ಉತ್ತರಪ್ರದೇಶದ ಸಿಮ್ರನ್‌ 200 ಮೀ. ಓಟವನ್ನು 24.46 ಸೆ.ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದರು. ಇದು ಅವರಿಗೆ ವಿಶ್ವಕೂಟದಲ್ಲಿ ಮೂರನೇ ಪದಕ. ಕೋಬೆಯಲ್ಲಿ (2024) ಅವರು ಇದೇ ಓಟದಲ್ಲಿ ಸ್ವರ್ಣ ಗೆದ್ದಿದ್ದರು. ಬ್ರೆಜಿಲ್‌ನ ಕ್ಲಾರಾ ಬಾರೋಸ್‌ ಡಿಸಿಲ್ವ (24.42 ಸೆ.) ಚಿನ್ನ ಗೆದ್ದರು.
  • ಮಹಿಳೆಯರ ಟಿ35 ಕ್ಲಾಸ್‌ನ 100 ಮೀ. ಓಟದಲ್ಲಿ ಪ್ರೀತಿ ಪಾಲ್‌ 14.33 ಸೆ.ಗಳಲ್ಲಿ ಗುರಿಮುಟ್ಟಿದರು. ಚೀನಾದ ಗುವೊ (14.24) ಮೊದಲಿಗರಾದರು.
  • ಶ್ರೀಯಾಂಶಿಗೆ ಚೊಚ್ಚಲ ಪ್ರಶಸ್ತಿ

ಸಂದರ್ಭ: ಭಾರತದ ಯುವ ಪ್ರತಿಭಾನ್ವಿತ  ಆಟಗಾರ್ತಿ ಶ್ರೀಯಾಂಶಿ ವಲಿಶೆಟ್ಟಿ ಅವರು ಬಿಡಬ್ಲ್ಯುಎಫ್ ಸೂಪರ್‌ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

  • ಫೈನಲ್‌ನಲ್ಲಿ ತೆಲಂಗಾಣದ 18 ವರ್ಷದ ಶ್ರೀಯಾಂಶಿ 15-21, 22-20, 21-7ರಿಂದ ಭಾರತದವರೇ ಆದ ತಸ್ನೀಮ್ ಮೀರ್ ವಿರುದ್ಧ ಜಯಿಸಿದರು.
  • ಪಂದ್ಯವು 49 ನಿಮಿಷ ನಡೆಯಿತು.  ಮೊದಲ ಗೇಮ್‌ನಲ್ಲಿ ಶ್ರೀಯಾಂಶಿ ಸೋತರು. ಈ ಗೇಮ್‌ ಆರಂಭದಲ್ಲಿ ಶ್ರೀಯಾಂಶಿ 8–4ರ ಮುನ್ನಡೆ ಹೊಂದಿದ್ದರು. ಇದರ ನಂತರ ಚೇತರಿಸಿಕೊಂಡ ತಸ್ನೀಂ ಅವರು 14–9ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಅಲ್ಲಿಂದ ಮುಂದೆಯೂ ಬಿಗಿಹಿಡಿತ ಸಾಧಿಸಿದ ಗುಜರಾತ್ ಹುಡುಗಿ ತಸ್ನೀಂ ದೊಡ್ಡ ಅಂತರದ ಜಯ ಸಾಧಿಸಿದರು.
  • ಎರಡನೇ  ಗೇಮ್‌ನಲ್ಲಿಯೂ ಕಠಿಣ ಪೈಪೋಟಿ ಎದುರಿಸಿದ ಅವರು ಟೈಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದರು. ನಂತರ ಕೊನೆಯ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಪಾರಮ್ಯ ಮೆರೆದ ಶ್ರೀಯಾಂಶಿ ತಮ್ಮ ಎದುರಾಳಿಯನ್ನು ಸೋಲಿಸಿದರು. ಶ್ರೀಯಾಂಶಿ ಅವರು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 5ನೇ ಅಕ್ಟೋಬರ್ 2025

ಸಾವಿಗೆ ಕೆಮ್ಮಿನ ಸಿರಪ್‌ ನಂಟು ತನಿಖೆ ಚುರುಕು

ನವದೆಹಲಿ/ಹೈದರಾಬಾದ್/ಚೆನ್ನೈ (ರಾಯಿಟರ್ಸ್‌/ಪಿಟಿಐ): ಮಧ್ಯಪ್ರದೇಶ ಹಾಗೂ ರಾಜಸ್ಥಾನ ದಲ್ಲಿ ಒಟ್ಟು 11 ಮಕ್ಕಳ ಸಾವಿಗೆ ಕಲುಷಿತ ಕೆಮ್ಮಿನ ಸಿರಪ್‌ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.

ತಮಿಳುನಾಡಿನಲ್ಲಿ ತಯಾರಾದ ಕೆಮ್ಮಿನ ಸಿರಪ್‌ ‘ಕೋಲ್ಡ್ರಿಫ್’ನ ಮಾದರಿಗಳಲ್ಲಿ ‘ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಎಂಬ ದ್ರಾವಣದ ಪ್ರಮಾಣ ಅನುಮತಿಸಿದ ಮಿತಿಗಿಂತಲೂ ಅಧಿಕ ಮಟ್ಟದಲ್ಲಿ ಇತ್ತು ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಮಕ್ಕಳ ಸಾವಿಗೂ, ಈ ಕೆಮ್ಮಿನ ಸಿರಪ್‌ಗೂ ನಂಟು ಇದೆಯೇ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಕಾಂಚಿಪುರಂ ಜಿಲ್ಲೆಯ ಸುಂಗುವರಛತ್ರಂನಲ್ಲಿರುವ ಸ್ರೇಸನ್ ಫಾರ್ಮಾ ಕಂಪನಿಯ ಘಟಕದಲ್ಲಿ ‘ಕೋಲ್ಡ್ರಿಫ್‌’ ಅನ್ನು ತಯಾರಿಸಲಾಗುತ್ತಿದೆ. ಈ ಸಿರಪ್‌ಅನ್ನು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪುದುಚೇರಿಗೆ ಪೂರೈಸ ಲಾಗುತ್ತಿದೆ.

ಮಧ್ಯಪ್ರದೇಶದ ಛಿಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 9 ಮಕ್ಕಳು ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಈ ಸಾವುಗಳಿಗೆ ಕೆಮ್ಮಿನ ಸಿರಪ್‌ ಸೇವನೆಯೇ ಕಾರಣ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಸಚಿವಾಲಯ ತನಿಖೆಗೆ ಮುಂದಾಗಿದೆ. ‘ಡಿಇಜಿ’ ವಿಷಕಾರಿ ದ್ರಾವಣ ವಾಗಿದ್ದು, ಅದನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ದೇಶ ಗಳಲ್ಲಿ ಸಂಭವಿಸಿದ ಸಾವುಗಳಿಗೆ ಈ ದ್ರಾವಣ ಕಾರಣ ಎಂದು ಹೇಳಲಾಗು ತ್ತಿದೆ. ಅನುಮತಿಸಿದ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಹಾಗೂ ಇಥಿಲೀನ್‌ ಗ್ಲೈಕೋಲ್‌(ಇಜಿ) ಬಳಕೆ ಮೂತ್ರಪಿಂಡಕ್ಕೆ ಹಾನಿ ತರುತ್ತದೆ.

ಪರಿಶೀಲನೆ: ಆರು ರಾಜ್ಯಗಳಲ್ಲಿರುವ 19 ಔಷಧ ತಯಾರಿಕೆ ಘಟಕಗಳಲ್ಲಿ ಉತ್ಪಾದನೆಯಾಗುತ್ತಿರುವ ಕೆಮ್ಮಿನ ಸಿರಪ್‌ ಹಾಗೂ ಆ್ಯಂಟಿಬಯೊಟಿಕ್‌ ಸೇರಿ ಇತರ ಔಷಧಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಚಾಲನೆ ನೀಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎನ್‌ಐವಿ, ಐಸಿಎಂಆರ್‌, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಹಾಗೂ ನಾಗ್ಪುರದ ಎಐಐಎಂಎಸ್‌ನ ತಜ್ಞರ ತಂಡವು, ಮಕ್ಕಳ ಸಾವಿಗೆ ಕಾರಣ ಎನ್ನಲಾದ ಕೆಮ್ಮಿನ ಸಿರಪ್‌ನ ಮಾದರಿಗಳ ವಿಶ್ಲೇಷಣೆ ಕೈಗೊಂಡಿದೆ.

‘ತಮಿಳುನಾಡಿನ ಸಿರಪ್‌ ಕಲುಷಿತ’

ಮಧ್ಯಪ್ರದೇಶ ಸರ್ಕಾರದ ಮನವಿ ಮೇರೆಗೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಯು, ಕೆಮ್ಮಿನ ಸಿರಪ್‌ ‘ಕೋಲ್ಡ್ರಿಫ್’ನ ಮಾದರಿಗಳ ಪರೀಕ್ಷೆ ನಡೆಸಿದೆ. ಈ ಮಾದರಿಗಳಲ್ಲಿ, ಅನುಮತಿಸಿದ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ ಅಧಿಕಾರಿಯೊಬ್ಬರು ಕೂಡ ಇದೇ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಕಾಂಚಿಪುರಂನಲ್ಲಿರುವ ಸ್ರೇಸನ್‌ ಫಾರ್ಮಾ ಕಂಪನಿಯ ಘಟಕದಲ್ಲಿ ಈ ಸಿರಪ್‌ ಅನ್ನು ತಯಾರಿಸಲಾಗುತ್ತಿದೆ.

ತನ್ನ ಘಟಕದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ನಲ್ಲಿ ‘ಡಿಇಜಿ’ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಇರುವ ಕುರಿತು ಸ್ರೇಸನ್‌ ಫಾರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಕೆಮ್ಮಿನ ಸಿರಪ್‌ ಪರೀಕ್ಷಾ ವರದಿ ಕೈಸೇರಿದ ಬೆನ್ನಲ್ಲೇ, ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ‘ಕೋಲ್ಡ್ರಿಫ್’ ಮಾರಾಟವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ಮಾರುಕಟ್ಟೆಯಿಂದ ಈ ಸಿರಪ್‌ ಅನ್ನು ಹಿಂಪಡೆಯುವಂತೆಯೂ ಸೂಚಿಸಿದೆ’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಡಿಎಸ್‌ಸಿಒ ಆರು ಹಾಗೂ ಮಧ್ಯಪ್ರದೇಶದ ಆಹಾರ ಮತ್ತು ಔಷಧ ನಿರ್ವಹಣೆ(ಎಂಪಿಎಫ್‌ಡಿಎ) ಇಲಾಖೆ ಮೂರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಮಾದರಿಗಳಲ್ಲಿ ಡೈಇಥಿಲೀನ್‌ ಗ್ಲೈಕೋಲ್(ಡಿಇಜಿ) ಮತ್ತು ಇಥಿಲೀನ್‌ ಗ್ಲೈಕೋಲ್‌(ಇಜಿ) ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿತ್ತು.

ಪ್ರಮುಖ ಅಂಶಗಳು

l ‘ಕೋಲ್ಡ್ರಿಫ್‌’ ಉತ್ಪಾದನೆ ಸ್ಥಗಿತಗೊಳಿಸುವಂತೆ ಸ್ರೇಸನ್ ಫಾರ್ಮಾ ಕಂಪನಿಗೆ ತಮಿಳುನಾಡು ಸರ್ಕಾರ ಸೂಚನೆ

l ಸದ್ಯ, ಛಿಂದ್ವಾರ ಹಾಗೂ ನಾಗ್ಪುರದಲ್ಲಿ ದಾಖಲಾಗಿರುವ ಮಕ್ಕಳು ಸೇರಿ ಪಟ್ಟು 13 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಛಿಂದ್ವಾರದಲ್ಲಿ ‘ಕೋಲ್ಡ್ರಿಫ್‌’ ಸಿರಪ್‌ ಸೇವಿಸಿ ಮಕ್ಕಳು ಮೃತಪಟ್ಟಿರುವುದು ಹೃದಯ ವಿದ್ರಾವಕ. ಮಧ್ಯಪ್ರದೇಶದಲ್ಲಿ ಈ ಸಿರಪ್‌ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಸಿರಪ್‌ ತಯಾರಿಸಿರುವ ಕಂಪನಿಯ ಇತರ ಉತ್ಪನ್ನಗಳ ಮಾರಾಟವನ್ನು ಕೂಡ ನಿಷೇಧಿಸಲಾಗುತ್ತದೆ

ಮೋಹನ್‌ ಯಾದವ್, ಮಧ್ಯಪ್ರದೇಶ ಮುಖ್ಯಮಂತ್ರಿ

ಕೆಮ್ಮಿನ ಸಿರಪ್‌ ಕೋಲ್ಡ್ರಿಫ್‌ ಕಲಬೆರಕೆಯಾಗಿರುವುದು ಮಾದರಿಗಳ ಪರೀಕ್ಷೆಯಿಂದ ತಿಳಿದುಬಂದಿದ್ದು, ಈ ಬಗ್ಗೆ ವಿವರಣೆ ಕೇಳಲಾಗಿದೆ. ಕಂಪನಿಯು ತೃಪ್ತಿಕರ ವಿವರಣೆ ನೀಡುವವರೆಗೆ ಈ ಸಿರಪ್‌ ಉತ್ಪಾದನೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ

ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ

ಶಂಕಿತ ಮೂತ್ರಪಿಂಡ ಸಮಸ್ಯೆಯಿಂದಾಗಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಬ್ರೇಕ್‌ ಆಯಿಲ್ ದ್ರಾವಣ ಮಿಶ್ರಿತ ಕೆಮ್ಮಿನ ಸಿರಪ್‌ ಕೊಟ್ಟಿದ್ದೇ ಮಕ್ಕಳ ಸಾವಿಗೆ ಕಾರಣ

ಕಮಲ್‌ ನಾಥ್, ಕಾಂಗ್ರೆಸ್‌ನ ಹಿರಿಯ ನಾಯಕ

ಕೆಮ್ಮು, ನೆಗಡಿ ನಿವಾರಣೆಗಾಗಿ ಬಳಸುವ ಡೆಕ್ಸ್‌ಟ್ರೊಮಿಥೋರ್ಫನ್ ಔಷಧವನ್ನು ನಾಲ್ಕು ವರ್ಷ ಒಳಗಿನ ಮಕ್ಕಳಿಗೆ ನೀಡದಂತೆ ಕೇಂದ್ರ ಸರ್ಕಾರ 2021ರಲ್ಲಿಯೇ ಸಲಹೆ ನೀಡಿದೆ

ಗಾಯತ್ರಿ ರಾಥೋರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನ

ಕೇರಳದಲ್ಲಿ ಕೆಮ್ಮಿನ ಸಿರಪ್‌ ‘ಕೋಲ್ಡ್ರಿಫ್‌’ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಕಲುಷಿತಗೊಂಡಿದೆ ಎನ್ನಲಾದ ಬ್ಯಾಚ್‌ನ ಈ ಸಿರಪ್‌ಅನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿರಲಿಲ್ಲ. ಆದಾಗ್ಯೂ, ಸುರಕ್ಷತಾ ಕ್ರಮವಾಗಿ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ

ವೀಣಾ ಜಾರ್ಜ್‌, ಆರೋಗ್ಯ ಸಚಿವೆ, ಕೇರಳ

ರಾಜಸ್ಥಾನ: ಔಷಧ ನಿಯಂತ್ರಕ ಅಮಾನತು

ಜೈಪುರ: ಕೆಮ್ಮಿನ ಸಿರಪ್‌ ಸೇವನೆಯಿಂದಾಗಿ ರಾಜ್ಯದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ, ರಾಜ್ಯದ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾ ಅವರನ್ನು ಅಮಾನತು ಮಾಡಿ ರಾಜಸ್ಥಾನ ಸರ್ಕಾರ ಶನಿವಾರ ಆದೇಶಿಸಿದೆ.

ಅಲ್ಲದೇ, ಜೈಪುರ ಮೂಲದ ಕೆಸನ್ಸ್‌ ಫಾರ್ಮಾ ಕಂಪನಿ ಉತ್ಪಾದಿಸುವ 19 ಔಷಧಗಳು ಹಾಗೂ ಡೆಕ್ಸ್‌ಟ್ರೊಮಿಥೋರ್ಫನ್ ಹೊಂದಿರುವ ಇತರ ಎಲ್ಲ ಕೆಮ್ಮಿನ ಸಿರಪ್‌ಗಳ ಮಾರಾಟವನ್ನು ಸಹ ಸ್ಥಗಿತಗೊಳಿಸಿ ಆದೇಶಿಸಲಾಗಿದೆ.

ರಾಜಾರಾಮ್‌ ಶರ್ಮಾ, ಔಷಧಗಳ ಗುಣಮಟ್ಟ ಪತ್ತೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೇಳಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ ಆದೇಶಿಸಿದ್ದಾರೆ.

‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ‘ವಿಷನ್‌ ಗ್ರೂಪ್‌’

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಡಿ (ಮುಜರಾಯಿ) ಇರುವ ‘ಸಿ’ ವರ್ಗದ ದೇವಾಲಯಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರವು ‘ವಿಷನ್‌ ಗ್ರೂಪ್‌’ ರಚಿಸಿದೆ.

ಕೆ.ಇ. ರಾಧಾಕೃಷ್ಣ, ಕೆ.ಸಿ. ರಾಮಮೂರ್ತಿ, ಶಕುಂತಲಾ ಶೆಟ್ಟಿ, ಮಹಾಂತೇಶ್ ಬಿರಾದಾರ್‌, ಶ್ರೀಪಾದ ಎಸ್‌.ಬಿ., ಶ್ರೀನಿವಾಸ ಪಿ.ಸಿ., ಯತಿರಾಜ ಸಂಪತ್‌ ಕುಮಾರನ್‌ ಎಸ್‌.ಎನ್‌. ಅವರನ್ನು ‘ವಿಶನ್‌ ಗ್ರೂಪ್‌’ ಸದಸ್ಯರನ್ನಾಗಿ ಮಾಡಿದೆ.

ರಾಜ್ಯದಲ್ಲಿ 34,563 ಮುಜರಾಯಿ ದೇವಸ್ಥಾನಗಳಿವೆ. ಅದರಲ್ಲಿ ‘ಎ’ ವರ್ಗದ 205, ‘ಬಿ’ ವರ್ಗದ 193 ದೇವಸ್ಥಾನಗಳಾಗಿದ್ದು, ಕಡಿಮೆ ಆದಾಯ ಇರುವ 34,165 ಪುರಾತನ ದೇವಸ್ಥಾನಗಳನ್ನು ‘ಸಿ’ ವರ್ಗ ಎಂದು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗೆ ಅಗತ್ಯ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ನೀಡಲಾಗುತ್ತಿದೆ. ದೇವಾಲಯಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅವುಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಧಾರ್ಮಿಕ ಪರಿಷತ್‌ ನಿರ್ದೇಶನ ನೀಡಿತ್ತು.

ಅದರಂತೆ ‘ವಿಷನ್‌ ಗ್ರೂಪ್‌’ ರಚಿಸುವುದಾಗಿ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.

ಚಿತ್ರದುರ್ಗ: ಅರಣ್ಯದಲ್ಲಿ ಅದಿರಿಗೆ ಶೋಧ

ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮೀಸಲು ಅರಣ್ಯದಲ್ಲಿ ಮ್ಯಾಂಗನೀಸ್‌ ಹಾಗೂ ಕಬ್ಬಿಣದ ಅದಿರಿನ ಅನ್ವೇಷಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್‌) ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ.

ತಾಲ್ಲೂಕಿನ ನೀರ್ತಡಿ ಮೀಸಲು ಅರಣ್ಯದಲ್ಲಿ 64.7 ಹೆಕ್ಟೇರ್ ಪ್ರದೇಶದಲ್ಲಿ ಕಂಪನಿಯು ಒಂದು ವರ್ಷ ಅದಿರಿನ ಹುಡುಕಾಟ ನಡೆಸಲಿದೆ. ಈಗಾಗಲೇ ಗಣಿಗಾರಿಕೆ ನಡೆದಿರುವ (ಬ್ರೋಕನ್‌ ಲ್ಯಾಂಡ್‌) 37.59 ಹೆಕ್ಟೇರ್‌ನಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಾಧ್ಯವೇ ಎಂಬುದನ್ನು ಕಂಪನಿ ಪರಿಶೀಲನೆ ನಡೆಸಲಿದೆ. ಜತೆಗೆ, 27.16 ಹೆಕ್ಟೇರ್‌ ದಟ್ಟ ಅರಣ್ಯದಲ್ಲಿ ಪ್ರಕ್ರಿಯೆ ನಡೆಸಲಿದೆ. ಈ ಪ್ರಸ್ತಾವಕ್ಕೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಒಪ್ಪಿಗೆ ನೀಡಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಕೇಂದ್ರ ಅರಣ್ಯ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.

ಅದಿರು ಅನ್ವೇಷಣೆಗೆ ಇಲ್ಲಿ ಕೆಐಒಸಿಎಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಗದಿತ ಸ್ಥಳದಲ್ಲಿ ಅದಿರಿನ ನಿಕ್ಷೇಪ ಇದೆಯೇ ಇಲ್ಲವೇ ಎಂಬುದನ್ನು ಏಜೆನ್ಸಿ ಪತ್ತೆ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸುತ್ತದೆ. ಒಂದು ವೇಳೆ ಅದಿರು ದಾಸ್ತಾನು ಇದ್ದರೆ ಗಣಿ ಇಲಾಖೆಯು ಬ್ಲಾಕ್‌ ರಚಿಸಿ, ಅದನ್ನು ಹರಾಜಿಗೆ ಇಡುತ್ತದೆ.

ಕಾಶಿಮೂರ್ತಿ ಶೆಟ್ಟಿ ಹಾಗೂ ಮಕ್ಕಳು ಹೊಂದಿರುವ ಗಣಿ ಅನುಮತಿ (ಸಂಖ್ಯೆ–1177) ಅಡಿಯಲ್ಲಿ ಅದಿರು ಅನ್ವೇಷಣೆ ಕಾರ್ಯ ನಡೆಸಲು ಕೆಐಒಸಿಎಲ್‌ನ ಉಪ ಮುಖ್ಯ ವ್ಯವಸ್ಥಾಪಕರು ಅರಣ್ಯ ಇಲಾಖೆಗೆ 2024ರ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಯೋಜನಾ ಪರಿಶೀಲನಾ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಅರಣ್ಯ ಇಲಾಖೆಗೆ ಕಳುಹಿಸಲಾಗಿತ್ತು.

ಚಿತ್ರದುರ್ಗ ಡಿಸಿಎಫ್ ಅವರು ಯೋಜನಾ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಈ ಅರಣ್ಯವು ಇಳಿಜಾರಿನ ಪ್ರದೇಶವಾಗಿದ್ದು, ಕಂಪನಿಯು ಈ ಪ್ರದೇಶದಲ್ಲಿ ಮಣ್ಣು ಹಾಗೂ ತೇವಾಂಶ ಸಂರಕ್ಷಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗ ಬಹುದು. ಆದಾಗ್ಯೂ, ಈ ಶೋಧ ಕಾರ್ಯಾಚರಣೆಯು ಅಂತಿಮವಾಗಿ ಗಣಿಗಾರಿಕೆ ಕಾರ್ಯಾಚರಣೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಶೋಧದ ಭಾಗವಾಗಿ ಎಸ್‌ಎಂಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದ ರಿಂದ ದೀರ್ಘಾವಧಿಯಲ್ಲಿ ಉದ್ದೇಶ ಈಡೇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ, ಗಣಿ ಹುಡುಕಾಟ ನಡೆಸಲು ಶಿಫಾರಸು ಮಾಡಿದ್ದರು. ಇದಕ್ಕೆ ಬಳ್ಳಾರಿ ಸಿಸಿಎಫ್‌ ಸಹಮತ ವ್ಯಕ್ತಪಡಿಸಿದ್ದರು.

ಮುಖ್ಯಾಂಶಗಳು

lಅದಿರಿನ ಹುಡುಕಾಟದ ಸಂದರ್ಭದಲ್ಲಿ 700–1000 ಮರಗಳ ಹನನ ಮಾಡಲಾಗುತ್ತದೆ

lಅದಿರಿನ ಅನ್ವೇಷಣೆ ವೇಳೆ 24 ಕಂದಕಗಳನ್ನು ಹಾಗೂ 34 ಕೊಳವೆಬಾವಿಗಳನ್ನು ಕೊರೆಯಲಾಗುತ್ತದೆ

lಸಾದರಹಳ್ಳಿ ಹಾಗೂ ಕೇಶವಪುರ ಅರಣ್ಯ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ

lಈ ಅರಣ್ಯದಲ್ಲಿ ಕರಡಿ, ಚಿರತೆ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಕಾಡುಪ್ರಾಣಿಗಳಿವೆ

lಗಣಿ ಹುಡುಕಾಟಕ್ಕೆ ಪ್ರತಿಯಾಗಿ ಕಂಪನಿಯು 9.4 ಹೆಕ್ಟೇರ್‌ನ ನಿವ್ವಳ ಒಟ್ಟು ಮೌಲ್ಯ ಪಾವತಿಸಲು ಒಪ್ಪಿದೆ

ವಿಧಿಸಿರುವ ಷರತ್ತುಗಳು

lಅರಣ್ಯ ಭೂಮಿಯ ಕಾನೂನಾತ್ಮಕ ಸ್ಥಿತಿಗತಿ ಬದಲಾಗುವಂತಿಲ್ಲ

lಪ್ರಸ್ತಾವಿತ ಪ್ರದೇಶದ ಮತ್ತು ಸುತ್ತಮುತ್ತಲಿನ ಸಸ್ಯ, ಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವಂತಿಲ್ಲ

lಈ ಅರಣ್ಯ ಭೂಮಿಯನ್ನು ಉಪಗುತ್ತಿಗೆ ನೀಡುವಂತಿಲ್ಲ ಹಾಗೂ ಅಡಮಾನ ಇಡುವಂತಿಲ್ಲ

lಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ

lಕಾಡಿನಲ್ಲಿ ಕಲ್ಲುಗಳನ್ನು ಪುಡಿ ಮಾಡುವಂತಿಲ್ಲ ಹಾಗೂ ಒಡೆಯುವಂತಿಲ್ಲ

ಸರ್ಬಿ: ಅತಿ ಕಡಿಮೆ ಜನಸಂಖ್ಯೆಯ ಜಾತಿ

ಪ್ರಜಾವಾಣಿ ವಾರ್ತೆ

ಚಿಕ್ಕಬಳ್ಳಾ‍ಪುರ: ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ರಾಜಸ್ಥಾನ ಮೂಲದ ಜಾತಿಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಪತ್ತೆಯಾಗಿದೆ. ಮೂಲದ ಪ್ರಕಾರ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಈ ಜಾತಿಯ ಜನರು ಇಲ್ಲ ಎಂದು ಗೊತ್ತಾಗಿದೆ.

ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ‘ಸರ್ಬಿ’ ಜಾತಿಗೆ ಸೇರಿದ ಎರಡು ಕುಟುಂಬ ಸಮೀಕ್ಷೆಯಲ್ಲಿ ಕಂಡುಬಂದಿವೆ. ಈ ಎರಡು ಕುಟುಂಬಗಳಲ್ಲಿ ಒಟ್ಟು ಏಳು ಸದಸ್ಯರು ಇದ್ದಾರೆ.

ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ಜಾತಿಯೂ ಇದಾಗಿದೆ. ಹಿಂದುಳಿದ ವರ್ಗಗಳ ಆಯೋಗವು ಹೊರಡಿಸಿರುವ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ‘ಸರ್ಬಿ’ ಜಾತಿಯ ಹೆಸರು ಇಲ್ಲ.

ಈ ಜಾತಿ ಕೋಡ್ ಸಹ ಇಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಯಾವ ಪಟ್ಟಿಯಲ್ಲಿ ‘ಸರ್ಬಿ’ ಜಾತಿ ನಮೂದಿಸಬೇಕು ಎಂದು ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯೋಗಕ್ಕೆ ಪತ್ರ ಬರೆದಿತ್ತು. ಆಯೋಗವು ‘ಸರ್ಬಿ’ ಜಾತಿಯನ್ನು ಇತರ ಕಾಲಂನಲ್ಲಿ ನಮೂದಿಸುವಂತೆ ತಿಳಿಸಿದೆ.

‘ಸರ್ಬಿ ಜಾತಿ ರಾಜಸ್ಥಾನ ಮೂಲದ್ದು ಎನ್ನಲಾಗುತ್ತಿದೆ. ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿ ಈ ಜಾತಿಯ ಜನರು ಇಲ್ಲ. ಸಮೀಕ್ಷೆ ಜಾತಿಯ ಪಟ್ಟಿಯಲ್ಲಿ ಇದರ ಹೆಸರು ಇರಲಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದೆವು. ಇತರೆ ಕಾಲಂನಲ್ಲಿ ನಮೂದಿಸಲು ತಿಳಿಸಿದ್ದಾರೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮುನಿರತ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. .

ಅಂಕಸಮುದ್ರ: ವಲಸೆ ಹಕ್ಕಿಗಳ ಪಾರುಪತ್ಯ
ವಿಜಯನಗರ ಜಿಲ್ಲೆಯ ಪಕ್ಷಿಧಾಮ l ವಿವಿಧೆಡೆಯಿಂದ ಬಂದ ಬಾನಾಡಿಗಳ ಕಲರವ
ಪಕ್ಷಿಗಳನ್ನು ವೀಕ್ಷಿಸಲು ಕಳೆದ ವರ್ಷದಿಂದ ಬೆಂಗಳೂರಿನಿಂದ ಕುಟುಂಬ ಸಮೇತ ಬರುತ್ತಿದ್ದೇನೆ. ಇಲ್ಲಿನ ಹಕ್ಕಿಗಳ ಸೌಂದರ್ಯ ಅದ್ಭುತಬದ್ರೀಶ್, ಪಕ್ಷಿ ವೀಕ್ಷಕ, ಬೆಂಗಳೂರು

ಇಲ್ಲಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಈ ಬಾರಿ ನಿಗದಿತ ಅವಧಿಗಿಂತಲೂ ಮೊದಲೇ ವಿದೇಶಿ ಹಕ್ಕಿಗಳ ಕಲರವ ಅನುರಣಿಸುತ್ತಿದೆ. ಜಾಲಿಮರಗಳ ಮೇಲೆ ದೇಶಿ ಹಕ್ಕಿಗಳ ಗೂಡು ಕಟ್ಟಿದ್ದು, ಪಾರುಪತ್ಯ ನಡೆಸಿವೆ.

ಬಹುಸಂಖ್ಯೆಯ ಇಂಡಿಯನ್ ಕಾರ್ಮೋರೆಂಟ್ (ನೀರು ಕಾಗೆ), ಲಿಟಲ್ ಕಾರ್ಮೋರೆಂಟ್ (ಸಣ್ಣ ನೀರು ಕಾಗೆ), ಬ್ಲ್ಯಾಕ್‌ ಹೆಡೆಡ್ ಐಬೀಸ್ (ಕರಿತಲೆ ಕೆಂಬರಲು), ಗ್ಲೋಸಿ ಐಬೀಸ್(ಮಿಂಚು ಕೆಂಬರಲು), ವರಟೆ ಬಾತು (ಸ್ಪಾಟ್ ಬಿಲ್ ಡಕ್) ಸಂತಾನನೋತ್ಪತ್ತಿ ಕಾರ್ಯದಲ್ಲಿ ನಿರತವಾಗಿವೆ. ಇವುಗಳ ಸಂಖ್ಯೆ ಸಾವಿರ ದಾಟಿದೆ. ಪಕ್ಷಿಧಾಮದ ಮರಗಳಲ್ಲಿ ಮರಿಗಳಿಗೆ ಬಾಯಿತುತ್ತು ನೀಡುವ ದೃಶ್ಯ, ಗೂಡುಗಳಿಂದ ಹೊರಬಂದ ಚಿಣ್ಣರ ಚಿನ್ನಾಟದ ಚಿಲಿಪಿಲಿ ಸಂಗೀತದ ನಿನಾದವಂತೂ ಪಕ್ಷಿ ಪ್ರೇಮಿಗಳನ್ನು ಧ್ಯಾನಸ್ಥರನ್ನಾಗಿ ಮಾಡುತ್ತಿವೆ.

ಯುರೋಪ್‌ ಮೂಲದ ಹಕ್ಕಿಗಳಾದ ಬಿಳಿ ಹುಬ್ಬಿನ ಬಾತು (ಗಾರ್ಗೆನಿ), ಜೌಗು ಸೆಳೆವ (ಮಾರ್ಷ್ ಹ್ಯಾರಿಯರ್), ಬಿಳಿಕತ್ತಿನ ಉಲಿಯಕ್ಕಿ (ಲೆಸರ್ ವೈಟ್‍ತ್ರೋಟ್), ಇಡುನಾ ರಾಮ (ಸೈಕ್ಸ್ ನ ವಾರ್ಬ್ಲರ್‌), ಬೂದು ಉಲಿಯಕ್ಕಿ (ಬ್ಲಿಥ್ಸ್ರೀಡ್ ವಾರ್ಬ್ಲರ್‌), ಹಳದಿ ಸಿಪಿಲೆ (ಯಲ್ಲೊ ವಾಗ್‍ಟೆಲ್) ಹಕ್ಕಿಗಳೂ ಇಲ್ಲಿಗೆ ಈಗಾಗಲೇ ಬಂದಿವೆ.

ಯುರೋಪ್‌ನಿಂದ ಹಕ್ಕಿಗಳು ಈ ಬಾರಿ ತಿಂಗಳ ಮುಂಚೆಯೇ ಬಂದಿವೆ. ಒಂದು ವಾರದಿಂದ ಈ ವಿದೇಶಿ ಬಾನಾಡಿ ಅತಿಥಿಗಳಿಗೆ ಸ್ಥಳೀಯ ಹಕ್ಕಿಗಳು ಆತಿಥ್ಯ ನೀಡಿವೆ. ಮುಂದಿನ ಏಪ್ರಿಲ್‌ವರೆಗೆ ಅವು ಇಲ್ಲಿಯೇ ನೆಲೆಯೂರಲಿವೆ.

ಶಿಳ್ಳೆಬಾತು ಆಕರ್ಷಣೆ: ಪಕ್ಷಿಧಾಮಕ್ಕೆ ಮೊದಲ ಬಾರಿಗೆ ಉತ್ತರ ಭಾರತ ದಿಂದ ವಲಸೆ ಬಂದಿರುವ ಅಪರೂಪದ ದೊಡ್ಡ ಗಾತ್ರದ ಶಿಳ್ಳೆಬಾತು (ಫುಲ್ವೆಸ್ ವಿಸಿಲಿಂಗ್ ಡಕ್) ತನ್ನ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದೆ. ಈ ಪಕ್ಷಿ ಸದಾ ಸಂಗಾತಿಯೊಂದಿಗೆ ಇರುತ್ತದೆ.

ತುಂಗಭದ್ರಾ ಹಿನ್ನೀರಿನ ಏತ ನೀರಾವರಿ ಮೂಲಕ ನೀರು ಹರಿದ ಪರಿಣಾಮ ಅಂಕಸಮುದ್ರ ಪಕ್ಷಿಧಾಮದ ಒಡಲು ಸಂಪೂರ್ಣ ಭರ್ತಿ ಆಗಿದೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು, ವಿದೇಶಿಯರ ಸಂಖ್ಯೆಯೂ ಹೆಚ್ಚಾಗಿದೆ.

ಟೋಲ್‌: ಯುಪಿಐ ಬಳಸಿದರೆ ಶುಲ್ಕ ಕಡಿಮೆ

ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್‌ ಪ್ಲಾಜಾ ಪ್ರವೇಶಿಸುವ ವಾಹನಗಳು ಯುಪಿಐ ಮೂಲಕ ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೆ, ಸಾಮಾನ್ಯ ಟೋಲ್ ಶುಲ್ಕದ 1.25 ಪಟ್ಟು ಶುಲ್ಕ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ಈ ಹೊಸ ನಿಯಮ ನವೆಂಬರ್ 15ರಿಂದ ಜಾರಿಗೆ ಬರಲಿದೆ. ಪ್ರಸ್ತುತ, ಫಾಸ್ಟ್‌ಟ್ಯಾಗ್ ಇಲ್ಲದವರು ಟೋಲ್‌ನಲ್ಲಿ, ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವುದಾದರೆ ಎರಡು ಪಟ್ಟು ಹೆಚ್ಚು ಪಾವತಿಸಬೇಕಿದೆ.

ಈ ಹೊಸ ನಿಯಮದಿಂದ ಟೋಲ್‌ನಲ್ಲಿ ನಗದು ವಹಿವಾಟು ಕಡಿಮೆ ಆಗಲಿದೆ. ಅಲ್ಲದೆ, ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು, ಟೋಲ್‌ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ಮುಂಬೈ (ಪಿಟಿಐ): ಸೆಪ್ಟೆಂಬರ್‌ 26ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು ₹20,700 ಕೋಟಿಯಷ್ಟು ಕಡಿಮೆ ಆಗಿದೆ.

ಒಟ್ಟು ಮೀಸಲು ಸಂಗ್ರಹ ₹62.15 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹38,994 ಕೋಟಿಯಷ್ಟು ಕಡಿಮೆಯಾಗಿದ್ದು, ₹51.63 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ₹19,865 ಕೋಟಿಯಾಗಿದ್ದು, ₹8.43 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್‌ (ಎಸ್‌ಡಿಆರ್) ₹798 ಕೋಟಿ ಕಡಿಮೆ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹41,479 ಕೋಟಿಯಾಗಿದೆ ಎಂದು ತಿಳಿಸಿದೆ.

ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೆ ತಾಕೈಚಿ?

ಜಪಾನ್‌ನ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ (ಎಲ್‌ಡಿಪಿ) ಕಟ್ಟಾ ಸಂಪ್ರದಾಯ ವಾದಿಯಾಗಿರುವ ಸನೆ ತಾಕೈಚಿ ಅವರನ್ನು ಹೊಸ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಸನೆ ತಾಕೈಚಿ ಅವರನ್ನು ಸ್ತ್ರೀವಾದ ಪ್ರತಿಪಾದಿಸುವ ದೃಷ್ಟಿಯಿಂದ ಆಯ್ಕೆ ಮಾಡಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ 54 ವರ್ಷದ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ದೇಶದ ರಕ್ಷಣೆ ಹಾಗೂ ಆರ್ಥಿಕತೆ ವಿಚಾರದಲ್ಲಿ ಕೇಂದ್ರಿಕರಿಸಿ, ಕಠಿಣ ನಿಲುವಿನ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಪಕ್ಷದ ಆಂತರಿಕ ಚುನಾವಣೆಯಲ್ಲಿ ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ 44 ವರ್ಷದ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ತಾಕೈಚಿ ಮಣಿಸಿದರು. ಸಂಸತ್ತಿನಲ್ಲಿ ಅವರಿಗೆ ಅನುಮೋದನೆ ಸಿಕ್ಕ ಬಳಿಕ ಸನೆ ತಾಕೈಚಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರಕ್ಕೇರುವುದು ಖಚಿತವಾಗಿದೆ.

ನಾಯಕಿಯಾಗಿ ಆಯ್ಕೆಯಾಗು ತ್ತಿದ್ದಂತೆಯೇ, ದೇಶದಲ್ಲಿ ‘ಹೊಸ ಯುಗ’ ಆರಂಭಗೊಂಡಿದೆ ಎಂದು ಶ್ಲಾಘಿಸಿದರು.

ಮಾರ್ಗರೆಟ್‌ ಥ್ಯಾಚರ್‌ ಅವರನ್ನು ತನ್ನ ನಾಯಕಿ ಎಂದು ಪರಿಗಣಿಸಿರುವ ತಾಕೈಚಿ, ಎಲ್‌ಡಿಪಿ ಪಕ್ಷದ ಗತವೈಭವವನ್ನು ಮರುಸ್ಥಾಪಿಸಲು ಬೆಟ್ಟದಷ್ಟು ಕೆಲಸಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.

ಟ್ರಂಪ್‌ ಶಾಂತಿ ಸೂತ್ರ: ಹಮಾಸ್ ಭಾಗಶಃ ಒಪ್ಪಿಗೆ

ಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಮತ್ತು ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾಪಿಸಿರುವ ಶಾಂತಿ ಯೋಜನೆಯ ಕೆಲವು ಅಂಶಗಳನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಹಮಾಸ್‌ ತಿಳಿಸಿದೆ.

ಆದರೆ, ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾತುಕತೆ ನಡೆಸಬೇಕಿದೆ ಎಂದೂ ಅದು ಶನಿವಾರ ಹೇಳಿದೆ.

ಹಮಾಸ್‌ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಟ್ರಂಪ್‌ ಅವರ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರು ವುದಾಗಿ ಇಸ್ರೇಲ್‌ ಸೇನೆ ಶನಿವಾರ ಮಾಹಿತಿ ನೀಡಿದೆ.

‘ಇಸ್ರೇಲ್‌ನ ನಾಯಕರು ಯೋಜನೆ ಅನುಷ್ಠಾನಕ್ಕೆ ಸಿದ್ಧತಾ ಕಾರ್ಯವನ್ನು ಮುಂದುವರಿಸಲು ಸೂಚಿಸಿದ್ದಾರೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಮುಂದುವರಿದ ಕಾರ್ಯಾಚರಣೆ: ಗಾಜಾ ಮೇಲೆ ದಾಳಿ ನಡೆಸದಂತೆ ಟ್ರಂಪ್‌ ಅವರು ಇಸ್ರೇಲ್‌ಗೆ ಸೂಚಿಸಿದ ಬಳಿಕವೂ, ಇಸ್ರೇಲ್‌ ಪಡೆಗಳು ಗಾಜಾಪಟ್ಟಿಯಲ್ಲಿ ಶನಿವಾರ ಕಾರ್ಯಾಚರಣೆ ಮುಂದುವರಿಸಿವೆ. ಅಲ್ಲದೆ ನಿವಾಸಿಗಳಿಗೆ ಅಲ್ಲಿಂದ ತೆರಳದಂತೆ ಸೇನೆ ಎಚ್ಚರಿಕೆಯನ್ನೂ ನೀಡಿದೆ. ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿ, ಬಾಂಬ್‌ ದಾಳಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

ತನ್ನ ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಂಡಿರುವುದಾಗಿ ಹಮಾಸ್‌ ಹೇಳಿದ ಬಳಿಕ, ಟ್ರಂಪ್‌ ಅವರು ಗಾಜಾ ಮೇಲಿನ ಬಾಂಬ್‌ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದರು. ‘ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಳ್ಳುವುದಾಗಿ ಹಮಾಸ್‌ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಸಹ ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂಬುದಾಗಿ ನಾನು ನಂಬುತ್ತೇನೆ’ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದರು.

ಇಸ್ರೇಲ್‌–ಹಮಾಸ್‌ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳ ವಿನಿಮಯ ಕುರಿತ ಟ್ರಂಪ್‌ ಈ ವಾರದ ಆರಂಭದಲ್ಲಿ ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಹ ಟ್ರಂಪ್‌ ಯೋಜನೆಯನ್ನು ಅನುಮೋದಿಸಿ, ‘ಯುದ್ಧ ಅಂತ್ಯಗೊಳಿಸಲು ಇಸ್ರೇಲ್‌ ಬದ್ಧವಾಗಿದೆ’ ಎಂದೂ ಹೇಳಿದ್ದರು.

ಹಮಾಸ್‌ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಇಸ್ರೇಲ್‌ ಬಂಧನದಲ್ಲಿ ಇರುವ ನೂರಾರು ಪ್ಯಾಲೆಸ್ಟೀನಿಯನ್‌ ಕೈದಿಗಳ ಬಿಡುಗಡೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಈಜಿಪ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧ: ಹಮಾಸ್‌

ದೀರ್ ಅಲ್–ಬಲಾಹ್ (ಎಪಿ/ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಶಾಂತಿ ಯೋಜನೆ ಅನ್ವಯ, ತನ್ನ ಬಳಿ ಇರುವ ಇಸ್ರೇಲ್‌ನ ಎಲ್ಲ ಜೀವಂತ ಒತ್ತೆಯಾಳುಗಳನ್ನು ಮತ್ತು ಕೆಲ ಒತ್ತೆಯಾಳುಗಳ ಮೃತ ದೇಹಗಳನ್ನು ಹಿಂದಿರುಗಿಸಲು ಸಿದ್ಧ ಇರುವುದಾಗಿ ಹಮಾಸ್‌ ತಿಳಿಸಿದೆ.

ಯೋಜನೆ ಪ್ರಕಾರ, ಹಮಾಸ್‌ ತನ್ನ ಬಳಿ ಇರುವ 48 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಿದೆ. ಈ ಪೈಕಿ 20 ಜನರು ಜೀವಂತ ಇದ್ದಾರೆ ಎಂದು ನಂಬಲಾಗಿದೆ. ಈ ಪ್ರಕ್ರಿಯೆ ಮೂರು ದಿನಗಳಲ್ಲಿ ನೆರವೇರಬೇಕು ಎಂದು ಹೇಳಲಾಗಿದೆ. ಇದಲ್ಲದೆ, ಹಮಾಸ್‌ ಅಧಿಕಾರವನ್ನು ಬಿಡಬೇಕು ಮತ್ತು ನಿಶ್ಶಸ್ತ್ರಗೊಳ್ಳಬೇಕು ಎಂದೂ ಪ್ರಸ್ತಾಪಿತ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.

‘ಒತ್ತೆಯಾಳುಗಳ ಬಿಡುಗಡೆಗೆ ಸಮ್ಮತಿಸಿರುವ ಹಮಾಸ್‌, ಗಾಜಾ ಭವಿಷ್ಯ ಮತ್ತು ಪ್ಯಾಲೆಸ್ಟೀನಿಯರ ಹಕ್ಕು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮತ್ತಷ್ಟು ಮಾತುಕತೆ ಬಾಕಿ ಇದೆ ಎಂಬುದಾಗಿ ಅದು ತಿಳಿಸಿದೆ’ ಎಂದು ಮೂಲಗಳು ಹೇಳಿವೆ.

‘ಎಲ್ಲ ವಿಷಯಗಳನ್ನು ಪರಿಹರಿಸುವುದಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಮಾತುಕತೆ ನಡೆಸಲಾಗುವುದು’ ಎಂದು ಹಮಾಸ್‌ನ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ ಹಮಾಸ್‌, ಒಟ್ಟು 1,200 ಜನರನ್ನು ಕೊಂದಿತ್ತು. ಅಲ್ಲದೆ 251 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಈ ಸಂಬಂಧ ಗಾಜಾ ಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ 66,000ಕ್ಕೂ ಹೆಚ್ಚು ಪ್ಯಾಲೆಸ್ಟೀನ್‌ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಎಂದು ಗಾಜಾದ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆಧಾರ್‌ ಅಪ್‌ಡೇಟ್‌ ಮಕ್ಕಳಿಗೆ ಶುಲ್ಕ ಮನ್ನಾ

ನವದೆಹಲಿ (ಪಿಟಿಐ): ಆಧಾರ್‌ ಕಾರ್ಡ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ವರ್ಷದ ಮಟ್ಟಿಗೆ ಮನ್ನಾ ಮಾಡಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶನಿವಾರ ತಿಳಿಸಿದೆ.

ಅಕ್ಟೋಬರ್‌ 1ರಿಂದ ಇದು ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.

ಮಕ್ಕಳ ‘ಕಡ್ಡಾಯ ಬಯೊಮೆಟ್ರಿಕ್‌ ನವೀಕರಣ’ಕ್ಕೆ (ಎಂಬಿಯು) ಶುಲ್ಕ ಮನ್ನಾ ಮಾಡಿರುವುದರಿಂದ 6 ಕೋಟಿ ಮಕ್ಕಳಿಗೆ ಉಪಯುಕ್ತವಾಗಲಿದೆ ಎಂದು ಅದು ತಿಳಿಸಿದೆ.

ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು ಒದಗಿಸಿ ಆಧಾರ್‌ಗೆ ನೋಂದಾಯಿಸಬಹುದು. ಈ ವಯಸ್ಸಿನ ಮಕ್ಕಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆ (ಐರಿಸ್‌) ಅಷ್ಟಾಗಿ ಪಕ್ವವಾಗಿರುವುದಿಲ್ಲ. ಹೀಗಾಗಿ ಅವರ ಬಯೋಮೆಟ್ರಿಕ್‌ ದಾಖಲಿಸಲು ಆಗುವುದಿಲ್ಲ.

ಹಾಲಿ ನಿಯಮದ ಪ್ರಕಾರ ಮಕ್ಕಳಿಗೆ ಐದು ವರ್ಷಗಳು ತುಂಬಿದ ಬಳಿಕ ಅವರ ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಭಾವಚಿತ್ರಗಳನ್ನು ಆಧಾರ್‌ನಲ್ಲಿ ಅಪ್‌ಡೇಟ್‌ ಮಾಡಬೇಕು. ಆ ಮಕ್ಕಳು 15ರಿಂದ 17ರ ನಡುವಿನ ವಯಸ್ಸಿನಲ್ಲಿ ಇರುವಾಗ ಎರಡನೇ ಬಾರಿಗೆ ಅವುಗಳನ್ನು ಅಪ್‌ಡೇಟ್‌ ಮಾಡಬೇಕು. ಹೀಗೆ 5ರಿಂದ 7 ವರ್ಷ ಮತ್ತು 15ರಿಂದ 17 ವರ್ಷದ ನಡುವಿನ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಈಗ ಶುಲ್ಕ ವಿಧಿಸುವುದಿಲ್ಲ. ಆ ನಂತರ ಪ್ರತಿ ಅಪ್‌ಡೇಟ್‌ಗೆ ₹125 ವಿಧಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಪ್ರಾಧಿಕಾರದ ಈ ನಿರ್ಧಾರದಿಂದ 5ರಿಂದ 17 ವರ್ಷದೊಳಗಿನ ಎಲ್ಲ ಮಕ್ಕಳಿಗೂ ‘ಕಡ್ಡಾಯ ಬಯೋಮೆಟ್ರಿಕ್‌ ಅಪ್‌ಡೇಟ್‌’ ವರ್ಷದ ಮಟ್ಟಿಗೆ ಉಚಿತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರ ಪ್ರಕಟ: ಯುಪಿಎಸ್‌ಸಿ

ನವದೆಹಲಿ (ಪಿಟಿಐ): ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರಗಳನ್ನು ಪ್ರಕಟಿಸಲು ನಿರ್ಧರಿ ಸಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸುವ ಯುಪಿಎಸ್‌ಸಿ, ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಅದು ಮಾಹಿತಿ ನೀಡಿದೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಆಯೋಗ ಪ್ರಮಾಣ ಪತ್ರ ಸಲ್ಲಿಸಿದೆ.

ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್‌ ಕ್ಯೂರಿಯ ಸಲಹೆಗಳನ್ನು ಪಡೆದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಆಯೋಗ ತಿಳಿಸಿದೆ.

‘ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಕೀ– ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಾಗ, ಪ್ರತಿ ಆಕ್ಷೇಪಣೆಗೆ ಮೂರು ಅಧಿಕೃತ ಮೂಲಗಳ ದಾಖಲೆಗಳನ್ನು ಸಲ್ಲಿಸಬೇಕು. ಆ ದಾಖಲೆಗಳು ಪೂರಕ ಎಂದು ಕಂಡು ಬರದಿದ್ದರೆ ಅವುಗಳನ್ನು ತಿರಸ್ಕರಿಸಲಾ ಗುವುದು ಎಂದು ಆಯೋಗ ಹೇಳಿದೆ.

‘ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳು ಅಧಿಕೃತವೋ ಅಥವಾ ಅಲ್ಲವೋ ಎಂಬುದನ್ನು ಆಯೋಗ ನಿರ್ಧರಿಸುತ್ತದೆ’ ಎಂದು ಅದು ಉಲ್ಲೇಖಿಸಿದೆ.

‘ಇದಕ್ಕಾಗಿ ವಿಷಯ ತಜ್ಞರ ತಂಡವನ್ನು ರಚಿಸಲಾಗುತ್ತದೆ. ಅದು ಅಭ್ಯರ್ಥಿಗಳ ಆಕ್ಷೇಪಣೆಗಳು, ಮೂಲ ದಾಖಲೆಗಳನ್ನು ಪರಾಮರ್ಶಿಸಿ ಅಂತಿಮ ಕೀ– ಉತ್ತರಗಳನ್ನು ಸಿದ್ಧಪಡಿಸುತ್ತದೆ. ಅದನ್ನು ಆಧರಿಸಿಯೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗು ತ್ತದೆ. ಈ ವಿಧಾನಗಳನ್ನು ಸಾಧ್ಯವಾದಷ್ಟು ಬೇಗ ಅನುಸರಿಸಲು ಆಯೋಗ ಬಯಸುತ್ತದೆ’ ಎಂದು ವಿವರಿಸಿದೆ.

ಏಕ್ತಾಗೆ ಬೆಳ್ಳಿ, ಪ್ರವೀಣ್‌ಗೆ ಕಂಚಿನ ಪದಕ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್ ಪ್ರವೀಣ್ ಕುಮಾರ್ ಅವರು ಶನಿವಾರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಟಿ64 ಹೈಜಂಪ್‌ನಲ್ಲಿ ಚಿನ್ನ ಗೆಲ್ಲಲಾಗದಿದ್ದರೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕ್ಲಬ್‌ ಥ್ರೊನಲ್ಲಿ ಏಕತಾ ಭ್ಯಾನ್ ಬೆಳ್ಳಿ ಗೆದ್ದರು.

ಭಾರತದ ಅಥ್ಲೀಟುಗಳು ಒಂಬತ್ತನೇ ದಿನವಾದ ಶನಿವಾರ ಒಟ್ಟು ಮೂರು ಪದಕಗಳನ್ನು ಪಡೆದರು. ಆದರೆ ಬಂಗಾರ ಒಲಿಯಲಿಲ್ಲ.

ಭಾನುವಾರ ಈ ಕೂಟದ ಕೊನೆಯ ದಿನವಾಗಿದ್ದು, ಆತಿಥೇಯ ತಂಡ ಈಗಾಗಲೇ 18 ಪದಕಗಳನ್ನು ಗೆದ್ದುಕೊಂಡು ಪದಕಪಟ್ಟಿಯಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆ ದಾಖಲಿಸಿದೆ. ಇದರಲ್ಲಿ ಆರು ಚಿನ್ನ, ಏಳು ಬೆಳ್ಳಿ, ಐದು ಕಂಚಿನ ಪದಕಗಳು ಒಳಗೊಂಡಿವೆ. ಬ್ರೆಜಿಲ್ 37 ಪದಕಗಳೊಡನೆ (12–18–7) ಅಗ್ರಸ್ಥಾನದಲ್ಲಿದೆ. ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆ ಜಪಾನ್‌ನ ಕೋಬೆ (2024) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಾಖಲಾಗಿತ್ತು. ಅಲ್ಲಿ 17 ಪದಕಗಳನ್ನು (6–5–6) ಗೆದ್ದುಕೊಂಡಿತ್ತು.

‌ಭಾರತಕ್ಕೆ ದಿನದ ಮೂರನೇ ಪದಕವನ್ನು ಪುರುಷರ ಷಾಟ್‌ಪಟ್‌ ಎಫ್‌57 ವಿಭಾಗದಲ್ಲಿ ಸೋಮನ್ ರಾಣಾ ತಂದುಕೊಟ್ಟರು. ಸೇನೆಯಲ್ಲಿರುವ 42 ವರ್ಷದ ಸೋಮನ್ 14.69 ಮೀ. ದೂರ ಎಸೆ ದರು. ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ ಅವರು ನಾಲ್ಕನೆ ಥ್ರೊನಲ್ಲಿ ಈ ದೂರ ದಾಖಲಿಸಿದರು. ಈ ವಿಭಾಗದಡಿ ಸ್ಪರ್ಧಿಗಳು ಕಾಲಿನ ಊನದಿಂದಾಗಿ ಕುಳಿತ ಸ್ಥಿತಿಯಲ್ಲೇ ಸ್ಪರ್ಧಿಸಬೇಕಾಗುತ್ತದೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಪ್ರವೀಣ್ ಇಲ್ಲೂ ಫೇವರಿಟ್ ಆಗಿದ್ದರು. ಆದರೆ ಅವರು 2.00 ಮೀ. ಎತ್ತರ ಜಿಗಿಯಲು ಮಾತ್ರ ಸಾಧ್ಯವಾಯಿತು. ಉಜ್ಬೇಕಿಸ್ತಾನದ ತೆಮುರ್ಬೆಕ್‌ ಗಿಯಾಝೋವ್ (2.03 ಮೀ.) ಚಿನ್ನ ಗೆದ್ದರು. ಬ್ರಿಟನ್‌ನ ಜೊನಾಥನ್ ಬ್ರೂಮ್–ಎಡ್ವರ್ಡ್ಸ್ ಸಹ 2.00 ಮೀ. ಜಿಗಿದರೂ ಬೆಳ್ಳಿ ಪಡೆದರು. 37 ವರ್ಷ ವಯಸ್ಸಿನ ಎಡ್ವರ್ಡ್ಸ್‌ ಮೊದಲ ಯತ್ನದಲ್ಲೇ 2.00 ಮೀ. ಜಿಗಿದರೆ, ಪ್ರವೀಣ್ ಎರಡನೇ ಯತ್ನದಲ್ಲಿ ಈ ಎತ್ತರ ದಾಖಲಿಸಿದ್ದರು.

‘10–12 ದಿನಗಳಿಂದ ಪೃಷ್ಠದ ನೋವು ಕಾಡುತ್ತಿದೆ. ಹೀಗಾಗಿ ರನ್‌ಅಪ್‌ ಕೂಡ ಮೊಟಕುಗೊಳಿಸಿದ್ದೆ’ ಎಂದು 22 ವರ್ಷ ವಯಸ್ಸಿನ ಪ್ರವೀಣ್ ಹೇಳಿದರು. ಈ ವಿಭಾಗದಲ್ಲಿ ಸ್ಪರ್ಧಿಸುವವರ ಒಂದು ಕಾಲು ಮಾತ್ರ ಸುಸ್ಥಿತಿಯಲ್ಲಿರುತ್ತದೆ.

ಭ್ಯಾನ್‌ಗೆ ಬೆಳ್ಳಿ: ಮಹಿಳೆಯರ ಎಫ್‌ 51 ಕ್ಲಬ್‌ ಥ್ರೊನಲ್ಲಿ ಏಕತಾ ಆರನೇ ಹಾಗೂ ಅಂತಿಮ ಯತ್ನದಲ್ಲಿ 19.80 ಮೀ. ದೂರ ದಾಖಲಿಸಿದರು. ಉಕ್ರೇನಿನ ಝೊಯಾ ಒವಿಸಿ (24.03 ಮೀ.) ಚಿನ್ನ ಗೆದ್ದರೆ, ತಟಸ್ಥ ದೇಶಗಳ ತಂಡದ ಏಕತೆರಿನಾ ಪೊಟಪೊವಾ (18.60 ಮೀ.) ಕಂಚು ಗೆದ್ದರು. ಕೈ ಅಥವಾ ಕಾಲುಗಳಲ್ಲಿ ಹೆಚ್ಚಿನ ಊನ ಇದ್ದವರು ಈ ವಿಭಾಗದಡಿ ಸ್ಪರ್ಧಿಸುತ್ತಾರೆ.

ಪ್ರಚಲಿತ ವಿದ್ಯಮಾನಗಳು: 4ನೇ ಅಕ್ಟೋಬರ್ 2025

  • ರಕ್ಷಿತ್‌, ಅರ್ಚನಾ ಅತ್ಯುತ್ತಮ ನಟನಟಿ

ಸಂದರ್ಭ: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟಗೊಂಡಿದ್ದು, ರಕ್ಷಿತ್‌ ಶೆಟ್ಟಿ ಅವರು ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಅರ್ಚನಾ ಜೋಯಿಸ್‌ ‘ಮ್ಯೂಟ್‌’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  • ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಅತ್ಯುತ್ತಮ ಮನರಂಜನಾ ಚಿತ್ರ’ ಎಂಬ ಹಿರಿಮೆಗೆ ಪಾತ್ರವಾಗಿದೆ.
  • ರಘು ಕೆ.ಎಂ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದು, ಕಿರಣ್‌ ರಾಜ್‌ ನಿರ್ದೇಶನದ ‘ಚಾರ್ಲಿ 777’ ಎರಡನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
  • ಹೃದಯ ಶಿವ ನಿರ್ದೇಶನದ ‘ಬಿಸಿಲು ಕುದುರೆ’ ಮೂರನೇ ಅತ್ಯುತ್ತಮ ಚಿತ್ರವಾಗಿದೆ. ಕೃಷ್ಣಮೂರ್ತಿ ಚಮರಂ ನಿರ್ದೇಶನದ ‘ಭಾರತೀಯ ಪ್ರಜೆಗಳಾದ ನಾವು’ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಗೊಂಡಿದೆ.
  • ‘ರತ್ನನ್‌ ಪ್ರಪಂಚ’ ಚಿತ್ರಕ್ಕಾಗಿ ಪ್ರಮೋದ್‌ ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು.
  • ಕೆಎಸ್ಆರ್ಟಿಸಿಶಕ್ತಿವಿಶ್ವದಾಖಲೆ

ಸಂದರ್ಭ: ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಯಾದ ‘ಶಕ್ತಿ’ ಯೋಜನೆಯಡಿ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು 500 ಕೋಟಿ‌ ಬಾರಿ ಉಚಿತವಾಗಿ ಪ್ರಯಾಣ ಮಾಡಿರುವುದು ವಿಶ್ವದಾಖಲೆಗೆ ಸೇರ್ಪಡೆಯಾಗಿದೆ.

  • ಇತ್ತೀಚೆಗಷ್ಟೇ ಗೋಲ್ಡನ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದ ಉಚಿತ ಪ್ರಯಾಣವು ಈಗ ಇಂಟರ್‌ ನ್ಯಾಷನಲ್‌ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ವರ್ಲ್ಡ್‌ ರೆಕಾರ್ಡ್ ಆಫ್‌ ಎಕ್ಸೆಲೆನ್ಸ್‌ ಆಗಿ ದಾಖಲಾಗಿದೆ.
  • ನಿಗಮಗಳ ಅಧಿಕಾರಿಗಳು, ನೌಕರರ ಪರಿಶ್ರಮ ಮತ್ತು ಪ್ರಯಾಣಿಕರ ಬೆಂಬಲದಿಂದ ಈ ಸಾಧನೆ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
  • ಚಿನ್ನದ ಬೆಲೆ ಅನಿಶ್ಚಿತತೆಯ ಮಾಪಕ

ಸಂದರ್ಭ:  ‘ಕಚ್ಚಾ ತೈಲದ ಬೆಲೆಯು ತೀರಾ ಈಚಿನವರೆಗೆ ಜಾಗತಿಕ ಅನಿಶ್ಚಿತತೆಗಳ ಮಾಪಕದಂತೆ ಕೆಲಸ ಮಾಡು ತ್ತಿತ್ತು. ಈಗ ಆ ಸ್ಥಾನವನ್ನು ಚಿನ್ನದ ಬೆಲೆಯು ಆಕ್ರಮಿಸಿಕೊಂಡಿರುವಂತೆ ಕಾಣುತ್ತಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹೇಳಿದ್ದಾರೆ.

  • ವಿತ್ತೀಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಜಗತ್ತಿನ ಬಹುತೇಕ ದೇಶಗಳು ಒತ್ತಡಕ್ಕೆ ಸಿಲುಕಿವೆ. ಇಂದಿನ ವ್ಯಾಪಾರ ನೀತಿಗಳು ಕೆಲವು ದೇಶಗಳ ಆರ್ಥಿಕ ಬೆಳವಣಿಗೆಯನ್ನು ಹಾಳು ಮಾಡಬಹುದು. ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ಒಂದಿಷ್ಟು ಕುಸಿತ ಎದುರಾಗಬಹುದು ಎಂದು ಮಲ್ಹೋತ್ರಾ ಅವರು ಎಚ್ಚರಿಕೆ ನೀಡಿದ್ದಾರೆ.
  • ರೆಪೊ ದರವನ್ನು ಶೇಕಡ 5.5ರ ಮಟ್ಟದಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಬುಧವಾರ ತೆಗೆದುಕೊಂಡ ಸಂದರ್ಭದಲ್ಲಿ ಆರ್‌ಬಿಐ, ಜಾಗತಿಕ ಅರ್ಥ ವ್ಯವಸ್ಥೆಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಗಟ್ಟಿತನವನ್ನು ತೋರಿಸಿದೆಯಾದರೂ, ಮುನ್ನೋಟವು ಅಷ್ಟೊಂದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.
  • ‘ಹಿಂದಿನ ದಶಕದಲ್ಲಿ ಜಾಗತಿಕ ಮಟ್ಟದ ಬಿಕ್ಕಟ್ಟುಗಳು ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದವು. ಅಂತಹ ಬಿಕ್ಕಟ್ಟುಗಳು ಈಗ ಎದುರಾಗಿದ್ದರೂ, ಕಚ್ಚಾ ತೈಲದ ಬೆಲೆಯು ಒಂದು ಹಂತದಲ್ಲಿ ಮಾತ್ರ ಏರಿಳಿತ ಕಾಣುತ್ತಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಕಚ್ಚಾ ತೈಲದ ಮಹತ್ವವು ಕಡಿಮೆ ಆಗಿರುವುದು ಇದಕ್ಕೆ ಕಾರಣ ಆಗಿರಬಹುದು. ಇದು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಆಗಿದೆ’ ಎಂದು ಮಲ್ಹೋತ್ರಾ ಹೇಳಿದ್ದಾರೆ. ‘ಬಹುಶಃ ಈಗ ಚಿನ್ನದ ಬೆಲೆಯು ಜಾಗತಿಕ ಅನಿಶ್ಚಿತತೆಯ ಮಾಪಕದಂತೆ ಕೆಲಸ ಮಾಡುತ್ತಿದೆ’ ಎಂದು ಅವರು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶದಲ್ಲಿ ಹೇಳಿದ್ದಾರೆ.
  • ತಂತ್ರಜ್ಞಾನ ವಲಯದ ಕೆಲವು ಷೇರುಗಳ ಬೆಲೆಯು ಜಾಗತಿಕ ಷೇರುಪೇಟೆ ಗಳ ಒಟ್ಟಾರೆ ಏರಿಕೆಗೆ ಕಾರಣವಾಗಿರುವ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, ‘ಷೇರುಪೇಟೆಗಳಲ್ಲಿ ಕುಸಿತವೊಂದು ಎದುರಾಗಬಹುದು’ ಎಂದು ಎಚ್ಚರಿಸಿದ್ದಾರೆ.
  • ದೇಶದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲಿಷ್ಠವಾಗಿ ಇವೆ. ಜಗತ್ತಿನಲ್ಲಿ ಅನಿಶ್ಚಿತತೆ ಇದ್ದರೂ ಭಾರತದಲ್ಲಿ ಸ್ಥಿರತೆ ಇದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
  • ಹಣದುಬ್ಬರ ಕಡಿಮೆ ಇರುವುದು, ವಿದೇಶಿ ವಿನಿಮಯ ಸಂಗ್ರಹವು ಚೆನ್ನಾಗಿ ಇರುವುದು ಹಾಗೂ ಬ್ಯಾಂಕ್‌ ಮತ್ತು ಕಾರ್ಪೊರೇಟ್ ಕಂಪನಿಗಳ ಲೆಕ್ಕಪತ್ರವು ಸುಸ್ಥಿತಿಯಲ್ಲಿ ಇರುವುದು ಇದಕ್ಕೆ ಕಾರಣ ಎಂದಿದ್ದಾರೆ.
  • ಭಾರತದೊಂದಿಗೆ ವ್ಯಾಪಾರಅಸಮತೋಲನ ಸರಿಪಡಿಸಿ

ಸಂದರ್ಭ: ಅಧಿಕ ಪ್ರಮಾಣದ ಕಚ್ಚಾತೈಲ ಖರೀದಿಸುತ್ತಿರುವ ಭಾರತದೊಂದಿಗೆ ವ್ಯಾಪಾರ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಹಾಗೂ ಔಷಧವನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ತನ್ನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

  • ಇದೇ ಡಿಸೆಂಬರ್‌ನಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಪುಟಿನ್‌ ಈ ಘೋಷಣೆ ಮಾಡಿದ್ದಾರೆ.
  • ರಷ್ಯಾ ದಕ್ಷಿಣ ಭಾಗದ ಸೋಚಿ ಪಟ್ಟಣದಲ್ಲಿರುವ ‘ಬ್ಲ್ಯಾಕ್‌ ಸೀ’ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ನಡೆದ ಭಾರತ ಸೇರಿದಂತೆ 140 ದೇಶದ ಭದ್ರತೆ ಹಾಗೂ ಭೌಗೋಳಿಕ ರಾಜಕೀಯ ತಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.
  • ‘ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಹೆಚ್ಚಿನ ಸುಂಕ ಹೇರಿದ್ದರಿಂದ ಉಂಟಾದ ನಷ್ಟಕ್ಕೆ ಪ್ರತಿಯಾಗಿ ಅಲ್ಲಿಂದ ಹೆಚ್ಚಿನ ವಸ್ತುಗಳನ್ನು ಖರೀದಿಸುವ ಮೂಲಕ ಸಮತೋಲನಗೊಳಿಸಲಾಗುತ್ತದೆ. ಆ ಮೂಲಕ ಸಾರ್ವಭೌಮ ರಾಷ್ಟ್ರ ಪ್ರತಿಷ್ಠೆಯೂ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತಿದ್ದು, ಶೇಕಡಾ 50ರಷ್ಟು ತೆರಿಗೆ ವಿಧಿಸಿದಂತಾಗಿದೆ. ಇದರಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
  • ಈ ವಿಚಾರವನ್ನು ಉಲ್ಲೇಖಿಸಿದ ಪುಟಿನ್‌, ‘ವ್ಯಾಪಾರ ಅಸಮತೋಲನ ತೆಗೆದುಹಾಕುವ ನಿಟ್ಟಿನಲ್ಲಿ ಭಾರತದ ಕೃಷಿ, ಔಷಧಗಳನ್ನು ಹೆಚ್ಚಿನ ಸಂಖ್ಯೆಯನ್ನು ಖರೀದಿಸಲಾಗುತ್ತದೆ. ಔಷಧ, ಔಷಧ ಉತ್ಪನ್ನಗಳ ವಿಚಾರದಲ್ಲಿ ನಮ್ಮ ಕಡೆಯಿಂದ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದ್ದಾರೆ.
  • ಮೊದಲ ಮಹಿಳಾ ಆರ್ಚ್ ಬಿಷಪ್ಸೆರಾ

ಸಂದರ್ಭ: ಮೊಟ್ಟ ಮೊದಲ ಬಾರಿಗೆ ಮಹಿಳಾ ಆರ್ಚ್‌ಬಿಷಪ್‌ ನೇಮಕ ಮಾಡುವ ಮೂಲಕ ಚರ್ಚ್‌ ಆಫ್‌ ಇಂಗ್ಲೆಂಡ್‌ ಇತಿಹಾಸ ನಿರ್ಮಾಣ ಮಾಡಿದೆ. ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ಬಿಷಪ್‌ ಆಗಿ ಸೆರಾ ಮುಲ್ಲಲಿ ಅವರನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ.

  • ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿ ರೆವರೆಂಡ್ ಜಸ್ಟಿನ್‌ ವಿಲ್ಬೆ ಅವರು ಕಳೆದ ವರ್ಷ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಸೆರಾ ಅವರು 2018ರಿಂದ ಬಿಷಪ್‌ ಆಗಿದ್ದರು.
  • 106ನೇ ಆರ್ಚ್‌ಬಿಷಪ್‌ ಆಗಿ ಸೆರಾ ಅವರ ನೇಮಕಕ್ಕೆ ಮೂರನೇ ಕಿಂಗ್‌ ಚಾರ್ಲ್ಸ್‌ ಅಧಿಕೃತ ಒಪ್ಪಿಗೆ ನೀಡಿದ್ದರು. ಶುಶ್ರೂಷಕಿಯಾಗಿದ್ದ ಸೆರಾ ಅವರ ನೇಮಕವನ್ನು ಇಂಗ್ಲೆಂಡ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ಸ್ವಾಗತಿಸಿದ್ದಾರೆ.
  • 63 ವರ್ಷದ ಸೆರಾ 106ನೇ ಆರ್ಚ್‌ಬಿಷಪ್‌ ಆಗಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವರ ನೇಮಕವನ್ನು ದೃಢೀಕರಿಸಲಾಗುತ್ತದೆ.
  • ಶಾಂತಿ ಒಪ್ಪಂದಕ್ಕೆ ಸಹಿ: ಹಮಾಸ್ಗೆ ಗಡುವು

ಸಂದರ್ಭ: ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಸಿದ್ಧಪಡಿಸಿರುವ 20 ಅಂಶಗಳ ಯೋಜನೆಗೆ, ಅಮೆರಿಕ ಕಾಲಮಾನದ ಪ್ರಕಾರ ಭಾನುವಾರ ಸಂಜೆ 6 ಗಂಟೆಯೊಳಗೆ (ಭಾರತೀಯ ಕಾಲಮಾನ ನಸುಕಿನ ಜಾವ 3.30) ಸಹಿ ಹಾಕಬೇಕು ಎಂದು ಹಮಾಸ್‌ ಸಂಘಟನೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ತಾಕೀತು ಮಾಡಿದ್ದಾರೆ.

  • ‘ಇದು ಕೊನೆಯ ಅವಕಾಶ. ಒಂದು ವೇಳೆ ಹಮಾಸ್‌ ಈ ಒಪ್ಪಂದಕ್ಕೆ ಸಹಿ ಹಾಕದಿ ದ್ದರೆ ಹಿಂದೆಂದೂ ಕಂಡಿರದಂತಹ ಭೀಕರ ದಾಳಿಗಳನ್ನು ಹಮಾಸ್‌ ಎದುರಿಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.
  • ಈ ಕುರಿತು ಅವರು ಪೋಸ್ಟ್‌ ಮಾಡಿದ್ದು, ‘ಅಮಾಯಕ ಪ್ಯಾಲೆಸ್ಟೀನಿಯನ್ನರು ಕೂಡಲೇ ಗಾಜಾದಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು’ ಎಂದೂ ಅವರು ಹೇಳಿದ್ದಾರೆ.

‘ಕಾಲಾವಕಾಶ ಅಗತ್ಯ’

  • ಗಾಜಾಪಟ್ಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯನ್ನು ಅಧ್ಯಯನ ನಡೆಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಹಮಾಸ್‌ ಸಂಘಟನೆ ಹೇಳಿದೆ. ‘ಟ್ರಂಪ್‌ ಅವರ ಯೋಜನೆ ಬಗ್ಗೆ ಹಮಾಸ್‌ ಸಮಾಲೋಚನೆ ನಡೆಸುತ್ತಿದೆ. ಇದಕ್ಕಾಗಿ ಸ್ವಲ್ಪ ಕಾಲಾವಕಾಶ ಅಗತ್ಯವಿರುವ ಬಗ್ಗೆ ಸಂಧಾನಕಾರರಿಗೆ ಮಾಹಿತಿ ನೀಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ, ಹಮಾಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ವೇಟ್ಲಿಫ್ಟಿಂಗ್‌: ಮೀರಾಗೆ ಬೆಳ್ಳಿ

ಸಂದರ್ಭ: ಅನುಭವಿ ಮೀರಾಬಾಯಿ ಚಾನು ಅವರು ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ನ ಮಹಿಳೆಯರ 48 ಕೆ.ಜಿ. ವಿಭಾಗ ದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡರು. ಇದು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರಿಗೆ ಮೂರನೇ ಪದಕ.

  • ಈ ಹಿಂದೆ 2017 ಮತ್ತು 2022ರಲ್ಲೂ ಅವರು ರಜತ ಪದಕ ಜಯಿಸಿದ್ದರು. ಅವರು ಒಟ್ಟು 199 ಕೆ.ಜಿ. ಭಾರ ಎತ್ತಿದರು. 31 ವರ್ಷ ವಯಸ್ಸಿನ ಚಾನು ಸ್ನಾಚ್‌ನಲ್ಲಿ 84 ಕೆ.ಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ115 ಕೆ.ಜಿ ಎತ್ತಿದರು.
  • ಸ್ನಾಚ್‌ ಸ್ಪರ್ಧೆಯ ವೇಳೆ ಅವರು ಪರದಾಡಿದರು. 87 ಕೆ.ಜಿ. ಎತ್ತಲು ಹೋಗಿ ಎರಡು ಸಲ ವಿಫಲರಾದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಅವರು ಮೂರೂ ಯತ್ನಗಳಲ್ಲಿ (109, 112 ಮತ್ತು 115 ಕೆ.ಜಿ) ಸರಾಗವಾಗಿ ಭಾರ ಎತ್ತಿದರು. ಅವರು 115 ಕೆ.ಜಿ. ಭಾರವನ್ನು ಇದಕ್ಕಿಂತ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2021) ಎತ್ತಿದ್ದರು.
  • ಉತ್ತರ ಕೊರಿಯಾದ ರಿ ಸಾಂಗ್ ಗುಮ್ 213 ಕೆ.ಜಿ. ಭಾರ (91 ಕೆ.ಜಿ+ 122 ಕೆ.ಜಿ) ಎತ್ತಿ ಚಿನ್ನ ಗೆದ್ದರಲ್ಲದೇ, ಆ ಹಾದಿಯಲ್ಲಿ ಕ್ಲೀನ್ ಆ್ಯಂಡ್‌ ಜರ್ಕ್‌ ಮತ್ತು ಒಟ್ಟು ತೂಕ ವಿಭಾಗದಲ್ಲಿ ನೂತನ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
  • ಥಾಯ್ಲೆಂಡ್‌ನ ಥಾನ್ಯಥಾನ್ ಸುಕ್ಚೆರೋನ್‌ ಒಟ್ಟು 198 ಕೆ.ಜಿ. ಭಾರ (88+110 ಕೆ.ಜಿ) ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ನಿಶಾದ್ಕುಮಾರ್‌, ಸಿಮ್ರನ್ಗೆ ಚಿನ್ನ

ಸಂದರ್ಭ: ಭಾರತದ ನಿಶಾದ್ ಕುಮಾರ್‌ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಹೈಜಂಪ್‌ ಟಿ47 ಸ್ಪರ್ಧೆಯಲ್ಲಿ ನೂತನ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದರು. ಈ ಕೂಟದ ಏಳನೇ ದಿನ ಸಿಮ್ರನ್‌ ಶರ್ಮಾ ಅವರು ವೈಯಕ್ತಿಕ ಶ್ರೇಷ್ಠ ಅವಧಿಯೊಡನೆ ಮಹಿಳೆಯರ 100 ಮೀ. (ಟಿ12) ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

  • ಈ ಹಿಂದೆ ಹಲವು ಅಂತರ ರಾಷ್ಟ್ರೀಯ ಕೂಟಗಳಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶಾದ್‌ 2.14 ಮೀ. ಜಿಗಿಯುವ  ಮೂಲಕ ಮೊದಲ ಬಾರಿ ವಿಶ್ವ ಕೂಟದಲ್ಲಿ ಚಿನ್ನ ಗೆದ್ದರು. ಅವರು  ಟೋಕಿಯೊ ಮತ್ತು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತು ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿ ಗೆದ್ದಿದ್ದರು. ಮೂರು ಬಾರಿಯ ವಿಶ್ವ ಚಾಂಪಿಯನ್ ಅಮೆರಿಕದ ರೊಡೆರಿಕ್‌ ಟೌನ್ಸೆಂಡ್ (2.03 ಮೀ.) ಎರಡನೇ ಸ್ಥಾನಕ್ಕೆ ಸರಿದರು.
  • ಇಲ್ಲಿ ಚಿನ್ನ ಖಚಿತವಾದ ನಂತರ ನಿಶಾದ್ ಅವರು ವಿಶ್ವ ದಾಖಲೆಗೆ ಯತ್ನಿಸಿದರೂ 2.18 ಮೀ. ಜಿಗಿಯಲು ಹೋಗಿ ವಿಫಲರಾದರು. ಮುಂಗೈ ಕಳೆದುಕೊಂಡ ಸ್ಪರ್ಧಿಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.
  • ಸಿಮ್ರನ್‌ 100 ಮೀ. ಓಟವನ್ನು 11.95 ಸೆ.ಗಳಲ್ಲಿ ಕ್ರಮಿಸಿದರು. ಈ ವಿಭಾಗದ ಅಥ್ಲೀಟುಗಳು ಭಾಗಶಃ ದೃಷ್ಟಿದೋಷ ಹೊಂದಿರುತ್ತಾರೆ.
  • ಭಾರತದ ಪ್ರೀತಿ ಪಾಲ್ 30.903 ಸೆ.ಗಳೊಂದಿಗೆ 200 ಮೀ. ಓಟದಲ್ಲಿ (ಟಿ35) ಕಂಚಿನ ಪದಕ ಗೆದ್ದುಕೊಂಡರು.

ಪ್ರಚಲಿತ ವಿದ್ಯಮಾನಗಳು: 3ನೇ ಅಕ್ಟೋಬರ್ 2025

  • ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ

ಸಂದರ್ಭ: ಎರಡು ನಗರ ಪಾಲಿಕೆಗಳಲ್ಲಿ ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳು.

  • ಒಂದು ವಿಧಾನಸಭೆ ಕ್ಷೇತ್ರದ ಪ್ರದೇಶಗಳು ಒಂದೇ ನಗರ ಪಾಲಿಕೆಯಲ್ಲಿ ಇರಬೇಕೆಂಬ ನಿಯಮಗಳಿದ್ದರೂ, ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳು ಎರಡಕ್ಕಿಂತ ಹೆಚ್ಚು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿವೆ.
  • ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಜಿಬಿಜಿಎ) ಅಧ್ಯಾಯ 4ರ ನಗರ ಪಾಲಿಕೆ ರಚನೆಯ ಉಪ ಪ್ರಕರಣ 3ರ ಪ್ರಕಾರ, ‘ಒಂದು ವಿಧಾನಸಭೆ ಕ್ಷೇತ್ರವನ್ನು ಎರಡು ಅಥವಾ ಹೆಚ್ಚಿನ ನಗರ ಪಾಲಿಕೆಗಳಿಗೆ ವಿಭಜಿಸತಕ್ಕದ್ದಲ್ಲ’. ಆದರೆ, ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಒಟ್ಟು 19 ವಾರ್ಡ್‌ಗಳು ಮೂರು ನಗರ ಪಾಲಿಕೆಗಳಿಗೆ ಹಂಚಿಕೆಯಾಗಿವೆ.
  • ಪಶ್ಚಿಮ ನಗರ ಪಾಲಿಕೆಯಲ್ಲಿ 13 ವಾರ್ಡ್‌ಗಳಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಐದು ವಾರ್ಡ್ ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಒಂದು ವಾರ್ಡ್ ಇದೆ.
  • ಯಶವಂತಪುರ ವಿಧಾನಸಭೆ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಒಂದು ವಾರ್ಡ್ ದಕ್ಷಿಣ ನಗರ ಪಾಲಿಕೆಯಲ್ಲಿದ್ದರೆ, ಉಳಿದ 11 ವಾರ್ಡ್‌ಗಳು ಪಶ್ಚಿಮ ನಗರ ಪಾಲಿಕೆಯಲ್ಲಿವೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ 18 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳು ಉತ್ತರ ನಗರ ಪಾಲಿಕೆಯಲ್ಲಿದ್ದರೆ, ಪಶ್ಚಿಮ ನಗರ ಪಾಲಿಕೆಯಲ್ಲಿ 10 ವಾರ್ಡ್‌ಗಳಿವೆ. ಪದ್ಮನಾಭಗರ ವಿಧಾನಸಭೆ ಕ್ಷೇತ್ರದ 14 ವಾರ್ಡ್‌ಗಳಲ್ಲಿ ದಕ್ಷಿಣ ನಗರ ಪಾಲಿಕೆಯಲ್ಲಿ 6 ವಾರ್ಡ್ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 8 ವಾರ್ಡ್‌ಗಳು ಹಂಚಿಕೆಯಾಗಿವೆ. ಮಹದೇವಪುರ ವಿಧಾನಸಭೆ ಕ್ಷೇತ್ರದ 24 ವಾರ್ಡ್‌ಗಳಲ್ಲಿ ಒಂದು ವಾರ್ಡ್ ಮಾತ್ರ ದಕ್ಷಿಣ ನಗರ ಪಾಲಿಕೆಯಲ್ಲಿದ್ದು, ಉಳಿದ 23 ವಾರ್ಡ್‌ಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ.
  • 25 ಸಾವಿರ ಜನಸಂಖ್ಯೆ: ಐದೂ ನಗರ ಪಾಲಿಕೆಗಳ ವಾರ್ಡ್ ಜನಸಂಖ್ಯೆಯನ್ನು ಸರಾಸರಿ 25 ಸಾವಿರ ಇರುವಂತೆ ಪುನರ್ ವಿಂಗಡಣೆ ಮಾಡಲಾಗಿದೆ. ಒಟ್ಟು 368 ವಾರ್ಡ್‌ಗಳಲ್ಲಿ ಪ್ರತಿಯೊಂದು ವಾರ್ಡ್‌ನ ಜನಸಂಖ್ಯೆ 20 ಸಾವಿರದಿಂದ 27 ಸಾವಿರ ಇದೆ.

ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್

  • ಜಿಬಿಎ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್‌ಗಳಿದ್ದು, ಆನೇಕಲ್ ವಿಧಾನಸಭೆ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದಂತೆ ಒಂದು ವಾರ್ಡ್ ಮಾತ್ರ ಇದೆ.
  • ಕೆ.ಆರ್. ಪುರದಲ್ಲಿ 27 ವಾರ್ಡ್‌ಗಳಿದ್ದು, ಮಹದೇವಪುರದಲ್ಲಿ 24 ವಾರ್ಡ್‌ಗಳಿವೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 20 ವಾರ್ಡ್‌ಗಳಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ತಲಾ 19 ವಾರ್ಡ್‌ಗಳಿವೆ. ದಾಸರಹಳ್ಳಿ (18 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಪದ್ಮನಾಭನಗರ (14 ವಾರ್ಡ್), ಬ್ಯಾಟರಾಯನಪುರ (14 ವಾರ್ಡ್) ಮತ್ತು ವಿಜಯನಗರ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 13 ವಾರ್ಡ್‌ಗಳಿವೆ.

ಯಾವ ಪಾಲಿಕೆಯಲ್ಲಿದೆ ಯಾವ ವಿಧಾನಸಭೆ ಕ್ಷೇತ್ರ?

  • ಬೆಂಗಳೂರು ಕೇಂದ್ರ ನಗರ ಪಾಲಿಕೆ ಒಟ್ಟು 63 ವಾರ್ಡ್‌: ಚಾಮರಾಜಪೇಟೆ (10 ವಾರ್ಡ್), ಚಿಕ್ಕಪೇಟೆ (12 ವಾರ್ಡ್), ಸಿ.ವಿ. ರಾಮನ್ ನಗರ (13 ವಾರ್ಡ್), ಗಾಂಧಿನಗರ (10 ವಾರ್ಡ್), ಶಾಂತಿನಗರ (10 ವಾರ್ಡ್), ಶಿವಾಜಿನಗರ (8 ವಾರ್ಡ್).
  • ಬೆಂಗಳೂರು ಉತ್ತರ ನಗರ ಪಾಲಿಕೆ ಒಟ್ಟು 72 ವಾರ್ಡ್‌: ದಾಸರಹಳ್ಳಿ (8 ವಾರ್ಡ್), ಪುಲಕೇಶಿನಗರ (11 ವಾರ್ಡ್) ಬ್ಯಾಟರಾಯನಪುರ (14 ವಾರ್ಡ್), ಯಲಹಂಕ (7 ವಾರ್ಡ್), ರಾಜರಾಜೇಶ್ವರಿನಗರ (5 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಹೆಬ್ಬಾಳ (11 ವಾರ್ಡ್).
  • ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಟ್ಟು 72 ವಾರ್ಡ್‌: ಆನೇಕಲ್ (1 ವಾರ್ಡ್), ಜಯನಗರ (10 ವಾರ್ಡ್), ಪದ್ಮನಾಭನಗರ (6 ವಾರ್ಡ್), ಬಿಟಿಎಂ ಲೇಔಟ್ (13 ವಾರ್ಡ್), ಬೆಂಗಳೂರು ದಕ್ಷಿಣ (19 ವಾರ್ಡ್), ಬೊಮ್ಮನಹಳ್ಳಿ (20 ವಾರ್ಡ್), ಮಹದೇವಪುರ (1 ವಾರ್ಡ್), ಯಶವಂತಪುರ (1 ವಾರ್ಡ್), ರಾಜರಾಜೇಶ್ವರಿ ನಗರ (1 ವಾರ್ಡ್).
  • ಬೆಂಗಳೂರು ಪೂರ್ವ ನಗರ ಪಾಲಿಕೆ ಒಟ್ಟು 50 ವಾರ್ಡ್‌: ಕೆ.ಆರ್. ಪುರ (27 ವಾರ್ಡ್), ಮಹದೇವಪುರ (23 ವಾರ್ಡ್)
  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಒಟ್ಟು 111 ವಾರ್ಡ್‌: ಗೋವಿಂದರಾಜ ನಗರ (13 ವಾರ್ಡ್), ದಾಸರಹಳ್ಳಿ (10 ವಾರ್ಡ್), ಪದ್ಮನಾಭನಗರ (8 ವಾರ್ಡ್), ಬಸವನಗುಡಿ (10 ವಾರ್ಡ್), ಮಲ್ಲೇಶ್ವರ (10 ವಾರ್ಡ್), ಮಹಾಲಕ್ಷ್ಮಿ ಲೇಔಟ್ (12 ವಾರ್ಡ್), ಯಶವಂತಪುರ (11 ವಾರ್ಡ್), ರಾಜರಾಜೇಶ್ವರಿ ನಗರ (13 ವಾರ್ಡ್), ರಾಜಾಜಿನಗರ (11 ವಾರ್ಡ್), ವಿಜಯನಗರ (13 ವಾರ್ಡ್).
  • ಗುಹಾಗೆ ಗಾಂಧಿ ಸೇವಾ ಪ್ರಶಸ್ತಿ

ಸಂದರ್ಭ: ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ– ಕರ್ನಾಟಕ’ಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
  • ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಗುಹಾ ಆವರು ಮಹತ್ವದ ಪಾತ್ರವಹಿಸಿದ್ದಾರೆ. ಆದ್ದರಿಂದ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
  • ಗುಹಾ ಅವರು ಗಾಂಧಿ ಚಿಂತನೆಗಳು, ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಮತ್ತು ಕ್ರಿಕೆಟ್‌ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
  • ಜನ ವಿಶ್ವಾಸ ಮಸೂದೆ: ಆಯ್ಕೆ ಸಮಿತಿಗೆ ತೇಜಸ್ವಿ ಮುಖ್ಯಸ್ಥ

ಸಂದರ್ಭ: ‘ಜನ ವಿಶ್ವಾಸ ಮಸೂದೆ 2025’ ಅನ್ನು ಪರಿ ಶೀಲಿಸಲು ಹೊಸದಾಗಿ ರಚಿಸಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ರನ್ನಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

  • 24 ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸಲಾಗಿದ್ದು, ಜನ ವಿಶ್ವಾಸ ಮಸೂದೆ ಹಾಗೂ ಆದಾಯ ತೆರಿಗೆ ಮಸೂದೆಗಳಿಗೆ ಹೊಸದಾಗಿ ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ.
  • 30 ದಿನಗಳವರೆಗೆ ನಿರಂತರವಾಗಿ ಜೈಲಿನಲ್ಲಿರುವ ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೇಂದ್ರ ಸರ್ಕಾರದ ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವ ಬಗ್ಗೆ ಗೊಂದಲ ಮುಂದುವರಿದಿದೆ.
  • ಯುಪಿಐ ವಹಿವಾಟು: ಶುಲ್ಕ ಪ್ರಸ್ತಾವ ಇಲ್ಲ

ಸಂದರ್ಭ: ಯುಪಿಐ ಆಧಾರಿತ ಪಾವತಿಗಳಿಗೆ ಯಾವುದೇ ಬಗೆಯ ಶುಲ್ಕ ವಿಧಿಸುವ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

  • ಕ್ರೆಡಿಟ್‌ ಕಾರ್ಡ್‌ ಬಳಸಿ ಮೊಬೈಲ್‌ ಫೋನ್‌ ಖರೀದಿ ಮಾಡಿದವರು ಇಎಂಐ ಪಾವತಿಯಲ್ಲಿ ವಿಫಲರಾದರೆ, ಅವರ ಮೊಬೈಲ್‌ ಫೋನ್‌ಅನ್ನು ದೂರದಿಂದಲೇ ಲಾಕ್ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತರಬೇಕು ಎಂಬ ಪ್ರಸ್ತಾವನೆಯು ಸಾಲ ನೀಡುವ ಕಂಪನಿಗಳಿಂದ ಬಂದಿದೆ. ಇದನ್ನು ಆರ್‌ಬಿಐ ಪರಿಶೀಲಿಸುತ್ತಿದೆ ಎಂದು ಗವರ್ನರ್ ಹೇಳಿದ್ದಾರೆ.
  • ಯುಪಿಐ ಬಳಸಿ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಯನ್ನು ಗವರ್ನರ್ ಎದುರು, ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಇರಿಸಲಾಗಿತ್ತು.
  • ಮೊಬೈಲ್‌ ಫೋನ್‌ಗಳನ್ನು ದೂರದಿಂದಲೇ ಲಾಕ್ ಮಾಡುವ ಸೌಲಭ್ಯಕ್ಕೆ ಅನುಮತಿ ನೀಡುವುದರ ಒಳಿತು, ಕೆಡುಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದ್ದಾರೆ.
  • ‘ಇಲ್ಲಿ ಗ್ರಾಹಕರ ಹಕ್ಕುಗಳು, ಅವರ ಅಗತ್ಯಗಳು, ದತ್ತಾಂಶದ ಸುರಕ್ಷತೆ, ಸಾಲದಾತ ಕಂಪನಿಗಳ ಅಗತ್ಯಗಳು ಇವುಗಳೆಲ್ಲ ವನ್ನು ಪರಿಶೀಲಿಸಿದಾಗ ಒಳಿತು, ಕೆಡುಕುಗಳು ಇರುವುದು ಗೊತ್ತಾಗುತ್ತದೆ. ಹೀಗಾಗಿ ನಾವು ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ. ಮುಂದೆ ನಾವು ಇದರ ಬಗ್ಗೆ ನಿಲುವು ತೆಗೆದುಕೊಳ್ಳುತ್ತೇವೆ’ ಎಂದು ರಾವ್ ಹೇಳಿದ್ದಾರೆ.
  • ರೆಪೊ ದರವನ್ನು ಮುಂದಿನ ದಿನಗಳಲ್ಲಿ ತಗ್ಗಿಸುವ ಸಾಧ್ಯತೆ ಕುರಿತಾದ ಪ್ರಶ್ನೆಗೆ ಗವರ್ನರ್ ಮಲ್ಹೋತ್ರಾ ಅವರು, ಹಣ ದುಬ್ಬರ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿರುವ ಕಾರಣ ಮುಂದೆ ಹಣ ಕಾಸಿನ ನಿಲುವನ್ನು ಇನ್ನಷ್ಟು ಸಡಿಲಗೊಳಿಸಲು ಅವಕಾಶ ಇದೆ ಎಂದು ಉತ್ತರಿಸಿದ್ದಾರೆ.

ಬೆಳವಣಿಗೆ ಅಂದಾಜು ಪರಿಷ್ಕರಣೆ:

  • ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.8ಕ್ಕೆ ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಅಲ್ಲದೆ, ಇಡೀ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2.6ಕ್ಕೆ ತಗ್ಗಬಹುದು ಎಂದು ಕೂಡ ಅದು ನಿರೀಕ್ಷಿಸಿದೆ.
  • ತೆರಿಗೆ ಪಾಲು: ರಾಜ್ಯಕ್ಕೆ ₹3,705 ಕೋಟಿ

ಸಂದರ್ಭ: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಹೆಚ್ಚುವರಿಯಾಗಿ ₹3,705 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ಉತ್ತರದ ರಾಜ್ಯಗಳಿಗೆ ಬಿಡುಗಡೆಯಾಗಿರುವ ಮೊತ್ತ ಹೆಚ್ಚು ಇದೆ.

  • ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,01,603 ಕೋಟಿ ಬಿಡುಗಡೆ ಗೊಳಿಸಿದೆ. ಅಕ್ಟೋಬರ್ 10ರಂದು ಬಿಡುಗಡೆಯಾಗಲಿರುವ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
  • 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.
  • ‘ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಗೊಳಿಸಲಾಗಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
  • ಜನನಮರಣ ದತ್ತಾಂಶ ಜೋಡಿಸಿ

ಸಂದರ್ಭ: ಜನನ ಮತ್ತು ಮರಣ ನೋಂದಣಿಯ ದತ್ತಾಂಶವನ್ನು ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಿದರೆ, ಮೃತಪಟ್ಟ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. 

  • ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಹಲವು ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದ ಮೃತಪಟ್ಟಿರುವ ವ್ಯಕ್ತಿಗಳ ಹೆಸರನ್ನು ತೆಗೆದುಹಾಕ ಲಾಯಿತು. ಎಸ್‌ಐಆರ್‌ ಜತೆಗೆ ಜನನ–ಮರಣ ನೋಂದಣಿ ದತ್ತಾಂಶವನ್ನು ಚುನಾವಣಾ ವ್ಯವಸ್ಥೆಗೆ ಜೋಡಿಸಿದರೆ ಈ ಲೋಪವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಬಿಹಾರದ ಎಸ್‌ಐಆರ್‌ ಉಳಿದ ರಾಜ್ಯಗಳಿಗೂ ಮಾದರಿ ಆಗಲಿದೆ ಎಂದು ಆಯೋಗ ತಿಳಿಸಿದೆ.
  • ಸೋಯಾ, ಶೇಂಗಾ ಖರೀದಿ ಕೇಂದ್ರ ಆರಂಭಿಸಲು ಸೂಚನೆ

ಸಂದರ್ಭ: ಬೆಂಬಲ ಬೆಲೆಯಲ್ಲಿ ಸೋಯಾಬಿನ್‌ ಮತ್ತು ಶೇಂಗಾ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಸಮಿತಿಗಳಿಗೆ ಸೂಚಿಸಿದ್ದಾರೆ.

  • ಸೋಯಾಬಿನ್‌ ಕ್ವಿಂಟಾಲ್‌ಗೆ ₹5,328 ಹಾಗೂ ಶೇಂಗಾಗೆ ₹7,623 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೀದರ್‌, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬಿನ್‌, ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೇಂಗಾ ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
  • ನಾಫೆಡ್‌, ಎನ್‌ಸಿಸಿಎಫ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಕ ಮಾಡಲಾಗಿದೆ. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
  • ಅಲ್ಲದೇ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಖರೀದಿ ಕೇಂದ್ರಗಳಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮಾರ್ಗಸೂಚಿ ಅನ್ವಯ ಖರೀದಿ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ನಿರಂತರವಾಗಿ ನಿಗಾವಹಿಸಬೇಕು ಎಂದು ಅವರು ಸಂಬಂಧಪಟ್ಟ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
  • ರೈಲು ಉಪಕರಣ: ಭಾರತ ಪ್ರಮುಖ ರಫ್ತುದಾರ

ಸಂದರ್ಭ:ರೈಲು ಬೋಗಿ, ಕೋಚ್‌ಗಳು, ಲೋಕೊಮೋಟಿವ್ಸ್‌ ಹಾಗೂ ಪ್ರೊಪಲ್ಷನ್‌ ಸಿಸ್ಟಮ್ ಸೇರಿದಂತೆ ಹಲವು ಉಪಕರಣಗಳ ಜಾಗತಿಕ ರಫ್ತುದಾರನಾಗಿ ಭಾರತವು ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

  • ‘ಭಾರತದ ರೈಲ್ವೆ ಉಪಕರಣಗಳು ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ. 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಬಳಸುತ್ತಿವೆ. ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಪೂರೈಕೆಯೆಡೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಅದು ಹೇಳಿದೆ.
  • ‘ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್‌, ಮೆಕ್ಸಿಕೊ, ರೊಮೇನಿಯಾ, ಸ್ಪೇನ್‌, ಜರ್ಮನಿ, ಇಟಲಿ, ಶ್ರೀಲಂಕಾ, ಮ್ಯಾನ್ಮಾರ್‌, ಬಾಂಗ್ಲಾದೇಶ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ‘ಮೇಕ್‌ ಇನ್‌ ಇಂಡಿಯಾ’ ಹಾಗೂ ‘ಮೇಕ್‌ ಫಾರ್‌ ದಿ ವಲ್ರ್ಡ್‌’ ಉಪಕ್ರಮಗಳ ಅಡಿಯಲ್ಲಿ ರಫ್ತು ಮಾಡಲಾಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.
  • ಬಿಹಾರದ ಲೋಕೊಮೋಟಿವ್‌ ಉತ್ಪಾದನಾ ಘಟಕದಿಂದ ಜಿನೆವಾಗೆ ಮೊದಲ ಬಾರಿ ಜೂನ್‌ನಲ್ಲಿ ಲೋಕೊಮೋಟಿವ್‌ ರಫ್ತು ಮಾಡಲಾಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
  • ದಾಖಲೆಯ 7 ಪದಕ ಗೆದ್ದ ಶ್ರೀಹರಿ

ಸಂದರ್ಭ: ಭಾರತದ ಈಜು ಪಟುಗಳು ಬುಧವಾರ ಮುಕ್ತಾಯ ಗೊಂಡ 11ನೇ ಏಷ್ಯನ್ ಈಜು ಚಾಂಪಿ ಯನ್‌ಷಿಪ್‌ನಲ್ಲಿ ಒಟ್ಟು 13 ಪದಕಗಳನ್ನು ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಮುಗಿಸಿದರು. ಕರ್ನಾಟಕದ ಈಜುತಾರೆ ಶ್ರೀಹರಿ ನಟರಾಜ್‌ ಅವರು ದಾಖಲೆಯ ಏಳು ಪದಕ ಜಯಿಸಿದರು.

  • 24 ವರ್ಷ ವಯಸ್ಸಿನ ಶ್ರೀಹರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಅದರೊಂದಿಗೆ ಕೂಟದ ಇತಿಹಾಸ ದಲ್ಲಿ ಹೆಚ್ಚು (7) ಪದಕ ಗೆದ್ದ ಭಾರತದ ಈಜುಪಟು ಎಂಬ ಗೌರವಕ್ಕೂ ಭಾಜನರಾದರು. ಅವರು 55.23 ಸೆಕೆಂಡುಗಳಲ್ಲಿ ಗುರಿ ತಲುಪಿದರು.
  • ಚೀನಾದ ಗುಕೈಲೈ ವಾಂಗ್‌ (54.27 ಸೆ.) ಮತ್ತು ತೈವಾನ್‌ನ ಲು ಲುನ್‌ ಶುವಾಂಗ್‌ (54.45 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಈಜುಪಟು ರಿಷಭ್‌ ದಾಸ್‌ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
  • ಪುರುಷರ 4×100 ಮೀ. ಫ್ರೀಸ್ಟೈಲ್‌ ರಿಲೆ ಸ್ಪರ್ಧೆಯಲ್ಲಿ ಶ್ರೀಹರಿ, ಆಕಾಶ್‌ ಮಣಿ, ಥಾಮಸ್‌ ದೊರೈ ಹಾಗೂ ರೋಹಿತ್‌ ಬೆನೆಡಿಕ್ಟನ್‌ ಅವರನ್ನೊಳಗೊಂಡ ಭಾರತ ತಂಡವು (3ನಿ.21.49ಸೆ.) ಕಂಚು ಜಯಿಸಿತು. ಚೀನಾ (3ನಿ.20.24ಸೆ.) ಚಿನ್ನ ಗೆದ್ದರೆ, ಬೆಳ್ಳಿ ಪದಕವು ತೈವಾನ್‌ (3ನಿ.20.59ಸೆ.) ಪಾಲಾಯಿತು.
  • ಮಹಿಳೆಯರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಭವ್ಯಾ ಸಚದೇವ ಅವರು (4ನಿ. 26.89ಸೆ.) ಕಂಚಿನ ಪದಕ ಜಯಿಸಿದರು. ಇದು ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ. ಜಪಾನ್‌ನ ಹರುನೊ ತನಿಮೊಟೊ (4ನಿ.16.39ಸೆ.) ಚಿನ್ನ ಗೆದ್ದರೆ, ವಿಯೆಟ್ನಾಂನ ಖಾ ನಿ ಗುಯೆನ್‌ (4ನಿ. 25.50ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಜನ್‌ ಪ್ರಕಾಶ್‌ (1ನಿ.57.90ಸೆ.) ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಕೂಟದಲ್ಲಿ 4 ಬೆಳ್ಳಿ ಹಾಗೂ 9 ಕಂಚು ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು. 38 ಚಿನ್ನ ಸೇರಿ ಒಟ್ಟು 49 ಪದಕಗಳನ್ನು ಗೆದ್ದ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.
  • ಮುಕೇಶ್ಗೆ ಸ್ವರ್ಣ

ಸಂದರ್ಭ: ಉದಯೋನ್ಮುಖ ಶೂಟರ್‌ ಮುಕೇಶ್‌ ನೇಲವಲ್ಲಿ ಅವರು ಇಲ್ಲಿ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ ಶೂಟಿಂಗ್ ಚಾಂಪಿಯನ್‌ ಷಿಪ್‌ನಲ್ಲಿ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ತೇಜಸ್ವನಿ ಸಿಂಗ್‌ ಅವರು ಬೆಳ್ಳಿ ಜಯಿಸಿದರು.

  • ಜೂನಿಯರ್‌ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಮುಕೇಶ್‌ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್‌ (ಎಐಎನ್‌) ಅಲೆಕ್ಸಾಂಡರ್‌ ಕೊವಲೆವ್‌ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್‌ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಒಲಿಂಪಿಕ್ಸ್‌ ಸ್ಪರ್ಧೆಗಳಲ್ಲಿ 19 ಪದಕ ಗಳನ್ನು (6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು) ಗೆದ್ದ ಭಾರತ ತಂಡ ಪದಕ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆಯಿತು. ಎಐಎನ್‌ ಸ್ಪರ್ಧಿಗಳು 10 ಪದಕಗಳೊಂದಿಗೆ (4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು) ಎರಡನೇ ಸ್ಥಾನ ಪಡೆದರು.

ಪ್ರಚಲಿತ ವಿದ್ಯಮಾನಗಳು: 1ನೇ ಅಕ್ಟೋಬರ್ 2025

Bhima Water Dispute: ‘ನೀರುಹಂಚಿಕೆ: ರಾಜ್ಯದ ಹಿತಾಸಕ್ತಿ ರಕ್ಷಣೆ’

ಮಹಾರಾಷ್ಟ್ರವು ಭೀಮಾ ನದಿಯಲ್ಲಿ ರಾಜ್ಯದ ಪಾಲನ್ನು ತಪ್ಪಿಸಲು ಹೆಚ್ಚುವರಿ ಜಲಾಶಯಗಳನ್ನು ನಿರ್ಮಿಸಿಕೊಂಡಿರುವ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಎರಡೂ ರಾಜ್ಯಗಳ ಮಧ್ಯದ ಜಲವಿವಾದವು ಕೇಂದ್ರ ಜಲ ಆಯೋಗದ ಮುಂದೆ ಇದೆ. ರಾಜ್ಯದ ಹಿತಾಸಕ್ತಿಯನ್ನು ಕಾಯಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.

5 ಪಾಲಿಕೆಗಳಲ್ಲಿ 368 ವಾರ್ಡ್

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿ, ಗಡಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 368 ವಾರ್ಡ್‌ಗಳಿವೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಅಡಿಯಲ್ಲಿ ಸೆ.2ರಂದು ಜಿಬಿಎ ರಚಿಸಲಾಗಿತ್ತು. ಜಿಬಿಎ ವ್ಯಾಪ್ತಿಯಲ್ಲಿ ಹಿಂದಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು ಹಂಚಿಕೆ ಮಾಡಿ 5 ನಗರ ಪಾಲಿಕೆಗಳನ್ನು ರಚಿಸಿ, ಗಡಿ ನಿಗದಿ ಮಾಡಿ ಅಂದೇ ಅಧಿಸೂಚನೆ ಹೊರಡಿಸಲಾಗಿತ್ತು.

ಐದು ನಗರ ಪಾಲಿಕೆಗಳ ವಾರ್ಡ್‌ ಗಳನ್ನು ಮರು ವಿಂಗಡಿಸಲು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ನೇತೃತ್ವದಲ್ಲಿ ‘ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗ’ವನ್ನು ರಚಿಸಿ, ಸೆಪ್ಟೆಂಬರ್‌ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆಯೋಗ ಒಂದು ವಾರ ತಡವಾಗಿ, ಸೆ. 30ರಂದು ವರದಿ ಸಲ್ಲಿಸಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3)ರ ಅನ್ವಯ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿ, ಸಲ್ಲಿಸಲಾಗಿದ್ದ ವಾರ್ಡ್‌ ಮರು ವಿಂಗಡಣೆಯ ವರದಿಯನ್ನು ಸರ್ಕಾರ ಒಪ್ಪಿದೆ. ಜಿಬಿಜಿಎ ಕಾಯ್ದೆಯ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 2011ರ ಜನಗಣತಿಯ ಆಧಾರದಲ್ಲಿ, ಗ್ರೇಟರ್‌ ಬೆಂಗಳೂರು ಪ್ರದೇಶದ ಐದು ನಗರ ಪಾಲಿಕೆಗಳಲ್ಲಿ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.

ಯಾವುದೇ ಆಕ್ಷೇಪ/ ಸಲಹೆಗಳಿದ್ದರೆ ಸಾರ್ವಜನಿಕರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ–ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬಿ.ಆರ್‌. ಅಂಬೇಡ್ಕರ್‌ ವೀದಿ, ಬೆಂಗಳೂರು– 560001’ ಇವರಿಗೆ ಅಕ್ಟೋಬರ್‌ 15ರ ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ/ ಸಲಹೆಗಳನ್ನು ಪರಿಶೀಲಿಸಿ, ನಗರ ಪಾಲಿಕೆಗಳ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆಯನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗು ತ್ತದೆ ಎಂದು ತಿಳಿಸಲಾಗಿದೆ.

ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ

ವಾರ್ಡ್‌ ಹೆಸರಿನಲ್ಲಿ ಸುಭಾಷ್‌ ಚಂದ್ರ ಬೋಸ್‌, ಮಂಗಲ್‌ ಪಾಂಡೆ, ಕುವೆಂಪು, ಪುನೀತ್‌, ಅಬ್ದುಲ್ ಕಲಾಂ ಆಜಾದ್‌, ಕೃಷ್ಣದೇವರಾಯ, ವಿವೇಕಾನಂದ, ಅನಿಬೆಸೆಂಟ್‌

ಇತಿಹಾಸ ಪ್ರಸಿದ್ಧ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು, ಚಿತ್ರನಟರ ಹೆಸರನ್ನು ಐದು ನಗರ ಪಾಲಿಕೆಗಳ ವಿವಿಧ ವಾರ್ಡ್‌ಗಳಿಗೆ ಇಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಸಾಹಿತಿ ಡಿ.ವಿ. ಗುಂಡಪ್ಪ ಅವರ ಹೆಸರಿಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಜಯನಗರ ಟಿ ಬ್ಲಾಕ್‌ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ, ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್‌ ಅವರ ಹೆಸರನ್ನು ಕುಮಾರಸ್ವಾಮಿ ಲೇಔಟ್‌ 2ನೇ ಹಂತದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಇಡಲಾಗಿದೆ.

ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿ ಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ‘ಮಂಗಲ್‌ ಪಾಂಡೆ’, ‘ಸಂಗೊಳ್ಳಿ ರಾಯಣ್ಣ’, ’ಝಾನ್ಸಿ ರಾಣಿ ’ ಎಂದು ಹೆಸರಿಡಲಾಗಿದೆ.

ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸ ‘ಕೃಷ್ಣದೇವರಾಯ’, ಕಂಠೀರವ ಸ್ಟುಡಿಯೊ ವ್ಯಾಪ್ತಿಯ ವಾರ್ಡ್‌ಗೆ ನಟ ‘ಡಾ. ಪುನೀತ್‌ ರಾಜ್‌ಕುಮಾರ್‌:, ದಾಸರಹಳ್ಳಿ–ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದ್ರಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ‘ನಾಡಪ್ರಭು ಕೆಂಪೇಗೌಡ ನಗರ’, ನಂದಿನಿ ಲೇಔಟ್‌ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೆಸರಿಸಲಾಗಿದೆ.

ಲಗ್ಗೆರೆ ಪ್ರದೇಶದ ವಾರ್ಡ್‌ಗೆ ‘ಫ್ರೀಡಂ ಫೈಟರ್‌ ವಾರ್ಡ್‌’ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ. ಬ್ಲಾಕ್‌ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ‘ಡಾ. ರಾಜ್‌ಕುಮಾರ್‌’ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ‘ಸ್ವಾಮಿ ವಿವೇಕಾನಂದ’ ಎಂದು ಹೆಸರಿಡಲಾಗಿದೆ.

ವಾರ್ಡ್‌ಗಳಿಗೆ ಪ್ರಮುಖರ ಹೆಸರು

ದಕ್ಷಿಣ ನಗರ ಪಾಲಿಕೆಯಲ್ಲಿ ವಾರ್ಡ್‌ಗಳಲ್ಲಿ ಚಿಕ್ಕಲಸಂದ್ರ ಪ್ರದೇಶಕ್ಕೆ ‘ಸಾರ್ವಭೌಮನಗರ’, ಕೋರಮಂಗಲ 6ನೇ ಬ್ಲಾಕ್‌ ಸಾಮಾಜಿಕ ಹೋರಾಟಗಾರರಾದ ‘ಅನಿಬೆಸೆಂಟ್‌’, ಬಿಟಿಎಂ ಲೇಔಟ್‌ 1ನೇ ಹಂತಕ್ಕೆ ‘ವಿಶ್ವಮಾನವ ಕುವೆಂಪು’ ಬೊಮ್ಮನಹಳ್ಳಿಯ ಕೆ.ಆರ್‌. ಲೇಔಟ್‌ಗೆ ‘ಕೆಂಗಲ್‌ ಹನುಮಂತಯ್ಯ’ ಎಂದು ಹೆಸರಿಡಲಾಗಿದೆ.

ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳಿಗೆ ಇಟ್ಟಗೆ ಆಂಜನಪ್ಪ ಲೇನ್‌, ಚೌಡಪ್ಪ ರಸ್ತೆಗೆ ‘ಐಡಿಪಿ ಸಾಲಪ್ಪ’, ಮಂಜುನಾಥ ನಗರ ಬಿ. ಬ್ಲಾಕ್, ಗಾಂಧಿನಗರ ಪ್ರದೇಶಕ್ಕೆ ‘ಸುಭಾಶ್ಚಂದ್ರ ಬೋಸ್‌’ ಎಂದು ನಾಮಕರಣ ಮಾಡಲಾಗಿದೆ.

ಉತ್ತರ ನಗರ ಪಾಲಿಕೆಯಲ್ಲಿ ಹಿದಾಯತ್ ನಗರಕ್ಕೆ ‘ಸಮಾಧಾನ ನಗರ’, ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ಗೆ ಶಿಕ್ಷಣ ತಜ್ಞೆ ‘ಅರುಣಾ ಆಸಿಫ್‌ ಅಲಿ’, ದೇವರಜೀವನಹಳ್ಳಿಗೆ ‘ದೊಡ್ಡಣ್ಣನಗರ’ ಎಂದು ಹೆಸರಿಸಲಾಗಿದೆ.

ಪೂರ್ವ ನಗರ ಪಾಲಿಕೆಯಲ್ಲಿ ಕೊಟ್ಟೂರು–ದರ್ಗಾ ಮೊಹಲ್ಲಾಗೆ ಕವಿ ‘ಕೆ.ಎಸ್‌. ನಿಸಾರ್‌ ಅಹಮದ್’, ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ವಿಜ್ಞಾನ ನಗರಕ್ಕೆ ‘ತಲಕಾವೇರಿ’ ಎಂದು ನಾಮಕರಣ ಮಾಡಲಾಗಿದೆ.

ಶಿಲಾಯುಗ ಕಾಲದ ಅವಶೇಷ ಪತ್ತೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಉಪಕರಣಗಳು ಹಾಗೂ ನವ ಶಿಲಾಯುಗ ಕಾಲದ ಉಜ್ಜಿ ನಯಗೊಳಿಸಿದ ಕೈಗೊಡಲಿ, ಮಡಿಕೆ ಚೂರುಗಳು, ಬೃಹತ್ ಕುಟ್ಟು ಚಿತ್ರಗಳು ಪತ್ತೆಯಾಗಿವೆ. 

ಈ ಸ್ಥಳ ಹಗರಿ ನದಿ ದಂಡೆಯ ಮೇಲಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಅಂಚಿನಲ್ಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಶೋಧ ನಡೆಸಿದೆ.

ಗೂಳಿ, ಹಸು ಕುಟ್ಟುಚಿತ್ರ: ಮೀನಕೆರೆ ಗ್ರಾಮದ ನೈರುತ್ಯ ಭಾಗಕ್ಕಿರುವ ಕೆಂಗಮಲೆಯಪ್ಪನವರ ಹೊಲದಲ್ಲಿ ನವಶಿಲಾಯುಗ ಕಾಲಕ್ಕೆ ಸೇರಿದ (ಕ್ರಿ. ಪೂ. 3,000ಕ್ಕೆ ಹಿಂದೆ) ಹುಟ್ಟು ಕಲ್ಲುಬಂಡೆ ಯನ್ನು ಚಪ್ಪಟೆಯಾಕಾರ ಮಾಡಿ ಆ ಕಲ್ಲುಬಂಡೆಗೆ ಕುಟ್ಟಿ ಬೃಹತ್ ಗೂಳಿ ಮತ್ತು ಅದರ ಬಳಿಯಲ್ಲಿಯ ಗುಂಡು ಕಲ್ಲಿಗೆ ಕುಟ್ಟಿ ಹಸುವಿನ ಚಿತ್ರವನ್ನು ಬಿಡಿಸಿದ್ದನ್ನು ಮೀನಕೆರೆ ಗ್ರಾಮದ ಸಂಶೋಧಕ ಕಲಂದರ್ ಗಮನಿಸಿದ್ದರು. ಅವರ ಸಹಕಾರದಿಂದ ವಿಜಯನಗರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಇತಿಹಾಸದ ಪುಟಗಳು ಮತ್ತಷ್ಟು ತೆರೆದುಕೊಂಡವು ಎಂದು ತಂಡದ ಸದಸ್ಯರೂ ಆಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋವಿಂದ, ದೃಶ್ಯಕಲಾ ವಿಭಾಗದ ಪ್ರೊ.ಕೃಷ್ಣೇಗೌಡ ಹೇಳಿದರು.

ಮಾನವಾಕೃತಿ ಕಲ್ಲು: ಮೀನಕೆರೆ ಗ್ರಾಮದ ವಾಯುವ್ಯ ದಿಕ್ಕಿಗೆ ಇರುವ ಕುಮತಿ ಗ್ರಾಮದಲ್ಲಿ ಬೃಹತ್ ಗಾತ್ರದ ಮಾನವಾಕೃತಿ ಕಲ್ಲುಗಳಿವೆ. ಅವು ಈಗಾಗಲೇ ಬೆಳಕಿಗೆ ಬಂದಿವೆ.

‘ಇವುಗಳಿಂದ ಶಿಲಾಯುಗ ಕಾಲದ ಆದಿಮಾನವನ ಸಂಸ್ಕೃತಿ ತಿಳಿಯುವ ಯತ್ನಿಸಬಹುದು. ಇಲ್ಲಿ ಏಳು ಕಲ್ಲುಗಳಿದ್ದವು, ಎರಡು ಉಳಿದಿವೆ. ಸಂರಕ್ಷಣೆ ಅಗತ್ಯ ಇದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಎಚ್. ತಿಪ್ಪೇಸ್ವಾಮಿ ಹೇಳಿದರು.

3 ಅಡಿ ಎತ್ತರದ ಗೂಳಿ ಚಿತ್ರ

ಕುಟ್ಟಿ ರಚಿಸಲಾದ ಗೂಳಿ ಚಿತ್ರವು 3 ಅಡಿ ಎತ್ತರ 3 ಅಡಿ ‌ಅಗಲವಿದೆ. ಕೊಂಬುಗಳು ಬಾಗಿದಂತಿವೆ. ಮುಂದಿನ ಎರಡು ಕಾಲು ನೆಟ್ಟಗೆ ನಿಂತಂತಿವೆ. ಹಿಂದಿನ ಕಾಲುಗಳು ಮಡಚಿದಂತೆ ಕಾಣಿಸುತ್ತವೆ. ಗೂಳಿಯು ಎದುರಿನ ಪ್ರಾಣಿಯ ಜೊತೆಗೆ ಕಾದಾಟ ಮಾಡುತ್ತಿರುವಂತೆ ಇಲ್ಲವೇ ಹೌಹಾರಿದಂತೆ ಕಾಣಿಸುತ್ತದೆ. ಗುಂಡುಕಲ್ಲನ್ನು ಚಪ್ಪಟೆಯಾಕಾರದಲ್ಲಿ ಮಾಡಿಕೊಂಡು ಗೂಳಿ ಚಿತ್ರವನ್ನು ಕುಟ್ಟಿರಬೇಕು ಎಂದು ಅಂದಾಜಿಸಲಾಗಿದೆ.

ಘಟಕಕ್ಕೆ ಸಾಲ: ನಿಯಮ ಸಡಿಲ

ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ತಯಾರಿಕಾ ಘಟಕಗಳಿಗೆ ಅಗತ್ಯವನ್ನು ಆಧರಿಸಿದ ಕಾರ್ಯಾಚರಣೆ ಬಂಡವಾಳ ಸಾಲ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಾಣಿಜ್ಯ ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಈ ಸೌಲಭ್ಯವು ಇದುವರೆಗೆ ಜುವೆಲ್ಲರಿಗಳಿಗೆ ಮಾತ್ರ ಲಭ್ಯವಿತ್ತು.

ಚಿನ್ನ ಅಥವಾ ಬೆಳ್ಳಿಯನ್ನು ಯಾವುದೇ ಸ್ವರೂಪದಲ್ಲಿ ಖರೀದಿಸುವ ಉದ್ದೇಶಕ್ಕೆ ಸಾಲ ಕೊಡಲು ಬ್ಯಾಂಕ್‌ಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಅಧಿಕಾರ ಇರುವುದಿಲ್ಲ. ಕಚ್ಚಾ ಚಿನ್ನ, ಬೆಳ್ಳಿಯನ್ನು ಅಡಮಾನವಾಗಿ ಇರಿಸಿಕೊಂಡು ಸಾಲ ಕೊಡಲು ಬ್ಯಾಂಕ್‌ಗಳಿಗೆ ಅವಕಾಶ ಇಲ್ಲ.

ಆದರೆ ಕಾರ್ಯಾಚರಣೆ ಬಂಡವಾಳ ಸಾಲವನ್ನು ಜುವೆಲ್ಲರಿಗಳಿಗೆ ನೀಡಲು ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲಾಗಿದೆ.

ಸೋಮವಾರ ಕೆಲವು ನಿರ್ದೇಶನ ಗಳನ್ನು ಹೊರಡಿಸಿರುವ ಆರ್‌ಬಿಐ, ಜುವೆಲ್ಲರಿಗಳಿಗೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಇರುವ ಅವಕಾಶವನ್ನು ಇತರ ತಯಾರಿಕಾ ಘಟಕಗಳಿಗೂ ಅನ್ವಯಿಸಿ ವಿಸ್ತರಣೆ ಮಾಡಿದೆ.

ತಯಾರಿಕಾ ಚಟುವಟಿಕೆ ಅಥವಾ ಕೈಗಾರಿಕಾ ಸಂಸ್ಕರಣಾ ಚಟುವಟಿಕೆಗಳಲ್ಲಿ ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಇತರರಿಗೂ ಕಾರ್ಯಾಚರಣೆ ಬಂಡವಾಳ ಸಾಲವನ್ನು ನೀಡಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

ಚಿನ್ನ ಅಥವಾ ಬೆಳ್ಳಿಯನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಅಥವಾ ತಯಾರಿಕಾ ಚಟುವಟಿಕೆಯಲ್ಲಿ ಇವುಗಳನ್ನು ಒಂದು ಅಗತ್ಯ ವಸ್ತುವನ್ನಾಗಿ ಬಳಕೆ ಮಾಡುವವರಿಗೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ 3ನೇ ಹಂತದ ಅಥವಾ 4ನೇ ಹಂತದ ನಗರ ಸಹಕಾರ ಬ್ಯಾಂಕ್‌ಗಳು ಕಾರ್ಯಾಚರಣೆ ಬಂಡವಾಳಕ್ಕೆ ಸಾಲ ನೀಡಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಚಿನ್ನ, ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಳ

ನವದೆಹಲಿ (ಪಿಟಿಐ): ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹500ರಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1.20 ಲಕ್ಷಕ್ಕೆ ತಲುಪಿದೆ.

ಅಮೆರಿಕದ ಡಾಲರ್‌ ದುರ್ಬಲ ಆಗಿದ್ದುದು ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರವನ್ನು ಇನ್ನಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆಯು ಈ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಶೇಕಡ 99.5ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹500ರಷ್ಟು ಹೆಚ್ಚಾಗಿ, ₹1,19,400ಕ್ಕೆ ತಲುಪಿದೆ. 

ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹500ರಷ್ಟು ಹೆಚ್ಚಳವಾಗಿ ₹1,50,500ಕ್ಕೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ₹7,000ದಷ್ಟು ಏರಿಕೆ ಆಗಿತ್ತು.

ವಿದೇಶಿ ಸಾಲದ ಮೊತ್ತ ಏರಿಕೆ

ಜೂನ್‌ ಅಂತ್ಯದ ವೇಳೆಗೆ ಭಾರತವು ವಿದೇಶಗಳಿಂದ ಪಡೆದ ಸಾಲಗಳ ಮೊತ್ತವು 747.2 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ (ಅಂದಾಜು ₹66.36 ಲಕ್ಷ ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

2025ರ ಮಾರ್ಚ್‌ ಅಂತ್ಯಕ್ಕೆ ಭಾರತವು ವಿವಿಧ ದೇಶಗಳಿಂದ ಪಡೆದಿದ್ದ ಸಾಲದ ಮೊತ್ತಕ್ಕೆ ಹೋಲಿಸಿದರೆ ಇದು 11.2 ಬಿಲಿಯನ್ ಡಾಲರ್‌ನಷ್ಟು (ಅಂದಾಜು ₹99 ಸಾವಿರ ಕೋಟಿ) ಹೆಚ್ಚು.

ಆದರೆ ದೇಶದ ಸಾಲವನ್ನು ದೇಶದ ಒಟ್ಟು ಜಿಡಿಪಿಯ ಗಾತ್ರದ ಜೊತೆ ಹೋಲಿಸಿದರೆ ಸಾಲದ ಪ್ರಮಾಣವು ಕಡಿಮೆ ಆಗಿರುವುದು ಕಾಣುತ್ತದೆ. ಜೂನ್‌ ಅಂತ್ಯಕ್ಕೆ ವಿದೇಶಿ ಸಾಲ ಮತ್ತು ಜಿಡಿಪಿ ಅನುಪಾತವು ಶೇ 18.9ಕ್ಕೆ ಇಳಿಕೆ ಆಗಿದೆ. ಇದು ಮಾರ್ಚ್‌ನಲ್ಲಿ ಶೇ 19.1ರಷ್ಟು ಇತ್ತು.

ದಿಮ್ಮಿಗಳ ಮೇಲೆ ಶೇ 10ರಷ್ಟು ಸುಂಕ

ಅಮೆರಿಕ ಆಮದು ಮಾಡಿಕೊಳ್ಳುವ ಮರ ಮತ್ತು ಮರದ ದಿಮ್ಮಿಗಳ ಮೇಲೆ ಶೇ 10ರಷ್ಟು, ಅಡುಗೆ ಮನೆ ಹಾಗೂ ಸ್ನಾನಗೃಹದ ಉಪಕರಣಗಳು, ಸೋಫಾಸೆಟ್‌ ಸೇರಿದಂತೆ ಪೀಠೋಪಕರಣಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿಹಾಕಿದ್ದಾರೆ.

ಈ ನೂತನ ಸುಂಕಗಳು ಅಕ್ಟೋಬರ್ 14ರಿಂದ ಜಾರಿಗೆ ಬರಲಿವೆ. ಪೇಟೆಂಟ್ ಪಡೆದ ಔಷಧ ಮತ್ತು ಭಾರಿ ಟ್ರಕ್‌ಗಳ ಆಮದು ಮೇಲೆ ಹೊಸ ಸುಂಕಗಳನ್ನು ವಿಧಿಸಿ ಕಳೆದ ವಾರ ಆದೇಶಿಸಲಾಗಿತ್ತು. ಈ ಸುಂಕಗಳು ಅಕ್ಟೋಬರ್‌ 1ರಿಂದಲೇ ಜಾರಿಗೆ ಬರಲಿವೆ.

ಅಮೆರಿಕವು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಜನವರಿ 1ರ ಒಳಗಾಗಿ ಒಪ್ಪಂದ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, ಸೋಫಾ ಸೇರಿ ವಿವಿಧ ಪೀಠೋಪಕರಣಗಳ ಮೇಲಿನ ಸುಂಕವು ಶೇ 30ಕ್ಕೆ ಹೆಚ್ಚಿಸಲಾಗು ವುದು ಹಾಗೂ ಅಡುಗೆ ಮನೆ ಉಪಕರಣಗಳ ಮೇಲಿನ ಸುಂಕವನ್ನು ಶೇ50ಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಮರದ ಉತ್ಪನ್ನಗಳ ಆಮದು ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ, ಈ ಉತ್ಪನ್ನಗಳ ಆಮದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಲಿದೆ ಎಂದು ಹೇಳುವ ಮೂಲಕ ಸುಂಕ ಹೆಚ್ಚಳವನ್ನು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.

ಏರ್‌ ರೈಫಲ್ ಮಿಶ್ರ ತಂಡಕ್ಕೆ ಚಿನ್ನ

 ತೀವ್ರ ಹೋರಾಟ ನಡೆಸಿದ ಇಶಾ ಅನಿಲ್‌ ಟಕ್ಸಾಲೆ ಮತ್ತು ಹಿಮಾಂಶು ಜೋಡಿ, ಸ್ವದೇಶದ ಶಾಂಭವಿ ಕ್ಷೀರಸಾಗರ– ನರೇನ್‌ ಪ್ರಣವ್ ಅವರನ್ನು ಸೋಲಿಸಿ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನ 10 ಮೀ. ಏರ್‌ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮಂಗಳವಾರ ಸ್ವರ್ಣ ಜಯಿಸಿತು.

ಪುರುಷರ ಟ್ರ್ಯಾಪ್‌ (50 ಗುರಿ) ಸ್ಪರ್ಧೆ ಯಲ್ಲಿ ವಿನಯ್ ಪ್ರತಾಪ್‌ ಚಂದ್ರಾವತ್ ಅವರು ಕಂಚಿನ ಪದಕ ಗೆದ್ದರು. ಬುಧವಾರ ಈ ಕೂಟದ ಕೊನೆಯ ದಿನ ವಾಗಿದ್ದು, ಭಾರತ ಪದಕ ಪಟ್ಟಿಯಲ್ಲಿ 23 ಪದಕಗಳೊಂದಿಗೆ ಅಗ್ರಸ್ಥಾನ ಕಾಪಾ ಡಿಕೊಂಡಿದೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ.

ಫೈನಲ್‌ನ ಒಂದು ಹಂತದಲ್ಲಿ ಇಶಾ– ಹಿಮಾಂಶು ಜೋಡಿ 9–15ರಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಅಮೋಘವಾಗಿ ಚೇತರಿಸಿ 17–15ರಲ್ಲಿ ಜಯಗಳಿಸಿತು. ಈ ಸ್ಪರ್ಧೆಯ ಕಂಚಿನ ಪದಕ ಐಎನ್‌ಎ (ವೈಯಕ್ತಿಕ ತಟಸ್ಥ ಅಥ್ಲೀಟ್ಸ್‌) ಪ್ರತಿನಿಧಿಸಿದ ವರ್ವರಾ ಕರ್ದಕೋವಾ– ಕಮಿಲ್‌ ನುರಿಯಖ್ಮೆಟೋವ್ ಜೋಡಿ ಪಾಲಾಯಿತು.

ಪುರುಷರ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಕ್ರೊವೇಷ್ಯಾದ 20 ವರ್ಷ ವಯಸ್ಸಿನ ಟೋನಿ ಗುಡೆಲ್‌ ಅವರು 44 ಟಾರ್ಗೆಟ್‌ ಸಾಧಿಸಿ ಚಿನ್ನ ಗೆದ್ದರು. ಇದು ಈ ದೇಶಕ್ಕೆ ಮೊದಲ ಚಿನ್ನ. ಕ್ವಾಲಿಫಿಕೇಷನ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಸ್ಪೇನ್‌ನ ಐಸಾಕ್‌ ಹರ್ನಾಂಡೆಝ್ (41) ಬೆಳ್ಳಿ ಗೆದ್ದರು. ಚಂದ್ರಾವತ್ (34) ಮೂರನೇ ಸ್ಥಾನ ಗಳಿಸಿದರೆ, ಅರ್ಜುನ್ (29) ನಾಲ್ಕನೇ ಸ್ಥಾನ ಪಡೆದರು.

ಮಹಿಳೆಯರ 25 ಮೀ. ಪಿಸ್ತೂಲ್ ಪ್ರಿಸಿಷನ್‌ ಹಂತದ ನಂತರ ಭಾರತದ ತೇಜಸ್ವಿನಿ 288 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬುಧವಾರ ರ‍್ಯಾಪಿಡ್‌ ಫೈರ್ ಹಂತ ನಡೆಯಲಿದ್ದು, ಒಟ್ಟಾರೆ ಮೊದಲ ಆರು ಸ್ಥಾನ ಗಳಿಸಿದವರು ಫೈನಲ್‌ ತಲುಪುವರು.

ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯ ಪ್ರಿಸಿಷನ್‌ ಹಂತದ ನಂತರ ಭಾರತದ ರಾಘವ್ ಶರ್ಮಾ (290) ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್‌ ನೆಲವಳ್ಳಿ (289) ನಿಕಟ ಪೈಪೋಟಿ ನೀಡಿ ಎರಡನೇ ಸ್ಥಾನದಲ್ಲಿದ್ದಾರೆ.

ಐದನೇ ಪದಕ ಗೆದ್ದ ಶ್ರೀಹರಿ ನಟರಾಜ್

ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಈಜುತಾರೆ ಶ್ರೀಹರಿ ನಟರಾಜ್‌ ಅವರು 11ನೇ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಮಂಗಳವಾರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅವರಿಗೆ ಈ ಕೂಟದಲ್ಲಿ ಐದನೇ ಪದಕ. 

ಪುರುಷರ 50 ಮೀ. ಬಟರ್‌ಫ್ಲೈ ನಲ್ಲಿ ರೋಹಿತ್ ಬಿ.ಬೆನೆಡಿಕ್ಟನ್ ಅವರು ಬೆಳ್ಳಿ ಗೆದ್ದುಕೊಂಡರು. ಇದರೊಂದಿಗೆ ಭಾರತ ಈ ಕೂಟದಲ್ಲಿ 9 ಪದಕಗಳನ್ನು ಗೆದ್ದಂತಾಗಿದೆ.

ಐದನೇ ಲೇನ್‌ನಲ್ಲಿದ್ದ ಶ್ರೀಹರಿ, ಜಾಣ್ಮೆಯಿಂದ ವೇಗ ಹೆಚ್ಚಿಸಿದರು. 50 ಮೀ. ಕಳೆಯುವಷ್ಟರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಕೊನೆಯ 50 ಮೀ. ನಲ್ಲೂ ಅವರು ಅದೇ ಲಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚೀನಾದ ವಾಂಗ್‌ ಹಾವೊಯು (49.19 ಸೆ.) ಮತ್ತು ಕತಾರ್‌ನ ಅಲಿ ತಮೆರ್‌ ಹಸನ್‌ (49.46 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಶ್ರೀಹರಿ 49.96 ಸೆ.ಗಳಲ್ಲಿ ಸ್ಪರ್ಧೆ ಪೂರೈಸಿದರು. ಅವರು ಸ್ವದೇಶದ ಆಕಾಶ್‌ ಮಣಿ (50.45 ಸೆ.) ಪೈಪೋಟಿ ಮೀರಿ ನಿಂತರು. ಆಕಾಶ್‌ ನಾಲ್ಕನೇ ಸ್ಥಾನ ಪಡೆದರು.

‘ಈ ಋತುವಿನಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ತರಬೇತಿಯೂ ಚೆನ್ನಾಗಿ ನಡೆದಿದೆ. ಹೀಟ್ಸ್‌ನಲ್ಲಿ ನಾನೇ ವೇಗವಾಗಿ ಈಜಿದ್ದೆ. ಆದರೆ ಪದಕ ಗೆದ್ದ ಇತರ ಇಬ್ಬರೂ ಅಮೋಘವಾಗಿ ಈಜಿದರು. ಪೋಡಿಯಂ ಏರಲು ಸಾಧ್ಯವಾಗಿದ್ದರಿಂದ ಸಂತಸವಾಗಿದೆ’ ಎಂದು 24 ವರ್ಷ ವಯಸ್ಸಿನ ಶ್ರೀಹರಿ ಫೈನಲ್ ನಂತರ ಪ್ರತಿಕ್ರಿಯಿಸಿದರು.

50 ಮೀ. ಬಟರ್‌ಫ್ಲೈನಲ್ಲಿ ರೋಹಿತ್ ಉತ್ತಮ ಆರಂಭ ಪಡೆದು, 23.89 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ಕಜಾಕಸ್ತಾನದ ಅದಿಲ್ಬೆಕ್‌ ಮುಸ್ಸಿನ್ 23.74 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆಲ್ಲುವಲ್ಲಿ ಯಶಸ್ವಿ ಆದರು.

ಕರ್ನಾಟಕದವರಾದ ಧಿನಿಧಿ ದೇಸಿಂಗು ಮತ್ತು ಎಸ್‌.ರುತುಜಾ ಅವರು ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನ ಗಳಿಸಿದರು.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಸುಮಿತ್‌ಗೆ ಹ್ಯಾಟ್ರಿಕ್ ಚಿನ್ನ

ಭಾರತದ ಪ್ಯಾರಾ ಜಾವೆಲಿನ್ ಪಟು ಸುಮಿತ್ ಅಂಟಿಲ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರನೇ ಬಾರಿ ಪುರುಷರ ಎಫ್‌64 ವಿಭಾಗದಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಪೂರೈಸಿದರು.

ಮಂಗಳವಾರ ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ ಸುಮಿತ್ ಅವರು ತಮ್ಮ ಐದನೇ ಯತ್ನದಲ್ಲಿ 71.37 ಮೀ. ದೂರ ಎಸೆದಿದ್ದು ಅವರ ಉತ್ತಮ ಥ್ರೊ ಎನಿಸಿತು. 27 ವರ್ಷ ವಯಸ್ಸಿನ ಸುಮಿತ್ ಈ ಹಿಂದೆ 2023 ಮತ್ತು 2024ರ ಆವೃತ್ತಿಗಳಲ್ಲೂ ಚಾಂಪಿಯನ್ ಆಗಿದ್ದರು.

ಇಂದಿನ ಸಾಧನೆ ಅವರ ವೈಯಕ್ತಿಕ ಶ್ರೇಷ್ಠವೂ ಆಗಿದೆ. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಅವರು 70.83 ಮೀ. ದೂರ ಎಸೆದಿದ್ದು ಇದುವರೆಗಿನ ಅತ್ಯುತ್ತಮ ಎನಿಸಿತ್ತು.

ಪ್ಯಾರಾಲಿಂಪಿಕ್ಸ್‌ನಲ್ಲೂ ಅವರು ಎರಡು ಬಾರಿಯ (2021ರ ಟೋಕಿಯೊ ಮತ್ತು 2024ರ ಪ್ಯಾರಿಸ್‌) ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಲಿ ಪ್ಯಾರಾ ಏಷ್ಯನ್ ಗೇಮ್ಸ್‌ ಚಾಂಪಿಯನ್ ಕೂಡ ಆಗಿದ್ದಾರೆ.

ಬಿಹಾರದಲ್ಲಿ 7.42 ಕೋಟಿ ಮತದಾರರು

ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ. 

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.

ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.  

ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ. 

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.

ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.  

ಗಾಜಾ: ಸಂಘರ್ಷ ಅಂತ್ಯಕ್ಕೆ 20 ಅಂಶ

ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಸಂಬಂಧ ರೂಪಿಸಿರುವ ಶಾಂತಿ ಒಪ್ಪಂದಕ್ಕೆ ಒಪ್ಪಿಗೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಹಮಾಸ್‌ ಒಪ್ಪಿಕೊಂಡಿ ದೆಯೇ ಎಂಬುದು ದೃಢಪಟ್ಟಿಲ್ಲ.

ಪ್ಯಾಲೆಸ್ಟೀನ್‌ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌– ಹಮಾಸ್‌ ನಡುವಿನ ಸಂಘರ್ಷ ಕೊನೆಗೊಳಿಸುವುದಕ್ಕಾಗಿ 20 ಅಂಶಗಳ ಯೋಜನೆಯನ್ನು ಟ್ರಂಪ್‌ ಮಂಡಿಸಿದ್ದಾರೆ. ಇದರ ಅನ್ವಯ, ಯುದ್ಧದಿಂದ ಜರ್ಜರಿತರಾಗಿರುವ ಪ್ಯಾಲೆಸ್ಟೀನ್‌ನ ಪ್ರದೇಶಕ್ಕೆ ತಾತ್ಕಾಲಿಕ ಆಡಳಿತ ಮಂಡಳಿ ಸ್ಥಾಪಿಸಿ, ಇದರ ನೇತೃತ್ವವನ್ನು ಡೊನಾಲ್ಡ್‌ ಟ್ರಂಪ್‌ ಅವರೇ ವಹಿಸಿ ಕೊಳ್ಳಲಿದ್ದಾರೆ. ಈ ಮಂಡಳಿಯಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಕೂಡ ಇರಲಿದ್ದಾರೆ.

‘ಎರಡು ಕಡೆಯವರೂ ಒಪ್ಪಿಗೆ ಸೂಚಿಸಿದರೆ, ಯುದ್ಧಪೀಡಿತ ಗಾಜಾ ದಿಂದ ಯಾವ ನಾಗರಿಕರೂ ಬಿಟ್ಟು ತೆರಳಬೇಕಿಲ್ಲ. ಹಮಾಸ್‌ ವಶದಲ್ಲಿರುವ ಬಾಕಿ ಉಳಿದ ಒತ್ತೆಯಾಳುಗಳನ್ನು 72 ಗಂಟೆಗಳ ಒಳಗಾಗಿ ಬಿಡುಗಡೆಗೊಳಿಸಬೇಕು ಎಂಬ ಪ್ರಸ್ತಾವವೂ ಒಳಗೊಂಡಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು

ಹಮಾಸ್‌ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ. 

‘ನೆತನ್ಯಾಹು ಅವರು ಶ್ವೇತಭವನದಿಂದ ದೂರವಾಣಿ ಕರೆ ಮಾಡಿ ಕತಾರ್‌ ಪ್ರಧಾನಿ ಶೇಕ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರಹಮಾನ್‌ ಅಲ್‌ ಥಾನಿ ಅವರ ಕ್ಷಮೆಯಾಚಿಸಿದರು. ದಾಳಿಯಲ್ಲಿ ಕತಾರ್‌ನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ದಾಳಿ ನಡೆಸುವುದಿಲ್ಲ ಎಂದು ಮಾತುಕೊಟ್ಟರು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗ ಮುಂದಿಟ್ಟಿರುವ ಶಾಂತಿ ಒಪ್ಪಂದಕ್ಕೆ 3–4 ದಿನಗಳಲ್ಲಿ ಹಮಾಸ್‌ ಒಪ್ಪಿಗೆ ಸೂಚಿಸದಿದ್ದರೆ, ಹಮಾಸ್‌ ಬಂಡುಕೋರ ಸಂಘಟನೆಯನ್ನು ಮಣಿಸಲು ಇಸ್ರೇಲ್‌ಗೆ ಅಮೆರಿಕವು ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ವಿಸ್ತೃತ ಯೋಜನೆಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಟ್ರಂಪ್, ‘ಶಾಂತಿ ಸ್ಥಾಪನೆ ಕುರಿತ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಇದಕ್ಕೆ ಹಮಾಸ್‌ ಒಪ್ಪಿಗೆ ಸಿಗಬೇಕು’ ಎಂದು ತಿಳಿಸಿದರು.

‘ಪ್ಯಾಲೆಸ್ಟೀನಿಯನ್ನರು ತಮ್ಮ ಹಣೆಬರಹ ನಿರ್ಧರಿಸಿಕೊಳ್ಳಲು ಇದನ್ನು ಒಪ್ಪಬೇಕು’ ಎಂದರು.

‘ಒಂದೊಮ್ಮೆ ಹಮಾಸ್‌ ಪ್ರಸ್ತಾವ ತಿರಸ್ಕರಿಸಿದರೆ ಅಥವಾ ಒಪ್ಪಿಗೆ ಸೂಚಿಸಿದರೆ, ಇಸ್ರೇಲ್‌ ತನ್ನ ಕೆಲಸವನ್ನು ಪೂರ್ಣಗೊಳಿಸಲಿದೆ. ಅದು ಸುಲಭದ ಮಾರ್ಗವೇ ಇರಬಹುದು ಅಥವಾ ಕಷ್ಟದ ಮಾರ್ಗವೇ ಇರಬಹುದು. ಅದನ್ನು ನಾವು ಮುಗಿಸುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದರು.

ಮುಂದೇನು?: ಕತಾರ್‌ನ ಪ್ರಧಾನಿ ಹಾಗೂ ಈಜಿಪ್ಟ್‌ನ ಗುಪ್ತಚರ ವಿಭಾಗದ ಮುಖ್ಯಸ್ಥರು, ಟ್ರಂಪ್‌ ಇಟ್ಟಿರುವ ಪ್ರಸ್ತಾವ ವನ್ನು ಹಮಾಸ್‌ ಸಂಧಾನಕಾರರಿಗೆ ತಿಳಿಸಲಿದ್ದಾರೆ. ಗಾಜಾದ ಆಡಳಿತ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಸ್ತಾವಕ್ಕೆ ಹಮಾಸ್‌ ಈ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು. ಆದರೆ, ನಿಶ್ಶಸ್ತ್ರೀಕರಣಗೊಳಿಸಬೇಕು ಎಂಬ ನೆತನ್ಯಾಹು ಬೇಡಿಕೆಗೆ ಒಪ್ಪಿಗೆ ಸೂಚಿಸಿಲ್ಲ.  

‘ಚರ್ಚಿಸಿ ನಿರ್ಧಾರ’: ‘ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಪ್ರತಿ ಕ್ರಿಯಿಸುವ ಮೊದಲು, ಚರ್ಚಿಸಲಾಗು ವುದು’ ಎಂದು ಹಮಾಸ್ ಹೇಳಿದೆ.

ವರವಾದೀತೆ ನ್ಯಾನೋ ಗೊಬ್ಬರ?

ಈಗ ನಾನಾರೂಪದಲ್ಲಿ ನ್ಯಾನೋ ತಂತ್ರಜ್ಞಾನ ಬೆಳೆಯುತ್ತಲೇ ಇದೆ. ನ್ಯಾನೋ ತಂತ್ರಜ್ಞಾನವೆಂದರೆ 1ರಿಂದ 100 ನ್ಯಾನೋ ಮೀಟರ್‌ಗಳ ವ್ಯಾಪ್ತಿಯಲ್ಲಿಯ ವಸ್ತುಗಳನ್ನು ಕುರಿತಾದ ವಿಜ್ಞಾನ. ಒಂದು ನ್ಯಾನೋ ಮೀಟರ್ (0.000000001 ಮೀಟರ್), ಎಂದರೆ ಅದರ ದಪ್ಪವು ನಮ್ಮ ಕೂದಲೆಳೆಗಿಂತ ಸರಿಸುಮಾರು ಒಂದು ಲಕ್ಷ ಪಟ್ಟು ಕಡಿಮೆ! ಒಂದು ಕಾಲದಲ್ಲಿ ಕೇವಲ ಇದೊಂದು ‘ಸಾಧ್ಯತೆ’ ಎನಿಸಿಕೊಂಡಿದ್ದ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ತಂತ್ರಜ್ಞಾನ. ನ್ಯಾನೋ ತಂತ್ರಜ್ಞಾನ ಮೊದಮೊದಲು ಸೂಕ್ಷ್ಮದರ್ಶಕ ತಂತ್ರಜ್ಞಾನ ಹಾಗೂ ವಸ್ತುವಿಜ್ಞಾನದ ಕ್ಷೇತ್ರವನ್ನು ಪ್ರವೇಶಿಸಿತು. ಇಂದು ಔಷಧತಯಾರಿಕೆ, ಆರೋಗ್ಯ, ಪರಿಸರ ಮಾಲಿನ್ಯ ನಿರ್ವಹಣೆ, ಸೌರಫಲಕಗಳ ತಯಾರಿಕೆ, ಚಿಪ್‌ಗಳ ವಿನ್ಯಾಸ, ನ್ಯಾನೋ ರೋಬೋಟ್‌ – ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ನ್ಯಾನೋ ಟೆಕ್ನಾಲಜಿ ಇಂದು ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ. ಕಳೆದ ಕಾಲು ಶತಮಾನಗಳಿಂದ ನ್ಯಾನೋ ತಂತ್ರಜ್ಞಾನವನ್ನು ಕೃಷಿಯ ಕ್ಷೇತ್ರ ದಲ್ಲಿಯೂ ಪ್ರಯೋಗ ಮಾಡಲಾಗುತ್ತಿದೆ. ಆ ಅವಿರತ ಪರಿಶ್ರಮದ ಫಲವೇ ನ್ಯಾನೋ ಗೊಬ್ಬರ. 

ಗೊಬ್ಬರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಪರಿ ಣಾಮಕಾರಿಯಾಗಿಸಲು ಗೊಬ್ಬರವನ್ನು ನ್ಯಾನೋ ಗಾತ್ರಕ್ಕೆ ತರಲಾಗುವುದು. ಅದೇ ‘ನ್ಯಾನೋ ಗೊಬ್ಬರ’. ಸಾಮಾನ್ಯ ಗೊಬ್ಬರದ ಹಾಗೆ ಮಣ್ಣಿನಲ್ಲಿ ಬೆರೆಸುವುದರ ಬದಲಾಗಿ ಇದನ್ನು ನೇರವಾಗಿ ಕಾಂಡಕ್ಕೆ ಹಾಗೂ ಎಲೆಗಳಿಗೆ ಸಿಂಪಡಿಸಲಾಗು ತ್ತದೆ. ಇದು ಸಾಂಪ್ರದಾಯಿಕ ಗೊಬ್ಬರಕ್ಕಿಂತ ಸೋವಿ, ಬಳಕೆಯ ಅವಶ್ಯಕತೆಯ ಪ್ರಮಾಣವೂ ಕಡಿಮೆ, ನಿರ್ವಹಣೆಯೂ ಸುಲಭ, ಅತ್ಯಂತ ಪರಿಣಾಮಕಾರಿ; ಅಷ್ಟೇ ಇಳುವರಿ, ಹಾಗೂ ಸುಲಭವಾಗಿ ಇದನ್ನು ಸಂಗ್ರಹಿಸಿಡಬಹುದು. ಕೃಷಿಯಲ್ಲಿ ಸುಸ್ಥಿರತೆಗಾಗಿ ಇದೊಂದು ಅತ್ಯಂತ ಮಹತ್ವದ ಪರಿಹಾರವಾಗಿದೆ. ನ್ಯಾನೋ ಗೊಬ್ಬರದಲ್ಲಿ ನಾಲ್ಕು ಬಗೆಗಳುಂಟು: ನ್ಯಾನೋ ಯೂರಿಯಾ ಅಥವಾ ನ್ಯಾನೋ ಸಾರಜನಕ, ನ್ಯಾನೋ ಫಾಸ್ಪರಸ್, ನ್ಯಾನೋ ಪೊಟ್ಯಾಸಿಯಮ್, ಹಾಗೂ ನ್ಯಾನೋ ಸೂಕ್ಷ್ಮ ಪೋಷಕಾಂಶಗಳು. ಈಗ ನ್ಯಾನೋ ಗೊಬ್ಬರದ ಕೆಲವು ಲಕ್ಷಣಗಳನ್ನು ನೋಡೋಣ.

ನ್ಯಾನೋ ಗಾತ್ರ: ಈ ಗೊಬ್ಬರದ ಪ್ರಧಾನ ಲಕ್ಷಣವೇ ಅದರ ಸೂಕ್ಷ್ಮ ಗಾತ್ರ. ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಅದರ ಬಳಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಬಳಸಿದ ಎಲ್ಲಾ ಗೊಬ್ಬರವೂ ಬೆಳೆಗಳಿಗೆ ಉಪಯೋಗವಾಗುವುದಿಲ್ಲ; ಪೋಷಕಾಂಶದ ಸೋರಿಕೆಯಾಗುತ್ತದೆ, ಗೊಬ್ಬರವು ನೀರಿನಲ್ಲಿ ಸೇರಿ ಹರಿದು ಹೋಗುತ್ತದೆ, ಇಲ್ಲವೇ ಮಣ್ಣಿನಲ್ಲೇ ಉಳಿದುಬಿಡುತ್ತದೆ. ಅಚ್ಚರಿಯ ವಿಷಯವೆಂದರೆ, ಗೊಬ್ಬರದಲ್ಲಿನ‌ ಶೇ 50-70ರಷ್ಟು ಪೋಷಕಾಂಶವು ಬೆಳೆಗಳಿಗೆ ಸಿಗುವುದೇ ಇಲ್ಲ. ಇದಕ್ಕೆ ರಾಮಬಾಣವೇ ನ್ಯಾನೋ ಗೊಬ್ಬರ. ಇದರ ಗಾತ್ರ ಅತಿ ಚಿಕ್ಕದು; ಅದನ್ನು ಪೋಷಕಾಂಶಗಳ ಸಮೇತ ಕ್ಯಾಪ್ಸೂಲ್‌ನಲ್ಲಿ ತುಂಬಿ ಸಲಾಗುತ್ತದೆ. ದ್ರವದ ರೂಪದಲ್ಲಿ ನೇರವಾಗಿ ಕಾಂಡಗಳು, ಎಲೆಗಳು, ಕೆಲವೊಮ್ಮೆ ಬೇರುಗಳೂ ಹೀರಿಕೊಳ್ಳುವಂತೆ ಸಿಂಪಡಿ ಸಲಾಗುತ್ತದೆ.

ಪೋಷಕಾಂಶಗಳ ಬಿಡುಗಡೆ ನಿಧಾನ: ನ್ಯಾನೋ ಗೊಬ್ಬರವನ್ನು ಹಾಕಿದ ಮೇಲೆ ಅದರಲ್ಲಿನ ಪೋಷಕಾಂಶಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ. ಈ ವಿಶೇಷವಾದ ಲಕ್ಷಣದಿಂದಾಗಿ ಪೋಷಕಾಂಶವು ಪೋಲಾಗುವುದು ಕಡಿಮೆ ಆಗುವುದಲ್ಲದೆ, ಮತ್ತೆ ಮತ್ತೆ ಗೊಬ್ಬರದ ಸಿಂಪಡಣೆಯ ಅಗತ್ಯವೂ ಇಲ್ಲ. 

ಪರಿಣಾಮಕಾರಿ: 500 ಮಿಲಿಲೀಟರ್ ನ್ಯಾನೋ ಯೂರಿಯಾವು 45 ಕೆಜಿಗಳಷ್ಟು ಸಾಂಪ್ರದಾಯಿಕ ರಾಸಾಯನಿಕ ಯೂರಿಯಾ ಗೊಬ್ಬರಕ್ಕೆ ಸಮ! ನ್ಯಾನೋ ಗೊಬ್ಬರವು ಒಳ್ಳೆಯ ಇಳುವರಿಯನ್ನು ನೀಡುವುದಲ್ಲದೆ ಕಿಸೆಗೂ ಹಗುರ.

ಪರಿಸರಸ್ನೇಹಿ: ನ್ಯಾನೋ ಗೊಬ್ಬರವು ಪರಿಸರಸ್ನೇಹಿ. ಮೊದಲನೆಯದಾಗಿ ಅನಗತ್ಯ ರಾಸಾಯನಿಕ ಸೋರಿಕೆಯು ತಪ್ಪಿ ಜಲಮಾಲಿನ್ಯವು ಕಡಿಮೆಯಾಗುತ್ತದೆ. ಎರಡನೆಯದಾಗಿ ಗೊಬ್ಬರದ ತಯಾರಿಕೆಯಲ್ಲಿ ಗಣನೀಯವಾದ ಇಳಿಕೆಯಾಗಿ ಅದರಿಂದ ಆಗುತ್ತಿರುವ ಹಸಿರುಮನೆ ಅನಿಲಗಳ ಹೊರ ಸೂಸುವಿಕೆಯಲ್ಲಿ ಕೂಡ ಇಳಿಕೆಯನ್ನು ಕಾಣಬಹುದು. v

ಭಾರತದ ಪಾತ್ರ 

1960ರ ನಂತರದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಿ, ಮಣ್ಣನ್ನು ದುರ್ಬಲಗೊಳಿಸಿದೆ. ಆದರೆ ಈಗ ಭಾರತದ ಕೆಲವು ಸಹಕಾರಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು (ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ-ಓಪರೇಟಿವ್ ಲಿಮಿಟೆಡ್ (IFFCO), ನ್ಯಾಷನಲ್‌ ಫರ್ಟಿಲೈಸರ್ಸ್ ಲಿಮಿಟೆಡ್ (NFL), ಟಾಟಾ ಕೆಮಿಕಲ್ಸ್, ರಾಷ್ಟ್ರೀಯ ಕೆಮಿಕಲ್ಸ್ ಫರ್ಟಿಲೈಸರ್ಸ್ (RCF), ಮುಂತಾದವು) ಅಭಿವೃದ್ಧಿಪಡಿಸಿರುವ ನ್ಯಾನೋ ಗೊಬ್ಬರಗಳು ಕೃಷಿಯಲ್ಲಿ ಹೊಸ ಯುಗವನ್ನು ಶುರುಮಾಡಿವೆ. ಭಾರತವು ಜಗತ್ತಿಗೆ ಸುಸ್ಥಿರ ಸಮಾಜದ ಮಾದರಿಯೊಂದನ್ನು ನ್ಯಾನೋ ಗೊಬ್ಬರದ ತಂತ್ರಜ್ಞಾನ ಮೂಲಕ ಒದಗಿಸುವಂತಿದೆ. ಚೀನಾ ಹಾಗೂ ಭಾರತವನ್ನು ಹೊರತುಪಡಿಸಿ ಇದರ‌ ಮೇಲೆ ಹೆಚ್ಚು ಸಂಶೋಧನೆಯು ಮತ್ತೆಲ್ಲಿಯೂ ಆಗಿಲ್ಲ. ಈಗಾಗಲೇ ಭಾರತದಲ್ಲಿ ಲಕ್ಷಾಂತರ ರೈತರು ನ್ಯಾನೋ ಗೊಬ್ಬರವನ್ನು ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ IFFCOವು ಜಗತ್ತಿನಲ್ಲಿ ಅತಿ ಹೆಚ್ಚು ನ್ಯಾನೋ ಗೊಬ್ಬರವನ್ನು ತಯಾರಿಸುವ ಸಂಸ್ಥೆಯಾಗಿದ್ದು, ವರ್ಷಕ್ಕೆ 3.6 ಕೋಟಿ ನ್ಯಾನೋ ಗೊಬ್ಬರದ ಬಾಟಲಿಗಳನ್ನು ಉತ್ಪಾದಿಸಿದೆ. ‘ದಿ ಎನರ್ಜಿ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್’(ಟೆರಿ)ಯ ವರದಿಯ ಪ್ರಕಾರ ಭಾರತದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯು ಮುಂದಿನ ದಿನಗಳಲ್ಲಿ ಸುಮಾರು ಶೇ 50ರಷ್ಟು ಕಡಿಮೆ ಆಗಲಿದೆಯಂತೆ. ಇದು ನಮ್ಮ ನೆಲ, ಜಲ ಹಾಗೂ ಜನರ ಸ್ವಾಸ್ಥ್ಯಕ್ಕೆ ಒಳ್ಳೆಯದಾಗಲಿದೆ. ಕಾಲಕ್ರಮೇಣ ಬಳಕೆ ಹಾಗೂ ಇದರ ಕುರಿತಾದ ಸಂಶೋಧನೆಗಳು ಹೆಚ್ಚಿದಂತೆ ನ್ಯಾನೋ ಗೊಬ್ಬರದ ಬಳಕೆಯ ಬಗೆಗೆ ಇರುವ ಸಂಶಯಗಳೂ ಕಡಿಮೆಯಾಗಲಿವೆ.

Mysore Silk (Saree) Production?

ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ

‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಹೆಸರಿನ ಗಾಂಧೀಜಿಯವರ ಆತ್ಮಕಥನವು ಪ್ರಕಟಗೊಂಡು 2025ಕ್ಕೆ ನೂರು ವರ್ಷಗಳಾಗಿವೆ. ಈ ಆತ್ಮಕಥನವನ್ನು ಮಹಾದೇವ ದೇಸಾಯಿಯವರು ಗುಜರಾತಿನಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಆಂಗ್ಲ ಅನುವಾದವನ್ನು ಕನ್ನಡಕ್ಕೆ ತಂದ ಪ್ರಸಿದ್ಧ ಸಾಹಿತಿ, ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನದ ವರ್ಷದಲ್ಲೇ ಗಾಂಧಿ ಆತ್ಮಕಥನಕ್ಕೂ ‘ಜನ್ಮ’ ಶತಮಾನದ ವರ್ಷವಾಗಿರುವುದು ಒಂದು ವಿಶೇಷ. ಗೊರೂರರ ಅನುವಾದವು ಗಾಂಧೀಜಿಯವರ ‘ಅಂತರಂಗದ ಮಾತುಗಳಿಗೆ’ ಕನ್ನಡಿಯಾದದ್ದು ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.

ಗಾಂಧೀಜಿಯವರ ಆತ್ಮಕಥನವನ್ನು ‘ಅಂತರಂಗದ ಮಾತುಗಳು’ ಎಂದು ನಾನು ಕರೆಯಲು ಕಾರಣವಿದೆ. ಗಾಂಧೀಜಿಯವರು ತಮ್ಮ ಆತ್ಮಕಥನ ಕುರಿತಂತೆ ಹೇಳಿರುವ ಮಾತುಗಳನ್ನು ಗಮನಿಸಿ: ‘ನಾನು ಆಳವಾದ ಅಂತರಂಗ ವೀಕ್ಷಣೆಗೆ ಒಳಗಾಗಿದ್ದೇನೆ. ನನ್ನನ್ನು ನಾನೇ ಆಮೂಲಾಗ್ರವಾಗಿ ಶೋಧಿಸಿಕೊಂಡಿದ್ದೇನೆ ಮತ್ತು ಮಾನಸಿಕ ಸಂದರ್ಭಗಳನ್ನು ಪರೀಕ್ಷಿಸಿ, ವಿಶ್ಲೇಷಿಸಿಕೊಂಡಿದ್ದೇನೆ. ಆದರೂ, ನನ್ನ ನಿರ್ಧಾರಗಳನ್ನು ಅವೇ ಅಂತಿಮ ಅಥವಾ ದೋಷಾತೀತವೆಂದು ಹೇಳುವುದರಿಂದ ಬಹಳ ದೂರವೇ ಉಳಿದಿದ್ದೇನೆ’. ಗಾಂಧೀಜಿಯವರ ಈ ಮಾತುಗಳು ಅವರ ಸತ್ಯನಿಷ್ಠೆ, ಪ್ರಾಮಾಣಿಕತೆಗೆ ಸಾಕ್ಷಿಯಾಗಿರುವುದಲ್ಲದೆ, ಆತ್ಮಕಥನವನ್ನು ಆತ್ಮಾವಲೋಕನ ಕಥನವೆಂದು ಭಾವಿಸಿರುವುದನ್ನು ಸ್ಪಷ್ಟಪಡಿಸುತ್ತವೆ. ನಿಜ; ಯಾರದೇ ಆತ್ಮಕಥನವು ಆತ್ಮಾವಲೋಕನದ ಆಯಾಮವನ್ನು ಪಡೆಯದೆ ಇದ್ದರೆ ಆತ್ಮರತಿಯಾಗುವ ಅಪಾಯ ಇದ್ದೇ ಇರುತ್ತದೆ. ಆತ್ಮರತಿಗೆ ಅಹಂಕಾರದ ಸ್ಪರ್ಶವೂ ಅಗೋಚರವಾಗಿ ಕೆಲಸ ಮಾಡುತ್ತದೆ. ಆತ್ಮಕಥನಗಳು ಆಂತರಂಗಿಕ ಶೋಧವೂ, ಪರೀಕ್ಷೆಗೊಡ್ಡಿಕೊಂಡ ಪರಿಶೀಲನೆಯೂ ಆದಾಗ ಸತ್ಯಕಥನಗಳಾಗುತ್ತವೆ. ಹಾಗೆಂದು ಆತ್ಮಕಥನಕಾರರು ತಮ್ಮ ಬದುಕಿನ ಸಮಸ್ತಸತ್ಯಗಳನ್ನು ದಾಖಲಿಸಿರುತ್ತಾರೆಂದು ಭಾವಿಸಲಾಗದು. ಅನುಭವಗಳ ಆಯ್ಕೆಯೂ ಆತ್ಮಕಥನಗಳ ಅಂಗವಾಗಿರುತ್ತದೆ. ಈ ಇತಿಮಿತಿಗಳ ನಡುವೆ ವಾಸ್ತವಿಕತೆ ಮತ್ತು ಪ್ರಾಮಾಣಿಕತೆಯುಳ್ಳ ಆತ್ಮಕಥನಗಳು ಮೌಲ್ಯಯುತವಾಗುತ್ತವೆ. ಗಾಂಧೀಜಿ ಆತ್ಮಕಥನಕ್ಕೆ ಇಂತಹ ಮೌಲ್ಯ ತಾನಾಗಿಯೇ ಲಭ್ಯವಾಗಿದೆ. ಯಾಕೆಂದರೆ, ಅವರು ತಮ್ಮ ಅನುಭವಗಳನ್ನು ತಮಗೆ ತಾವೇ ಹೇಳಿಕೊಂಡಂತೆ ಬರೆಯುತ್ತಾರೆ. ಓದುಗರಿಗೆ ಬೋಧೆ ಮಾಡುತ್ತೇನೆ ಎಂಬ ಹಮ್ಮುಬಿಮ್ಮುಗಳಿಲ್ಲದೆ ನಿವೇದಿಸುತ್ತಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ– ಗಾಂಧಿ ಆತ್ಮಕಥನದ ಅವಧಿ 56 ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು 1869ರ ಅಕ್ಟೋಬರ್ 2ರಂದು. ಆತ್ಮಕಥನ ಹೊರಬಂದದ್ದು 1925ರ ನವೆಂಬರ್ ತಿಂಗಳಲ್ಲಿ. ಆನಂತರ 23 ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ 23 ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮ ದೊರಕಿದ್ದು, ಇದೇ ಅವಧಿಯಲ್ಲಿ.

ಗಾಂಧೀಜಿಯವರು 1919ರಲ್ಲಿ ಅಂತರ್ಜಾತಿ ವಿವಾಹ ಮತ್ತು ಅಂತರ್ಜಾತಿ ಭೋಜನ ವ್ಯವಸ್ಥೆಯನ್ನು ಒಪ್ಪಿರಲಿಲ್ಲ. ಈ ಭಾವನೆಯು 1936ರಲ್ಲಿ ಖಚಿತತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಕಟಗೊಂಡಿತು. ಒಬ್ಬ ಪತ್ರಿಕಾ ವರದಿಗಾರನಿಗೆ ಕೊಟ್ಟ ಸಂದರ್ಶನದಲ್ಲಿ ಗಾಂಧೀಜಿ ಹೀಗೆ ಹೇಳಿದ್ದಾರೆ: ‘ತನ್ನ ಎಲ್ಲಾ ಭಯಾನಕತೆಗಳಿಂದ ನಮಗೆ ಇವತ್ತು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂವೆಂದು ಕರೆದುಕೊಂಡು ಅದರಲ್ಲಿ ಉಳಿದುಕೊಳ್ಳಲಾರೆ. ಕಾರಣ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ವಿವಾಹಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಅಂಬೇಡ್ಕರ್ ಅವರು ಮೊದಲಿಂದಲೂ ಅಂತರ್ಜಾತಿ ವಿವಾಹದ ಪ್ರತಿಪಾದಕರಾಗಿದ್ದರು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಗಾಂಧೀಜಿಯವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರವುಳ್ಳವರಾಗಿದ್ದರು ಎನ್ನುವುದಕ್ಕೆ ಒಂದು ನಿದರ್ಶನವನ್ನು ನೀಡಬಹುದು. ಜಗತ್ತಿನಲ್ಲೇ ಮೊದಲ ಅಧಿಕೃತ ನಾಸ್ತಿಕ ಕೇಂದ್ರವನ್ನು ಆಂಧ್ರದಲ್ಲಿ ಸ್ಥಾಪಿಸಿದ್ದ ಗೋರಾ ಅವರ ಅಳಿಯ ಗಾಂಧೀಜಿಯವರ ಶಿಷ್ಯತ್ವವನ್ನು ಬಯಸಿದಾಗ, ‘ನೀನು ಅಂಬೇಡ್ಕರ್ ಅವರಂತೆ ಆಗಬೇಕು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆಯನ್ನು ತೆತ್ತಾದರೂ ಸರಿಯೇ, ಅಸ್ಪೃಶ್ಯತೆಯು ಹೋಗಲೇಬೇಕು’ (1946) ಎಂದು ಗಾಂಧೀಜಿ ಬರೆದು ತಿಳಿಸಿದರು. 1946ರಲ್ಲಿ ಗಾಂಧೀಜಿ ‘ವರ್ಗರಹಿತ, ಜಾತಿರಹಿತ ಇಂಡಿಯಾ ನಿರ್ಮಾಣದ ಅಗತ್ಯ’ವನ್ನು ಅಮೆರಿಕದ ಸಂದರ್ಶಕರೊಂದಿಗೆ ಹಂಚಿಕೊಂಡಿದ್ದರು. ಜಾತಿಯು ಬೇರುಸಹಿತ ಹೋಗಬೇಕು ಎಂದು ಆಶಿಸಿದ್ದರು. ‘ನನ್ನ ಮನಸ್ಸು ಸತತವಾಗಿ ಬೆಳೆಯುತ್ತಿದೆ’ ಎಂದೂ ಹೇಳಿದ್ದರು. ಆದರೆ ಇವರ ಬೆಳವಣಿಗೆ ಮತ್ತು ಬದಲಾವಣೆಯನ್ನು ಗಮನಿಸದ, ಗುರುತಿಸದ, ಟೀಕಾಕಾರರಿಗೆ ಆಹಾರವೂ ಆದರು.

1925ರವರೆಗಿನ ಗಾಂಧೀಜಿಯವರ ಆತ್ಮಕಥನ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ: ‘ನಾನು ಕಟ್ಟಿಕೊಡುತ್ತಿರುವ ಕಥನಗಳು, ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.

ಗಾಂಧೀಜಿಯವರಿಗೆ ಧರ್ಮವೆನ್ನುವುದು ನೈತಿಕವೇ ಹೊರತು ಸಾಂಸ್ಥಿಕ ಸ್ವರೂಪದ ನಿಯಂತ್ರಕವಲ್ಲ. ಆದ್ದರಿಂದಲೇ ಅವರು ಹಿಂದೂ ಧರ್ಮವನ್ನು ನಂಬಿ ನಡೆಯುತ್ತಲೇ ಅದರ ಒಳವಿಮರ್ಶಕರಾಗಿದ್ದರು. ದ್ವೇಷವಿಲ್ಲದ ಧಾರ್ಮಿಕ ಸಾಮರಸ್ಯದ ನೈತಿಕ ಪ್ರತಿಪಾದಕರಾಗಿದ್ದರು. ನೈತಿಕತೆಯ ಮೂಲತತ್ತ್ವಗಳಿಗೆ ವಿರುದ್ಧವಾದ ಎಲ್ಲವನ್ನೂ ನಿರಾಕರಿಸುತ್ತೇನೆ ಎಂದು ಬರೆದರು. ವೇದ, ಉಪನಿಷತ್ತು ಮುಂತಾದವುಗಳಲ್ಲಿ ನಂಬಿಕೆಯಿದ್ದರೂ ‘ಮಂತ್ರ ಪಠಣದಿಂದ ಧರ್ಮ ನಿರ್ಧಾರ ಆಗುವುದಿಲ್ಲ’ ಎಂದರು. ಯಾಕೆಂದರೆ, ನೈತಿಕತೆ ಮತ್ತು ಪ್ರಾಮಾಣಿಕತೆಗಳೇ ಅವರ ಬದುಕಿನ ಸತ್ಯಶೋಧದ ಸಾಧನವಾಗಿದ್ದವು.

ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ ‘ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.

ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ–ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ.

ಗಾಂಧಿ ಆತ್ಮಕಥನದ ಒಂದು ಮುಖ್ಯ ಘಟನೆ ಯೆಂದರೆ – ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ ಒಡನಾಡುವ ಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಕಥನದಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ– ಇಂತಹ ಅನೇಕ ಆತ್ಮಾವಲೋಕನ ಮತ್ತು ಮಂಥನಗಳಿಂದ ಗಾಂಧಿ ಆತ್ಮಕಥನವು ವೈರುಧ್ಯ ಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ.

ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆ ಉಡುಪಿಗೆ ಅಪವರ್ಗೀಕರಣಗೊಂಡದ್ದು ಮತ್ತು ಅರೆಬೆತ್ತಲೆ ಉಡುಪಿನ ವಲಯದಿಂದ ಬಂದ ಅಂಬೇಡ್ಕರ್ ಸೂಟುಧಾರಿಯಾದದ್ದು ಕೇವಲ ಉಡುಪಿನ ಬದಲಾವಣೆಯಲ್ಲ. ಗಾಂಧೀಜಿಯವರ ಪಾಪಪ್ರಜ್ಞೆಯ ಕೆಳಮುಖ ಚಲನೆ ಮತ್ತು ಅಂಬೇಡ್ಕರ್ ಅವರ ಜಾಗೃತ ಪ್ರಜ್ಞೆಯ ಮೇಲ್ಮುಖ ಚಲನೆಗೆ ಉಡುಪಿನ ಬದಲಾವಣೆ ಸಕಾರಾತ್ಮಕ ಚಾರಿತ್ರಿಕ ಸಂಕೇತ. ಎರಡೂ ಹೋರಾಟದ ಮಾದರಿಗಳು.

ಕೊನೆಗೊಂದು ಮಾತು: ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಾಳ ಕಥನವಿಲ್ಲದೆ ಭಾರತ ಕಥನ ಪೂರ್ಣವಾಗುವುದಿಲ್ಲ.

Tax on Movies by Trump?

ಪ್ರಚಲಿತ ವಿದ್ಯಮಾನಗಳು: 30ನೇ ಸೆಪ್ಟೆಂಬರ್ 2025

  • ಪಾರದರ್ಶಕತೆಗಾಗಿ ಏಕೀಕೃತ ಭೂಸ್ವಾಧೀನ ವ್ಯವಸ್ಥೆ ಜಾರಿ

ಸಂದರ್ಭ: ಭೂಸ್ವಾಧೀನ ಪ್ರಕ್ರಿಯೆ ಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯ ಒದಗಿಸುವುದ ಕ್ಕಾಗಿ ‘ಏಕೀಕೃತ ಭೂಸ್ವಾಧೀನ ವ್ಯವಸ್ಥೆ’ಗೆ (ಯುಎಲ್‌ಎಂಎಸ್‌) ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.

  • ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಇ–ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ಇ–ಆಸ್ತಿ ತಂತ್ರಾಂಶ, ಯುಎಲ್‌ಎಂಎಸ್‌ ಇ–ಖಾತಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಕೆಜಿಐಎಸ್‌ನಂತಹ ಎಲ್ಲಾ ತಂತ್ರಾಂಶ ಗಳನ್ನು ಒಳಗೊಂಡ ವ್ಯವಸ್ಥೆಯಾಗಿದೆ.
  • ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಈ ವ್ಯವಸ್ಥೆಯು ನೈಜ ದತ್ತಾಂಶವನ್ನು ಒದಗಿಸುತ್ತದೆ. ಅಲ್ಲದೇ, ಆರ್ಥಿಕ ಇಲಾಖೆಯ ಖಜಾನೆ–2 ತಂತ್ರಾಂಶ ದೊಂದಿಗೆ ಜೋಡಣೆ ಮಾಡಲಾಗಿದೆ. ಸಮಗ್ರ ಭೂಸ್ವಾಧೀನ ವ್ಯವಸ್ಥೆಯು ರಾಜ್ಯದಾದ್ಯಂತ ಭೂಸ್ವಾಧೀನ ಪ್ರಕ್ರಿಯೆ ಯನ್ನು ಸಮನ್ವಯಗೊಳಿಸುತ್ತದೆ. ಅಲ್ಲದೇ, ಈಗ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಮತ್ತು ಹಿಂದೆ ನಡೆಸಿದ ಭೂಸ್ವಾಧೀನ ಪ್ರಕರಣ ಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಸಮಗ್ರ ಡಿಜಿಟಲ್‌ ವೇದಿಕೆಯೂ ಇದಾಗಿದೆ’ ಎಂದರು.
  • ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಕೆಶಿಪ್‌, ಕೆ–ರೈಡ್‌, ಮೆಟ್ರೊ, ಕೆಐಎಡಿಬಿ ಮತ್ತಿತರ ಸಂಸ್ಥೆಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಇವುಗಳ ಭೂಸ್ವಾಧೀನದ ಸಂಪೂರ್ಣ ಮಾಹಿತಿಯು ಈ ವ್ಯವಸ್ಥೆಯಲ್ಲಿ ಸಿಗುತ್ತದೆ.  ಭೂಸ್ವಾಧೀನದ ಎಲ್ಲಾ ಪ್ರಸ್ತಾವಗಳು, ಅದರ ಸ್ಥಿತಿಗತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ತೆಗೆದುಕೊಳ್ಳುವ ಸಂಸ್ಥೆಗಳಿಗೆ ಕ್ರೋಡೀಕೃತ ಡ್ಯಾಶ್ ಬೋರ್ಡ್‌ ಮೂಲಕ ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
  • ಭೂಸ್ವಾಧೀನ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಐ–ತೀರ್ಪು ರಚನೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ವರೆಗಿನ ಸಂಪೂರ್ಣ ಪ್ರಕ್ರಿಯೆ ನಿರ್ವಹಿಸಲು ಈ ವ್ಯವಸ್ಥೆ ಏಕ ಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.
  • ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಅಗತ್ಯವಿರುವ ಭೂಸ್ವಾಧೀನ ಸಂಸ್ಥೆಗಳು ಹಂತ ಹಂತವಾಗಿ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತವೆ. ಈ ತಂತ್ರಾಂಶವು ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪ್ರಮಾಣೀಕೃತ ಮತ್ತು ಕಾನೂನುಬದ್ಧ ಅನುಸರಣಾ ವಿಧಾನವನ್ನು ಖಚಿತ ಪಡಿಸುತ್ತದೆ ಎಂದರು.
  • ಭಾರತದ ಮೊದಲ ಐಬಿಆರ್ಲಸಿಕೆ ಅಭಿವೃದ್ಧಿ

ಸಂದರ್ಭ: ಹೈದರಾಬಾದ್‌ನ ಲಸಿಕೆ ತಯಾರಿಕಾ ಕಂಪನಿ ‘ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌ ಲಿಮಿಟೆಡ್‌’ (ಐಐಎಲ್‌) ಸೋಂಕಿತ ಜಾನುವಾರುಗಳ ಮೂಗು ಮತ್ತು ಗಂಟಲಿನ ಉರಿಯೂತ (ಐಬಿಆರ್‌) ಕಾಯಿಲೆಗೆ ಭಾರತದ ಮೊದಲ ಲಸಿಕೆ ‘ಜೀನ್‌ ಡಿಲೀಟೆಡ್‌ ದಿವಾ’  ಅಭಿವೃದ್ಧಿಪಡಿಸಿ ರ ಬಿಡುಗಡೆ ಮಾಡಿದೆ.

  • ಈ ಲಸಿಕೆಯು ಸೋಂಕಿತ ಜಾನುವಾರುಗಳಿಂದ ಇತರ ಜಾನುವಾರುಗಳನ್ನು ರಕ್ಷಿಸುತ್ತದೆ. ಭಾರತದಲ್ಲಿ ಐಬಿಆರ್‌ ಸಾಂಕ್ರಾಮಿಕ ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ ಮತ್ತು ಜಾನುವಾರುಗಳ ಸಂತಾನೋತ್ಪತ್ತಿ ಮೇಲೆ ‍ಪರಿಣಾಮ ಬೀರುತ್ತದೆ. ಜಾನುವಾರುಗಳಲ್ಲಿ ಬಂಜೆತನ, ಕಡಿಮೆ ಹಾಲು ಉತ್ಪಾದನೆ, ಗರ್ಭಪಾತಕ್ಕೂ ಕಾರಣವಾಗುತ್ತದೆ.
  • ಭಾರತದಲ್ಲಿ ಈವರೆಗೆ ಈ ಸೋಂಕಿಗೆ ಯಾವುದೇ ಲಸಿಕೆಯಾಗಲೀ, ಚಿಕಿತ್ಸೆಯಾಗಲೀ ಲಭ್ಯವಿರಲಿಲ್ಲ. ಸದ್ಯ ಈ ಲಸಿಕೆಯ ಅಭಿವೃದ್ಧಿಯಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
  • ಶೂಟಿಂಗ್‌: ಓಜಸ್ವಿ, ಹಿಮಾಂಶುಗೆ ಚಿನ್ನ

ಸಂದರ್ಭ: ಉದಯೋನ್ಮುಖ ಶೂಟರ್‌ ಓಜಸ್ವಿ ಠಾಕೂರ್ ಅವರು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಮೂರೂ ಪದಕಗಳನ್ನು ಗೆದ್ದು ಭಾರತ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು.

  • ಕರ್ಣಿಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ 16 ವರ್ಷದ ಓಜಸ್ವಿ 252.7 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 250.2 ಅಂಕ ಗಳಿಸಿದ ಹೃದಯಶ್ರೀ ಕೊಂಡೂರ್ ಬೆಳ್ಳಿ ಗೆದ್ದರೆ, ಶಾಂಭವಿ ಕ್ಷೀರಸಾಗರ್ (229.4) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಹಿಮಾಂಶುಗೆ ಚಿನ್ನ: ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಹಿಮಾಂಶು ಚಿನ್ನಕ್ಕೆ ಗುರಿಯಿಟ್ಟರು. 633.7 ಸ್ಕೋರ್‌ನೊಂದಿಗೆ ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ ಪಡೆದಿದ್ದ ಹಿಮಾಂಶು, ಫೈನಲ್‌ನಲ್ಲಿ (250.9) ಪಾಬಲ್ಯ ಮುಂದುವರಿಸಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಡಿಮಿಟ್ರಿ ಪಿಮೆನೋವ್ (249.9) ಬೆಳ್ಳಿ ಪದಕ ಗೆದ್ದರೆ, ಅಭಿನವ್ ಶಾ (228.4) ಕಂಚು ಜಯಿಸಿದರು. ನರೇನ್ ಪ್ರಣವ್ (187.0) ಐದನೇ ಸ್ಥಾನ ಪಡೆದರು.
  • ಪುರುಷರ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಸ್ವತಂತ್ರ ತಟಸ್ಥ ಸ್ಪರ್ಧಿ ಅಲೆಕ್ಸಾಂಡರ್ ಕೊವಾಲೆವ್ ಅವರು ಭಾರತದ ಮುಕೇಶ್ ನೆಲವಲ್ಲಿ ಅವರನ್ನು ರೋಚಕ ಶೂಟ್ಆಫ್‌ನಲ್ಲಿ ಮಣಿಸಿ ಚಿನ್ನ ಗೆದ್ದರು.
  • ಈಜು: ಶ್ರೀಹರಿಗೆ ಮತ್ತೊಂದು ಪದಕ

ಸಂದರ್ಭ: ಕರ್ನಾಟಕದ ಈಜು ತಾರೆ ಶ್ರೀಹರಿ ನಟರಾಜ್‌ ಅವರು 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಅವರು, ಕರ್ನಾಟಕದವರೇ ಆದ ಅನೀಶ್‌ ಗೌಡ, ಸಜನ್‌ ಪ್ರಕಾಶ್‌ ಹಾಗೂ ಶೋನ್‌ ಗಂಗೂಲಿ ಜೊತೆಗೂಡಿ 4×200 ಮೀ. ಫ್ರೀಸ್ಟೈಲ್‌ನಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು.

  • ಅಂತಿಮ ಕ್ಷಣದಲ್ಲಿ ಶ್ರೀಹರಿ ಅವರು ತೋರಿದ ಮಿಂಚಿನ ಪ್ರದರ್ಶನದಿಂದಾಗಿ ಭಾರತ ತಂಡವು 7ನಿ., 23.38 ಸೆಕೆಂಡುಗಳಲ್ಲಿ ಗುರಿ ತಲುಪಿತು. ಮಲೇಷ್ಯಾ (7:23.43) ಕಂಚಿಗೆ ತೃಪ್ತಿಪಟ್ಟಿತು.
  • ಡೈವಿಂಗ್‌ನಲ್ಲಿ ಚಾರಿತ್ರಿಕ ಕಂಚು: ಮಣಿಪುರದ ಸಾಯಿರಾಮ್ ಮತ್ತು ವಿಲ್ಸನ್‌ ಸಿಂಗ್‌ ನಿಂಗ್‌ತೌಜಮ್ ಅವರು ಪುರುಷರ 10 ಮೀಟರ್ ‘ಸಿಂಕ್ರೊನೈಸ್ ಡೈವಿಂಗ್‌’ನಲ್ಲಿ ಚಾರಿತ್ರಿಕ ಕಂಚಿನ ಪದಕ ಗೆದ್ದರು.
  • ಡೈವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಇದೇ ಮೊದಲ ಬಾರಿಗೆ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟಕ್ಕೂ ಅರ್ಹತೆ ಪಡೆಯುವ ಹೊಸ್ತಿಲಲ್ಲಿದ್ದಾರೆ.
  • ಸಾಯಿರಾಮ್ ಮತ್ತು ವಿಲ್ಸನ್‌ ಅವರು 300.66 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಚೀನಾದ ಜಾಂಗ್ಯು ಕುಯಿ ಮತ್ತು ಜಾನ್‌ಹಾಂಗ್ ಕ್ಸು (381.75) ಮತ್ತು ಮಲೇಷ್ಯಾದ ಬರ್ಟ್ರಾಂಡ್ ರೋಡಿಕ್ಟ್ ಲಿಸೆಸ್ ಮತ್ತು ಎನ್ರಿಕ್ ಎಂ. ಹೆರಾಲ್ಡ್ (329.73) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
  • 1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್ ಹಾಗೂ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಿಷಭ್‌ ದಾಸ್‌ ಅವರು ಕಂಚು ಜಯಿಸಿದರು.
  • ಕೈಗಾರಿಕಾ ಉತ್ಪಾದನೆ ಏರಿಕೆ

ಸಂದರ್ಭ: ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇ 4ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

  • ಗಣಿಗಾರಿಕೆ ವಲಯದ ಚಟುವಟಿಕೆ ಉತ್ತಮವಾಗಿದೆ. ಹೀಗಾಗಿ, ಕೈಗಾರಿಕಾ ಉತ್ಪಾದನೆಯು ಪ್ರಗತಿ ಕಂಡಿದೆ ಎಂದು ಅದು ತಿಳಿಸಿದೆ. ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ಶೇ 4.3ರಷ್ಟು ಬೆಳವಣಿಗೆ ಕಂಡಿತ್ತು. 2024ರ ಆಗಸ್ಟ್‌ನಲ್ಲಿ ಉತ್ಪಾದನೆಯ ಬೆಳವಣಿಗೆಯು ಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಇರಲಿಲ್ಲ ಎಂದು ಹೇಳಿದೆ.
  • ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಗಣಿಗಾರಿಕೆ ವಲಯದ ಉತ್ಪಾದನೆ ಶೇ 4.3ರಷ್ಟು ಆಗಿತ್ತು. ಅದು ಈ ಬಾರಿ ಶೇ 6ರಷ್ಟಾಗಿದೆ. ತಯಾರಿಕಾ ವಲಯದ ಬೆಳವಣಿಗೆ ಶೇ 3.8 ಮತ್ತು ವಿದ್ಯುತ್‌ ವಲಯದ ಪ್ರಗತಿ ಶೇ 4.1ರಷ್ಟಾಗಿದೆ.
  • ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 4.3ರಷ್ಟಾಗಿತ್ತು. ಈ ಬಾರಿ ಅದು ಶೇ 2.8ಕ್ಕೆ ಇಳಿದಿದೆ.
  • ‘ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನೆ ಇಳಿಕೆ ಕಂಡಿದೆ. ಜುಲೈನಲ್ಲಿ ತಯಾರಿಕಾ ವಲಯದ ಪ್ರಗತಿ ಶೇ 6ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.8ಕ್ಕೆ ಇಳಿದಿದೆ. ಇದೇ ಬೆಳವಣಿಗೆ ಇಳಿಕೆಗೆ ಕಾರಣ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
  • ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ.

ಪ್ರಚಲಿತ ವಿದ್ಯಮಾನಗಳು: 29ನೇ ಸೆಪ್ಟೆಂಬರ್ 2025

ಯುನೆಸ್ಕೊ ಪಟ್ಟಿಗೆಛತ್ಪೂಜೆಸೇರ್ಪಡೆಗೆ ಯತ್ನ

ಸಂದರ್ಭ: ‘ಯುನೆಸ್ಕೊ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ‘ಛತ್‌ ಪೂಜೆ’ಯನ್ನು ಸೇರಿಸಲು ಸರ್ಕಾರವು ಪ್ರಯತ್ನ ನಡೆಸುತ್ತಿದೆ. ಇದು ಸಾಧ್ಯವಾದರೆ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರು ಹಬ್ಬದ ವೈಭವ ಹಾಗೂ ದೈವಿಕತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ’.

  • ಕೋಲ್ಕತ್ತದ ದುರ್ಗಾ ಪೂಜೆಯನ್ನು ಕೂಡ ಇದೇ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ’.
  • ಛತ್‌ ಪವಿತ್ರ ಹಬ್ಬವನ್ನು ದೀಪಾವಳಿ ನಂತರ ಆಚರಿಸಲಾಗುತ್ತದೆ. ಈ ದೊಡ್ಡ ಹಬ್ಬವನ್ನು ಸೂರ್ಯದೇವನಿಗೆ ಸಮರ್ಪಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಿ, ನಂತರ ಪೂಜಿಸಲಾಗುತ್ತದೆ. ದೇಶದ ವಿವಿಧೆಡೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಅದರ ವೈಭವವನ್ನು ಕಾಣಬಹುದಾಗಿದೆ’.
  • ಮದ್ಯ ಮಾರಾಟ: ಕರ್ನಾಟಕ ಮೊದಲಿಗ

ಸಂದರ್ಭ: ದೇಶದಲ್ಲಿ ತಯಾರಾದ ವಿದೇಶಿ ಮದ್ಯದ (ಐಎಂಎಫ್‌ಎಲ್‌) ಮಾರಾಟದಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚಿನ ಪಾಲು ಹೊಂದಿವೆ. ಅದರಲ್ಲೂ ಮುಖ್ಯವಾಗಿ ಐಎಂಎಫ್‌ಎಲ್‌ ಮಾರಾಟದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಶೇಕಡ 17ರಷ್ಟು ಪಾಲು ಹೊಂದಿದೆ.

  • ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಕ್ಷಿಣದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊಂದಿದ್ದ ಒಟ್ಟು ಪಾಲು ಶೇ 58ರಷ್ಟು ಆಗಿತ್ತು.
  • ದೇಶದ ಇತರ ಕಡೆಗಳಲ್ಲಿ ಆಗಿರುವ ಮಾರಾಟದ ಪ್ರಮಾಣವು ಒಟ್ಟು ಮಾರಾಟದಲ್ಲಿ ಶೇ 42ರಷ್ಟು ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
  • 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿನ ಅಬಕಾರಿ ನೀತಿಗಳ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿರಲಿಲ್ಲ. ಇದರಿಂದಾಗಿ ಇಡೀ ವರ್ಷದ ಒಟ್ಟು ಮಾರಾಟ ಕೂಡ ಕಡಿಮೆ ಆಗಿದೆ ಎಂದು ಸಿಐಎಬಿಸಿ ಮಹಾನಿರ್ದೇಶಕ ಅನಂತ ಎಸ್. ಅಯ್ಯರ್ ಹೇಳಿದ್ದಾರೆ.
  • ‘ರಾಜ್ಯಗಳು ವಿಧಿಸುವ ಸುಂಕ ಪ್ರತಿ ವರ್ಷವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಬಕಾರಿ ನೀತಿಗಳೂ ಬದಲಾಗುತ್ತವೆ. ಇವು ಅಲ್ಪಾವಧಿ ಹಾಗೂ ಮಧ್ಯಮಾವಧಿಯಲ್ಲಿ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ’ ಎಂದು ಅಯ್ಯರ್ ಹೇಳಿದ್ದಾರೆ.
  • ವಿಸ್ಕಿ, ವೊಡ್ಕಾ, ರಮ್, ಜಿನ್ ಮತ್ತು ಬ್ರ್ಯಾಂಡಿಯನ್ನು ಐಎಂಎಫ್‌ಎಲ್‌ ಹೆಸರಿನಿಂದ ಗುರುತಿಸಲಾಗುತ್ತದೆ.
  • ಕರ್ನಾಟಕದಲ್ಲಿ 2024–25ರಲ್ಲಿ ಒಟ್ಟು 6.88 ಕೋಟಿ ಕೇಸ್ಐಎಂಎಫ್ಎಲ್ಮಾರಾಟವಾಗಿದೆ. ಕರ್ನಾಟಕದ ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 6.47 ಕೋಟಿ ಕೇಸ್ಗಳಷ್ಟು ಐಎಂಎಫ್ಎಲ್ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 2.5 ಕೋಟಿ ಕೇಸ್ಗಳಷ್ಟು ಐಎಂಎಫ್ಎಲ್ಮಾರಾಟ ಆಗಿದೆ.
  • ‘ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ. ದೆಹಲಿ ಕೂಡ ಪ್ರಮುಖ ಮಾರುಕಟ್ಟೆ. ಅಲ್ಲಿ ಮಾರಾಟ ಹೆಚ್ಚಳ ಕಾಣುವುದಕ್ಕೆ ಹೊಸ ಅಬಕಾರಿ ನೀತಿಗಾಗಿ ಕಾಯುತ್ತಿದ್ದೇವೆ’ ಎಂದು ಅಯ್ಯರ್ ಹೇಳಿದ್ದಾರೆ.

ಭಾರತದಲ್ಲಿ ಜನಿಸಿದ ಚೀತಾ ಪ್ರೌಢಾವಸ್ಥೆಗೆ

ಸಂದರ್ಭ: ‘ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 16 ಚೀತಾ ಮರಿಗಳ ಪೈಕಿ ಒಂದು ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ಇದರಿಂದಾಗಿ ಚೀತಾಗಳನ್ನು ಮರುಪರಿಚಯಿಸುವ ಮೂರು ವರ್ಷಗಳ ಹಿಂದಿನ ಪ್ರಯತ್ನಕ್ಕೆ ಯಶಸ್ಸು ಸಿಗುವ ವಿಶ್ವಾಸ ಮೂಡಿದೆ.

  • 2023ರ ಮಾರ್ಚ್‌ 29ರಂದು ನಮೀಬಿಯಾದಿಂದ ತರಿಸಿದ್ದ ‘ಜ್ವಾಲಾ’ ಚೀತಾಕ್ಕೆ ಜನಿಸಿದ ‘ಮುಖಿ’ ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ವೇಳೆಗೆ ಮರಿ ಜನಿಸಿ, 915 ದಿನಗಳು ಅಥವಾ 30 ತಿಂಗಳು ಪೂರ್ಣವಾಗಲಿದೆ. ಇದರಿಂದ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ’ ಎಂದು ‘ಪ್ರಾಜೆಕ್ಟ್‌ ಚೀತಾ’ದ ನಿರ್ದೇಶಕ ಉತ್ತಮ್‌ ಕುಮಾರ್‌ ಶರ್ಮಾ ಅವರು ತಿಳಿಸಿದ್ದಾರೆ.
  • ‘ಜ್ವಾಲಾ ಜನ್ಮ ನೀಡಿದ್ದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳು  ವಿಪರೀತ  ತಾಪಮಾನದಿಂದಾಗಿ ಮೃತಪಟ್ಟಿದ್ದವು. ಮುಖಿ ಬದುಕುಳಿದು, ಚೆನ್ನಾಗಿ ಬೆಳೆದಿದೆ. ನಮ್ಮ ಪ್ರಯತ್ನಗಳು ಫಲವಾಗಿ ಪರಿವರ್ತನೆಯಾಗುತ್ತಿವೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
  • ‘ಸದ್ಯ ಭಾರತದಲ್ಲಿ 27 ಚೀತಾಗಳಿದ್ದು, 16 ಭಾರತದಲ್ಲಿಯೇ ಜನಿಸಿವೆ. ಈ ಪೈಕಿ 25 ಕುನೊದಲ್ಲಿ ಇದ್ದು, ಉಳಿದ ಮೂರು ಗಾಂಧಿ ಸಾಗರ್‌ ವನ್ಯಜೀವಿ ಅಭಯಾರಣ್ಯದಲ್ಲಿವೆ’ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.